ADVERTISEMENT

ಧರ್ಮಸ್ಥಳದಲ್ಲಿ ಶವ ಶೋಧಕ್ಕೆ ಅಲ್ಪವಿರಾಮ.. ವಿಧಾನಸಭೆಯಲ್ಲಿ ಪರಮೇಶ್ವರ ಹೇಳಿಕೆ

ಎಸ್‌ಎಫ್‌ಎಲ್ ವರದಿ ಬಳಿಕ ನೈಜ ತನಿಖೆ ಶುರು: ವಿಧಾನಸಭೆಯಲ್ಲಿ ಗೃಹ ಸಚಿವ ಪರಮೇಶ್ವರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 0:33 IST
Last Updated 19 ಆಗಸ್ಟ್ 2025, 0:33 IST
<div class="paragraphs"><p>ಧರ್ಮಸ್ಥಳ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಮೃತದೇಹಗಳ ಅವಶೇಷ ಪತ್ತೆಗಾಗಿ ಅಗೆಯುವ ದೃಶ್ಯವು ಹೊರಗಿನವರಿಗೆ ಕಾಣಿಸಬಾರದೆಂದು ಹಸಿರು ಬಣ್ಣದ ಪರದೆಯನ್ನು ಕಟ್ಟಲಾಗಿತ್ತು</p></div>

ಧರ್ಮಸ್ಥಳ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಮೃತದೇಹಗಳ ಅವಶೇಷ ಪತ್ತೆಗಾಗಿ ಅಗೆಯುವ ದೃಶ್ಯವು ಹೊರಗಿನವರಿಗೆ ಕಾಣಿಸಬಾರದೆಂದು ಹಸಿರು ಬಣ್ಣದ ಪರದೆಯನ್ನು ಕಟ್ಟಲಾಗಿತ್ತು

   

–ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್

ಬೆಂಗಳೂರು: ಧರ್ಮಸ್ಥಳದ ಆಸುಪಾಸು ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದಲ್ಲಿ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರುವವರೆಗೆ ಗುಂಡಿ ತೆಗೆದು ಶವ ಶೋಧ ಕೆಲಸವನ್ನು ನಿಲ್ಲಿಸಲಾಗುವುದು. ವರದಿ ಬಂದ ಬಳಿಕ ಮುಂದಿನ ತನಿಖೆ ಆರಂಭವಾಗಲಿದೆ ಎಂದು ಸರ್ಕಾರ ಹೇಳಿದೆ.

ADVERTISEMENT

ವಿಧಾನಸಭೆಯಲ್ಲಿ ನಿಯಮ 69ರಡಿ ಬಿಜೆಪಿಯ ವಿ.ಸುನಿಲ್‌ಕುಮಾರ್ ಅವರು ಪ್ರಸ್ತಾಪಿಸಿದ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ನಡೆದ ಚರ್ಚೆಗೆ ಗೃಹ ಸಚಿವ ಜಿ. ಪರಮೇಶ್ವರ ಅವರು ಸೋಮವಾರ ಸುದೀರ್ಘ ಉತ್ತರ ನೀಡಿದರು.

‘ಗುಂಡಿ ಅಗೆಯುವ ಕೆಲಸ ನಿಲ್ಲಿಸಲಾಗುವುದು. ಈವರೆಗೆ ಸಂಗ್ರಹಿಸಿರುವ ಅಸ್ಥಿ ಪಂಜರ, ಮೂಳೆಗಳ ಚೂರುಗಳು, ಗುಂಡಿಗಳಿಂದ ತೆಗೆದ ಲ್ಯಾಟರೈಟ್‌ ಮಣ್ಣಿನ ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ವಿಶೇಷಣೆಗೆ ಕಳುಹಿಸಲಾಗಿದೆ. ವಿಶ್ಲೇಷಣಾ ವರದಿ ಬಂದ ನಂತರವೇ ನಿಜವಾದ ತನಿಖೆ ಆರಂಭವಾಗುತ್ತದೆ’ ಎಂದರು.

‘ತನಿಖೆ ಗಂಭೀರವಾಗಿ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏನೆಲ್ಲ ತನಿಖೆ ನಡೆಸಬಹುದೋ ಅಷ್ಟನ್ನೂ ಯಾವುದೇ ಒತ್ತಡಕ್ಕೆ ಮಣಿಯದೇ, ಪಾರದರ್ಶಕವಾಗಿ ನಡೆಸಲಾಗುತ್ತಿದೆ. ತನಿಖೆಯ ದಾರಿ ತಪ್ಪಲು ಅವಕಾಶ ನೀಡದೇ, ನ್ಯಾಯೋಚಿತವಾಗಿ ನಡೆಸಲಾಗುತ್ತಿದೆ’ ಎಂದು ಹೇಳಿದರು.

‘ಎಸ್ಐಟಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಹಲವು ಕಡೆಗಳಲ್ಲಿ ಗುಂಡಿ ತೆಗೆದು ಪರೀಕ್ಷಿಸಲಾಗಿದೆ. ಹಾಗೆಂದ ಮಾತ್ರಕ್ಕೆ ಇಡೀ ಧರ್ಮಸ್ಥಳದಲ್ಲಿ ಅಗೆಯಬೇಕು ಎಂದರೆ ಅದಕ್ಕೆ ಒಪ್ಪಲು ಸಾಧ್ಯವಿಲ್ಲ. ಎಲ್ಲಿ ಏನು ಮಾಡಬೇಕು ಎಂಬುದನ್ನು ಎಸ್ಐಟಿಯೇ ತೀರ್ಮಾನ ಮಾಡುತ್ತದೆ. ಯಾವುದೇ ಬಾಹ್ಯ ಶಕ್ತಿಗಳ ಮಧ್ಯ ಪ್ರವೇಶಕ್ಕೆ ಅವಕಾಶವಿಲ್ಲ’ ಎಂದು ಪರಮೇಶ್ವರ ಅವರು ಸ್ಪಷ್ಟಪಡಿಸಿದರು.

‘ಹಲವು ಜಾಗಗಳಲ್ಲಿ ಮಣ್ಣು ಅಗೆಯಲಾಗಿದೆ. ಎರಡು ಜಾಗಗಳಲ್ಲಿ ಅಸ್ಥಿಪಂಜರ ಸಿಕ್ಕಿದೆ. ಅದನ್ನು ರಾಸಾಯನಿಕ ವಿಶ್ಲೇಷಣೆಗೆ ಕಳುಹಿಸಲಾಗಿದೆ. ಅಗೆದ ಜಾಗಗಳಲ್ಲಿ ಲ್ಯಾಟರೈಟ್‌ ಮಣ್ಣು ಇದ್ದು, ಮೂಳೆಗಳು ಕರಗಿ ಹೋಗಿರುವ ಸಾಧ್ಯತೆಯೂ ಇದೆ. ಹೀಗಾಗಿ ಮಣ್ಣಿನ ಮಾದರಿಯನ್ನು ಪಡೆದು ವಿಶ್ಲೇಷಣೆಗೆ ಕಳಿಸಲಾಗಿದೆ’ ಎಂದರು.

‘ಅಲ್ಲಿ ಘಟನೆ ಆಗಿದೆ ಎಂದು ಯಾರೂ ಹೇಳಲು ಆಗುವುದಿಲ್ಲ. ಆಗಿಲ್ಲ ಅಂತ ಯಾರಿಗೂ ಹೇಳಲು ಆಗಲ್ಲ. ಏನೂ ನಡೆದೇ ಇಲ್ಲ ಎಂದು ತನಿಖೆಯಲ್ಲಿ ಬಂದರೆ ಧರ್ಮಸ್ಥಳದ ಗೌರವ ಇನ್ನಷ್ಟು ಹೆಚ್ಚಾಗುವುದಿಲ್ಲವೇ? ಒಂದು ವೇಳೆ ಆಗಿದೆ ಅಂತ ವರದಿ ಬಂದರೆ ಅನ್ಯಾಯವಾದವರಿಗೆ ನ್ಯಾಯ ಸಿಕ್ಕಿದಂತೆ ಆಗುತ್ತದೆ. ಇದಕ್ಕೆ ರಾಜಕೀಯ ಬೆರೆಸುವುದು ಬೇಡ. ನ್ಯಾಯಕ್ಕೆ ಬಿಡೋಣ. ಸತ್ಯ ಹೊರಬರಲಿ. ಅದನ್ನು ಧರ್ಮಸ್ಥಳದವರೂ ಒಪ್ಪಬೇಕಾಗುತ್ತದೆ ಜನರೂ ಒಪ್ಪಬೇಕಾಗುತ್ತದೆ’ ಎಂದು ಪರಮೇಶ್ವರ ಹೇಳಿದರು.

‘ಎಸ್ಐಟಿ ಮಧ್ಯಂತರ ವರದಿ ನೀಡಿಲ್ಲ. ಶೀಘ್ರವಾಗಿ ತನಿಖೆ ಮಾಡಿ ಎಂದು ಹೇಳಬಹುದೇ ಹೊರತು ಇಷ್ಟೇ ದಿನಗಳಲ್ಲಿ ವರದಿ ಕೊಡಿ ಎಂದು ಹೇಳಲು ಆಗುವುದಿಲ್ಲ. ಇದೊಂದು ಅತ್ಯಂತ ಸೂಕ್ಷ್ಮ ವಿಷಯ ಆಗಿರುವುದರಿಂದ ವಿರೋಧಪಕ್ಷಗಳೂ ಸಹಕರಿಸಬೇಕು. ವೀರೇಂದ್ರ ಹೆಗ್ಗಡೆ ಅವರ ಮೇಲೆ ಬಂದಿರುವ ಆರೋಪ ಸಂಬಂಧ ಸತ್ಯ ಹೊರ ಬರಬೇಕಲ್ಲ. ನಾವು ಏನನ್ನೂ ಮುಚ್ಚಿಡುವುದಿಲ್ಲ. ಯಾರ ಒತ್ತಡಕ್ಕೂ ಮಣಿದು ಎಸ್‌ಐಟಿ ರಚನೆ ಮಾಡಿಲ್ಲ. ಧರ್ಮಸ್ಥಳ ಠಾಣೆಯಲ್ಲಿ ಈ ಪ್ರಕರಣದ ಬಗ್ಗೆ ದೂರೊಂದು ದಾಖಲಾಯಿತು. ಅದನ್ನು ಆಧರಿಸಿ, ಆರಂಭದಲ್ಲಿ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಆಧರಿಸಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಎಸ್‌ಐಟಿ ರಚಿಸುವಂತೆ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದರು. ಈ ಬಗ್ಗೆ ನಾನು ಮತ್ತು ಮುಖ್ಯಮಂತ್ರಿ ಚರ್ಚಿಸಿ ತೀರ್ಮಾನ ತೆಗೆದುಕೊಂಡೆವು’ ಎಂದರು.

‘ಸಾಕ್ಷಿ ರಕ್ಷಣೆ ಕಾಯ್ದೆ ಅನ್ವಯ ದೂರುದಾರ ಮ್ಯಾಜಿಸ್ಟ್ರೇಟ್‌ ಅವರನ್ನು ಸಂಪರ್ಕಿಸಿ, ರಕ್ಷಣೆಗೆ ಅರ್ಜಿ ಸಲ್ಲಿಸಿದ್ದ. ಮ್ಯಾಜಿಸ್ಟ್ರೇಟ್ ಅವರು ದೂರುದಾರನಿಗೆ ಯಾವ ರೀತಿ ರಕ್ಷಣೆ ಕೊಡಬೇಕು ಎಂಬುದನ್ನು ಸೂಚಿಸಿ ಆದೇಶ ನೀಡಿದ್ದಾರೆ. ಆ ಪ್ರಕಾರವೇ ಸಾಕ್ಷಿಗೆ ರಕ್ಷಣೆ ನೀಡಲಾಗಿದೆ’ ಎಂದೂ ಪರಮೇಶ್ವರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.