ಜಿ. ಪರಮೇಶ್ವರ, ಗೃಹ ಸಚಿವ
ಬೆಂಗಳೂರು: ‘ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಆರೋಪದ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಏಜೆನ್ಸಿಗೆ (ಎನ್ಐಎ) ನೀಡುವ ಪ್ರಶ್ನೆಯೇ ಇಲ್ಲ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಸ್ಪಷ್ಟಪಡಿಸಿದರು.
ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಪ್ರಕರಣದ ಕುರಿತಂತೆ ಈಗಾಗಲೇ ಎಸ್ಐಟಿ ತನಿಖೆ ನಡೆಸುತ್ತಿದೆ. ಈ ಹಂತದಲ್ಲಿ ಪ್ರಕರಣವನ್ನು ಎನ್ಐಎಗೆ ನೀಡುವ ಯೋಚನೆ ಮಾಡಿಲ್ಲ. ಅವರು ತನಿಖೆ ಮಾಡಲೇಬೇಕು ಎಂದಾದರೆ ಅವರದ್ದೇ ಆಯಾಮದಲ್ಲಿ ಮಾಡಲಿ. ನಮ್ಮ ಅಭ್ಯಂತರ ಇಲ್ಲ’ ಎಂದರು.
‘ಧರ್ಮಸ್ಥಳ ಪ್ರಕರಣವನ್ನು ಬೇರೆ ದಿಕ್ಕಿಗೆ ಕೊಂಡೊಯ್ಯುವ ಪ್ರಯತ್ನ ನಡೆದಿದೆ. ಎಸ್ಐಟಿ ತನಿಖೆ ಮುಗಿಯುವ ಮೊದಲು ಯಾವುದೇ ಸಂಸ್ಥೆಗೆ ಪ್ರಕರಣ ನೀಡುವುದಿಲ್ಲ. ಬಿಜೆಪಿಯವರ ಉದ್ದೇಶ ಏನು ಎಂಬುದು ನಮಗೆ ಸ್ಪಷ್ಟವಾಗಿಲ್ಲ. ತನಿಖೆಗೆ ಅಡ್ಡಿ ಮಾಡುವ ಪ್ರಯತ್ನ ಇರಬಹುದು’ ಎಂದು ಆರೋಪಿಸಿದರು.
‘ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಅವರು ಕೇವಲ ಧರ್ಮಸ್ಥಳದ ವಿಷಯಕ್ಕಷ್ಟೇ ಅಲ್ಲ, ಬೇರೆ ವಿಚಾರಗಳ ಬಗ್ಗೆಯೂ ಚರ್ಚೆ ಹಾಗೂ ಮಾಹಿತಿ ನೀಡಲು ಬರುತ್ತಾರೆ. ಬೇರೆಯವರು ಏನು ಮಾತನಾಡಿದ್ದಾರೆ ಎಂಬುದಕ್ಕೆ ನಾನು ಉತ್ತರ ಹೇಳಲಾರೆ. ಎಸ್ಐಟಿ ತನಿಖೆ ನಡೆಯುತ್ತಿದೆ, ಅಲ್ಲಿಂದ ವರದಿ ಬರಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.