ಧಾರವಾಡ: ಜೈನ ಭಗವತಿ ದೀಕ್ಷೆ ಪಡೆಯಲಿರುವ ಲೆಕ್ಕ ಪರಿಶೋಧಕಿ (ಸಿಎ) ಪೂನಂ ಜೈನ್ ಅವರ ಶೋಭಾಯಾತ್ರೆ ಸೋಮವಾರ ನಗರದಲ್ಲಿ ನಡೆಯಿತು.
ಇಲ್ಲಿನ ರವಿವಾರಪೇಟೆ ಜೈನ್ ಮಂದಿರದಿಂದ ಆರಂಭವಾದ ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಟಿಕಾರೆ ರಸ್ತೆಯಲ್ಲಿರುವ ಜೈನ್ ಮಂದಿರದಲ್ಲಿ ಸಂಪನ್ನಗೊಂಡಿತು. ಶೋಭಾಯಾತ್ರೆ ಉದ್ದಗಲಕ್ಕೂ ಪೂನಂ ಬಡವರಿಗೆ ತ್ಯಾಗದ ಸಂಕೇತವಾಗಿ ದವಸ–ಧಾನ್ಯ, ಹಣ ಹಂಚಿದರು.
ಬೆಂಗಳೂರಿನ ಮಹಾವೀರ ಜೈನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಪೂನಂ ಧಾರವಾಡ ಮೂಲದವರು. 2017ರಲ್ಲಿ ಮೊದಲ ಪ್ರಯತ್ನದಲ್ಲೇ ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಅವರಿಗೆ ಮಾಸಿಕ ₹60 ಸಾವಿರ ಸಂಬಳದ ನೌಕರಿಯೂ ಇತ್ತು. ಆದರೆ ಬಾಲ್ಯದಿಂದಲೇ ಅಧ್ಯಾತ್ಮದತ್ತ ಒಲವು ಹೊಂದಿದ್ದ ಪೂನಂ, ಉದ್ಯೋಗ ತೊರೆದು ಸನ್ಯಾಸಿನಿಯಾಗಲು ನಿರ್ಧರಿಸಿದರು.ಮಗಳ ನಿರ್ಧಾರಕ್ಕೆ ಪಾಲಕರೂ ಹರ್ಷ ವ್ಯಕ್ತಪಡಿಸಿದ್ದಾರೆ. ಇವರ ತಂದೆ ಜಯಂತ್ ಜೈನ್ ಕೂಡ ಲೆಕ್ಕ ಪರಿಶೋಧಕರಾಗಿದ್ದಾರೆ. ಗುಜರಾತ್ನಲ್ಲಿ ಫೆಬ್ರುವರಿ ತಿಂಗಳಲ್ಲಿ ದೀಕ್ಷೆ ಪಡೆಯಲಿದ್ದಾರೆ.
ಶ್ವೇತಾಂಬರ ಜೈನ ಸಮಾಜದ ವತಿಯಿಂದ ನಡೆದ ಶೋಭಾಯಾತ್ರೆಯಲ್ಲಿ ಪೂನಂ ಜೈನ್ ಅವರ ಜೊತೆ, ಹುಬ್ಬಳ್ಳಿಯ ಆರ್ಯನ್ ಮುಕೇಶ್ಜಿ ಮೂಲಾನಿ ಅವರ ಶೋಭಾಯಾತ್ರೆಯೂ ನಡೆಯಿತು. ವ್ಯಾಪಾರಿಯಾಗಿರುವ ಆರ್ಯನ್ ಡಿ.1ರಂದು ದೀಕ್ಷೆ ಪಡೆಯಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.