ಸಿ.ಟಿ.ರವಿ
ಬೆಂಗಳೂರು: ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೇ, ಇವಿಎಂ ಮಹಾ ಮೋಸ, ಮಹಾ ಮೋಸ ಎಂದು ವ್ಯರ್ಥಾಲಾಪ ಮಾಡುತ್ತಿರುವ ನೀವು ಹೇಳಲು ಹೊರಟಿರುವುದು ಏನು?’ ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಮಾತು ಕೇಳಿದಾಗ ‘ಯದ್ಭಾವಂ ತದ್ಭವತಿ’ ಎಂಬ ನಾಣ್ನುಡಿ ನೆನಪಾಗುತ್ತದೆ. ಅಂದ ಹಾಗೆ, ನಿಮ್ಮ ಅಳಿಯ ಶ್ರೀ ರಾಧಾಕೃಷ್ಣ, ಕಾಂಗ್ರೆಸ್ಸಿನ ನವ ಅಧಿನಾಯಕಿ ಪ್ರಿಯಾಂಕಾ ವಾದ್ರಾ, ನಿಮ್ಮ ಅಧಿನಾಯಕ ರಾಹುಲ್ ಗಾಂಧಿ ಇವರೆಲ್ಲರೂ ಇವಿಎಂ ಮೋಸದಿಂದಲೇ ಗೆದ್ದಿದ್ದಾರೆ ಎಂದೇ? ಎಂದು ಕೇಳಿದ್ದಾರೆ.
ತಮಿಳುನಾಡುನಲ್ಲಿ ಡಿಎಂಕೆ, ಕೇರಳದಲ್ಲಿ ಕಮ್ಯುನಿಸ್ಟರು, ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್, ಕರ್ನಾಟಕದಲ್ಲಿ ಕಾಂಗ್ರೆಸ್ ಇವಿಎಂ ಕಾರಣಕ್ಕೆ ಗೆದ್ದಿದ್ದಾರೆ. ‘ಇಂಡಿ’ ಒಕ್ಕೂಟ ಇಂಥಹ ಮೋಸ ಮಾಡಿಯೇ ಚುನಾವಣೆ ಗೆದ್ದಿದ್ದಾರೆ ಎಂಬುದು ನಿಮ್ಮ ಮಾತಿನ ಅರ್ಥವೇ? ಎಂದು ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.