ADVERTISEMENT

ರಾಮನಗರದಲ್ಲಿ ಚಲನಚಿತ್ರ ವಿಶ್ವವಿದ್ಯಾಲಯ; ಶಿವಮೊಗ್ಗದಲ್ಲಿ ತಾಯಿನಾಡು ಭದ್ರತಾ ವಿವಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 8:07 IST
Last Updated 5 ಜುಲೈ 2018, 8:07 IST
ಚಿತ್ರಕೃಪೆ: ಎನ್‌ಐಕೆಕೆ ಜಾಲತಾಣ
ಚಿತ್ರಕೃಪೆ: ಎನ್‌ಐಕೆಕೆ ಜಾಲತಾಣ   

ಬೆಂಗಳೂರು: ವಿಷಯವಾರು ಕಲಿಕೆಗೆ ಉತ್ತೇಜನ ನೀಡಲು ಹಾಗೂ ಉದ್ಯೋಗ ಸೃಷ್ಟಿಸಲು ರಾಜ್ಯದಲ್ಲಿ ಭಿನ್ನ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಗುರುವಾರ ಮಂಡಿಸಿದ ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ರಾಜ್ಯದಲ್ಲಿ ಸೈಬರ್‌ ಕ್ರೈಂ ಪ್ರಕರಣಗಳು ಹೆಚ್ಚಾಗಿರುವುದು ಹಾಗೂ ಸರ್ಕಾರಿ, ಖಾಸಗಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಭದ್ರತಾ ಸಿಬ್ಬಂದಿಗೆ ಅಗತ್ಯ ತರಬೇತಿ ಇಲ್ಲದಿರುವುದನ್ನು ಗಮನಿಸಿ ಶಿವಮೊಗ್ಗದಲ್ಲಿ ತಾಯಿನಾಡು ಭದ್ರತಾ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು ಎಂದು ಹೇಳಿದರು.

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೌಶಲ ಭರಿತ ಮಾನವ ಸಂಪನ್ಲೂಲ ಇದಲ್ಲದೆ, ಆ ಕ್ಷೇತ್ರ ಸೊರಗುತ್ತಿದೆ. ಹೀಗಾಗಿ ಪ್ರವಾಸೋದ್ಯಮಕ್ಕೆ ಅಗತ್ಯವಿರುವಷ್ಟು ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಉತ್ತಮ ತರಬೇತಿ ಹೊಂದಿದ, ವಿವಿಧ ಭಾಷೆಯಲ್ಲಿ ಪ್ರವಾಸಿ ಸ್ಥಳದ ಬಗ್ಗೆ ವಿವರವಾದ ಮಾಹಿತಿನೀಡಲು ಮಾರ್ಗದರ್ಶಿಗಳ ಅಗತ್ಯವಿದೆ. ಪ್ರವಾಸೋದ್ಯಮಕ್ಕೆ ಸಮಗ್ರ ತರಬೇತಿ ನೀಡಲು ಅಗತ್ಯವಾದ ವಿಶ್ವವಿದ್ಯಾಲಯವನ್ನು ಹಂಪಿಯಲ್ಲಿ ಆರಂಭಿಸುವುದಾಗಿ ತಿಳಿಸಿದರು.

ADVERTISEMENT

ಕ್ರೀಡೆ ಮತ್ತು ಅಂಗಸಾಧನೆಯನ್ನು ಒಂದು ವಿಷಯವಾಗಿ ಕಲಿಯಲು ಹೆಚ್ಚು ವಿದ್ಯಾರ್ಥಿಗಳು ಆಸಕ್ತಿ ತೋರದಿರುವುದನ್ನು ನೋಡಿ, ತುಮಕೂರಿನಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಬಜೆಟ್‌ನಲ್ಲಿ ಘೋಷಸಿದರು. ಈ ಮೂರೂ ವಿಶ್ವವಿದ್ಯಾಲಯಗಳಿಗೆ ತಲಾ ₹3 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ.

ಚಲನಚಿತ್ರ ಉದ್ಯಮವು ಬೃಹತ್‌ ಪ್ರಮಾಣದಲ್ಲಿ ಬೆಳೆಯುತ್ತಿದೆ. ಸಿನಿಮಾ ನಿರ್ದೇಶನ, ಛಾಯಾಚಿತ್ರ, ಧ್ವನಿ ಮತ್ತು ಸಂಕಲನ... ಹೀಗೆ ಈ ಕ್ಷೇತ್ರಕ್ಕೆ ಅಗತ್ಯವಿರುವ ವಿಷಯಗಳ ಕಲಿಕೆಗೆ ಖಾಸಗಿ ಸಹಭಾಗಿತ್ವದಲ್ಲಿ ₹30 ಕೋಟಿ ವೆಚ್ಚದಲ್ಲಿ ರಾಮನಗರದಲ್ಲಿ ಚಲನಚಿತ್ರ ವಿಶ್ವವಿದ್ಯಾಲಯ ತೆರೆಯಲಾಗುವುದು ಎಂದು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.