ಬೆಂಗಳೂರು: ‘ಕೋವಿಡ್ನಿಂದ ಮೃತಪಟ್ಟವರ ಶವಸಂಸ್ಕಾರಕ್ಕೆ ಸದ್ಯ ಇರುವ ಮಾರ್ಗಸೂಚಿಗಳನ್ನು ಪುನರ್ ಪರಿಶೀಲಿಸಿ, ಗೌರವಯುತ ಶವಸಂಸ್ಕಾರಕ್ಕೆ ಒತ್ತು ನೀಡಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಕೋವಿಡ್ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ಪೀಠ, ‘ಸರ್ಕಾರ ಮತ್ತು ಬಿಬಿಎಂಪಿ ಹೊರಡಿಸಿರುವ ಮಾರ್ಗಸೂಚಿ ಹಲವು ಲೋಪಗಳಿಂದ ಕೂಡಿದೆ’ ಎಂದು ಹೇಳಿತು.
‘ಧಾರ್ಮಿಕ ಸಂಪ್ರದಾಯಗಳ ಪ್ರಕಾರ ವ್ಯಕ್ತಿಯ ಶವ ಸಂಸ್ಕಾರ ನಡೆಸುವುದು ಮುಖ್ಯ. ಮೃತರ ಘನತೆ ಕಾಪಾಡುವುದು ಅತ್ಯವಶ್ಯ ಎಂಬುದನ್ನು ಪರಿಗಣಿಸಿ ಮಾರ್ಗಸೂಚಿಗಳನ್ನು ಪುನರ್ ಪರಿಶೀಲಿಸಬೇಕು ಎಂಬುದು ನಮ್ಮ ಪ್ರಾಥಮಿಕ ದೃಷ್ಟಿಕೋನ’ ಎಂದು ಪೀಠ ಅಭಿಪ್ರಾಯಪಟ್ಟಿತು.
‘ಹೀಗೆ ಮೃತಪಟ್ಟವರಿಗೆ ವಿತರಿಸುವ ಮರಣ ಪ್ರಮಾಣ ಪತ್ರಗಳಲ್ಲಿ ಏನೆಂದು ಉಲ್ಲೇಖಿಸಲಾಗುತ್ತಿದೆ ಎಂಬುದೂ ಮುಖ್ಯವಾಗುತ್ತದೆ. ಅದು ಕೂಡ ಸತ್ತವರ ಘನತೆಗೆ ಧಕ್ಕೆ ತರುವಂತೆ ಇರಬಾರದು. ಈ ಎಲ್ಲಾ ಅಂಶಗಳನ್ನು ಒಳಗೊಂಡ ಮಾರ್ಗಸೂಚಿಯನ್ನು ಸರ್ಕಾರ ಹೊರಡಿಸಬೇಕು‘ ಎಂದು ಪೀಠ ಹೇಳಿತು.
ತಜ್ಞರ ಸಮಿತಿಗೆ ವೈದ್ಯರನ್ನೂ ನೇಮಿಸಿ
‘ಕೋವಿಡ್ ಆಸ್ಪತ್ರೆಗಳ ಮೇಲೆ ನಿಗಾ ಇಡಲು ಸುಪ್ರೀಂ ಕೋರ್ಟ್ ಆದೇಶದಂತೆ ವೈದ್ಯರನ್ನು ಒಳಗೊಂಡ ತಜ್ಞರ ಸಮಿತಿ ನೇಮಿಸಬೇಕು’ ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.
‘ಈ ಸಂಬಂಧ ಅನುಸರಣಾ ವರದಿಯನ್ನು ಜುಲೈ 29ರೊಳಗೆ ಸಲ್ಲಿಸಬೇಕು’ ಎಂದುಮುಖ್ಯ ನ್ಯಾಯಮೂರ್ತಿಎಸ್.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ತಿಳಿಸಿದೆ.
‘ವೈದ್ಯರು ಮತ್ತು ಈ ಕ್ಷೇತ್ರದಪರಿಣತರನ್ನು ಒಳಗೊಂಡ ಸಮಿತಿ ರಚಿಸಬೇಕು ಎಂದು ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳಿಗೆ ಆದೇಶಿಸಿದೆ. ಸಮಿತಿ ರಚಿಸಿಸರ್ಕಾರ ಜು.23ರಂದು ಸುತ್ತೋಲೆ ಹೊರಡಿಸಿದ್ದರೂ,ಪರಿಣತ ಸದಸ್ಯರನ್ನು ಅದು ಒಳಗೊಂಡಿಲ್ಲ. ಸಮಿತಿಯನ್ನಷ್ಟೇ ನೇಮಿಸಿದರೆ ಸಾಲದು. ಅದಕ್ಕೆ ಎಲ್ಲಾ ಮೂಲಸೌಕರ್ಯ ಒದಗಿಸಬೇಕು’ ಎಂದು ಪೀಠ ತಿಳಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.