ಬೆಂಗಳೂರು: ‘ಉಪಚುನಾವಣೆಗೆ ನೀತಿ ಸಂಹಿತೆ ಜಾರಿಗೆ ಬರುವುದು ನವೆಂಬರ್ 11ರಿಂದ. ಬಿಜೆಪಿ ಸರ್ಕಾರ ಮತದಾರರನ್ನು ಸೆಳೆಯಲು 45 ದಿನ ಏನು ಬೇಕಾದರೂ ಮಾಡುವುದಕ್ಕೆಆಯೋಗವೇ ಅನುಮತಿ ನೀಡಿದಂತಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.
‘ಚುನಾವಣಾ ಆಯೋಗ ಯಾವಾಗಲೂನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕು. ಆದರೆ ಅದು ಬಿಜೆಪಿ ಏಜೆಂಟ್ ರೀತಿ ವರ್ತಿಸುತ್ತಿದೆ. ನೀತಿ ಸಂಹಿತೆಯನ್ನು ತಕ್ಷಣ ಜಾರಿಗೆ ತರಬೇಕು ಎಂದು ಆಗ್ರಹಿಸಿ ಸೋಮವಾರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಿದ್ದೇವೆ’ ಎಂದು ಅವರು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಚುನಾವಣೆಯನ್ನೇ ಮುಕ್ತವಾಗಿ ನಡೆಸಲು ಸಾಧ್ಯವಾಗದೆ ಇದ್ದ ಪಕ್ಷದಲ್ಲಿ ಆಯೋಗ ಏಕೆ ಬೇಕು? ಐ.ಟಿ, ಇ.ಡಿ, ಸುಪ್ರೀಂ ಕೋರ್ಟ್ಗಳೆಲ್ಲಸ್ವಾಯತ್ತತೆ ಕಳೆದುಕೊಂಡರೆ ನಮ್ಮ ಗತಿಯೇನು?’ ಎಂದು ಅವರು ಕೇಳಿದರು.
‘ಅನರ್ಹ ಶಾಸಕರ ಕುರಿತಂತೆ ಸಭಾಧ್ಯಕ್ಷರ ವಕೀಲರು ಬದಲಾದ ತಕ್ಷಣ ವಾದ ಬದಲಾಗಿದೆ ಅಷ್ಟೇ, ಜನತಾ ನ್ಯಾಯಾಲಯದ ಮುಂದೆ ಅನರ್ಹ ಶಾಸಕರು ಯಾವತ್ತೂ ಅನರ್ಹರೇ’ ಎಂದು ಅವರು
ಪ್ರತಿಪಾದಿಸಿದರು.
‘ಬಿಜೆಪಿ ಉರುಳಿಸಿದ ದಾಳಕ್ಕೆ ಅನರ್ಹ ಶಾಸಕರುಬಲಿಯಾಗಿದ್ದಾರೆ. ಇದರಿಂದ ಅನುಕೂಲ ಆಗಿದ್ದು ಬಿಜೆಪಿಗೆ ಮಾತ್ರ. ಅನರ್ಹರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಅವರಿಗೆ ಈಗ್ಯಾಕೆ ನಮ್ಮ ಚಿಂತೆ. ಅವರು ಎಲ್ಲಿದ್ದಾರೋ ಅಲ್ಲೇ ಚೆನ್ನಾಗಿರಲಿ, ಅಲ್ಲೇ ಮಂತ್ರಿಗಳಾಗಿರಲಿ,ಆದರೆ ಅವರನ್ನು ಯಾವುದೇ ಕಾರಣಕ್ಕೂ ಮತ್ತೆ ಪಕ್ಷಕ್ಕೆ ಕರೆದುಕೊಳ್ಳುವುದಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.