ADVERTISEMENT

ಗಣಿ ಅಕ್ರಮ ತನಿಖೆ ವಿಳಂಬಕ್ಕೆ ಅಸಮಾಧಾನ: ಸಂಪುಟ ಉಪ ಸಮಿತಿಯ ಮೊದಲ ಸಭೆ

ಸಚಿವ ಎಚ್‌.ಕೆ. ಪಾಟೀಲ ನೇತೃತ್ವದ ಸಚಿವ ಸಂಪುಟ ಉಪ ಸಮಿತಿಯ ಮೊದಲ ಸಭೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 16:28 IST
Last Updated 8 ಜುಲೈ 2025, 16:28 IST
 ಎಚ್‌.ಕೆ. ಪಾಟೀಲ
 ಎಚ್‌.ಕೆ. ಪಾಟೀಲ   

ಬೆಂಗಳೂರು: ಗಣಿಗಾರಿಕೆಯಲ್ಲಿ ನಡೆದ ಅಕ್ರಮಗಳ ಕುರಿತ ತನಿಖೆ ವಿಳಂಬವಾಗಿರುವುದಕ್ಕೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಗಣಿ ಅಕ್ರಮಗಳ ಕುರಿತಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶಿಫಾರಸು ಮಾಡಲು ರಚಿಸಲಾಗಿರುವ ಸಚಿವ ಸಂಪುಟದ ಉಪ ಸಮಿತಿಯ ಮೊದಲ ಸಭೆ ಮಂಗಳವಾರ ನಡೆಯಿತು. ಸಭೆಯಲ್ಲಿ ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಅರಣ್ಯ ಸಚಿವ ಈಶ್ವರ ಖಂಡ್ರೆ, ಹಿರಿಯ ಪೊಲೀಸ್‌ ಅಧಿಕಾರಿಗಳು ಭಾಗವಹಿಸಿದರು.

‘ಗಣಿಗಾರಿಕೆಯಲ್ಲಿ ನಡೆದ ಅಕ್ರಮಗಳ ತನಿಖೆಯ ವೇಳೆ ಹಲವು ಅಚ್ಚರಿಯ ವಿಷಯಗಳು ಬಹಿರಂಗವಾಗಿದೆ. ಆದರೆ, ತನಿಖೆಯ ವಿಚಾರಕ್ಕೆ ಸಂಬಂಧಿಸಿದಂತೆ ಒಟ್ಟು ವ್ಯವಸ್ಥೆಯಲ್ಲಿ ಆಗಿರುವ ವಿಳಂಬವನ್ನು ಒಪ್ಪಲು ಸಾಧ್ಯ ಇಲ್ಲ. ಈ ವಿಚಾರದಲ್ಲಿ ಕೆಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಬೇಕಾಗಿದೆ’ ಎಂಬ ತೀರ್ಮಾನಕ್ಕೆ ಬಂದಿರುವ ಸಮಿತಿ, ಇದೇ 11ಕ್ಕೆ ಮತ್ತೆ ಸಭೆ ಸೇರಲು ನಿರ್ಧರಿಸಿದೆ.

ADVERTISEMENT

ಅಕ್ರಮ ಗಣಿಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಉಂಟಾಗಿರುವ ನಷ್ಟವನ್ನು ವಸೂಲಿ ಮಾಡಲು ವಸೂಲಾತಿ ಆಯುಕ್ತರ ನೇಮಕ ಮತ್ತು ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ತ್ವರಿತ ನ್ಯಾಯಾಲಯ ಸ್ಥಾಪಿಸುವ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಿ ತೀರ್ಮಾನಕ್ಕೆ ಬರಲು ಕೂಡಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ವಾಣಿಜ್ಯ ತೆರಿಗೆ ವಂಚನೆ, ಅಬಕಾರಿ ಸುಂಕದ ವಂಚನೆ, ಅರಣ್ಯ ಅಭಿವೃದ್ಧಿ ಸುಂಕ ವಂಚಿಸಿದ ಅನೇಕ ಪ್ರಕರಣಗಳ ತನಿಖೆಯು ಸುದೀರ್ಘ 16 ವರ್ಷಗಳ ನಂತರವೂ ಶೈಶವಾವಸ್ಥೆಯಲ್ಲಿವೆ. 2013ರಿಂದ 2018ರ ಅವಧಿಯ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವ ಸಂಪುಟ ಉಪ ಸಮಿತಿ ಕೈಗೊಂಡ ಕ್ರಮಗಳಿಂದಾಗಿ 43ಕ್ಕೂ ಹೆಚ್ಚು ಪ್ರಕರಣಗಳ ಎಫ್‌ಐಆರ್ ಆಗಿ ತನಿಖೆ ನಡೆದು ಇನ್ನೂ ನ್ಯಾಯಾಲಯಗಳಲ್ಲಿ ವಿವಿಧ ಹಂತಗಳಲ್ಲಿ ವಿಚಾರಣೆ ನಡೆಯುತ್ತಿದೆ. 2013ರ ನ. 18ರಂದು ಒಂಬತ್ತು ಪ್ರಕರಣಗಳನ್ನು ಸರ್ಕಾರ ಸಿಬಿಐಗೆ ವಹಿಸಿತ್ತು. ಆ ಪೈಕಿ, ಆರು ಪ್ರಕರಣಗಳನ್ನು ತನಿಖೆ ಮಾಡಲು ಸಿಬಿಐ ನಿರಾಕರಿಸಿತ್ತು. ಮೂರು ಪ್ರಕರಣಗಳಲ್ಲಿ ಮಾತ್ರ ಸಿಬಿಐ ತನಿಖೆ ನಡೆದು ನ್ಯಾಯಾಲಯಗಳಿಗೆ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ. ಸಿಬಿಐ ತನಿಖೆಗೆ ನಿರಾಕರಿಸಿದ್ದ ಆರು ಪ್ರಕರಣಗಳನ್ನು ಅಕ್ರಮ ಗಣಿಗಾರಿಕೆ ತನಿಖೆಗೆ ಲೋಕಾಯುಕ್ತದಡಿ ನೇಮಿಸಿದ್ದ ವಿಶೇಷ ತನಿಖಾ ದಳಕ್ಕೆ ರಾಜ್ಯ ಸರ್ಕಾರವು ವಹಿಸಿದೆ. ಆದರೆ, ತನಿಖೆ ನಿರೀಕ್ಷಿತ ಪ್ರಗತಿ ಕಂಡಿಲ್ಲ ಎಂದು ಸಭೆಯಲ್ಲಿ ಚರ್ಚೆ ನಡೆಯಿತು.

ಕೆಲವು ಪ್ರಕರಣಗಳಲ್ಲಿ ‘ಬಿ’ ಅಂತಿಮ ವರದಿ ಸಲ್ಲಿಸಲಾಗಿದೆ. ಯಾಕೆ ಈ ವರದಿ ಸಲ್ಲಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳನ್ನು ಸಮಿತಿಯ ಸದಸ್ಯರು ಪ್ರಶ್ನಿಸಿದ್ದಾರೆ. ಎಲ್ಲ ವಿವರಗಳನ್ನು ಮುಂದಿನ ಸಭೆಯಲ್ಲಿ ಮಂಡಿಸುವುದಾಗಿ ಅಧಿಕಾರಿಗಳು ತಿಳಿಸಿದರು ಎಂದೂ ಗೊತ್ತಾಗಿದೆ. 

‘ಅಕ್ರಮ ಗಣಿಗಾರಿಕೆಯಿಂದ ಬೊಕ್ಕಸಕ್ಕೆ ಆಗಿರುವ ₹ 1.50 ಲಕ್ಷ ಕೋಟಿ ನಷ್ಟವನ್ನು ಆರೋಪಿಗಳಿಂದ ವಸೂಲು ಮಾಡಲು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಒಬ್ಬ ವಸೂಲಾತಿ ಆಯುಕ್ತರನ್ನು ತಕ್ಷಣ ನೇಮಿಸಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಚ್.​ಕೆ. ಪಾಟೀಲ ಅವರು ಇತ್ತೀಚೆಗೆ ಪತ್ರ ಬರೆದಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.