ಬೆಂಗಳೂರು: 2020ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರ ಆಯ್ಕೆಗಾಗಿ ಸರ್ಕಾರವು ಸಲಹಾ ಸಮಿತಿ ರಚಿಸಿದೆ. ಇದರ ಬೆನ್ನಲ್ಲಿಯೇ ರಂಗಭೂಮಿಯನ್ನು ಕಡೆಗಣಿಸಲಾಗಿದೆ ಎಂಬ ಆಕ್ಷೇಪವೂ ವ್ಯಕ್ತವಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅಧ್ಯಕ್ಷತೆಯಲ್ಲಿ ಸಾಹಿತ್ಯ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 25 ಮಂದಿಯನ್ನು ಸದಸ್ಯರನ್ನಾಗಿ ಸಮಿತಿಗೆ ನೇಮಕ ಮಾಡಲಾಗಿದೆ. ಇದರಲ್ಲಿ ರಂಗಭೂಮಿಯವರು ಇಲ್ಲದಿರುವುದು ಆ ಕ್ಷೇತ್ರದವರ ಅಸಮಾಧಾನಕ್ಕೆ ಕಾರಣವಾಗಿದೆ. ರಂಗಭೂಮಿ ಕ್ಷೇತ್ರದ ಸಾಧಕರನ್ನು ಬೇರೆ ಕ್ಷೇತ್ರದವರು ಗುರುತಿಸಬೇಕೆ? ರಾಜ್ಯದಲ್ಲಿ ರಂಗಭೂಮಿ ಪರಿಣಿತರು ಒಬ್ಬರೂ ಸಿಕ್ಕಿಲ್ಲವೇ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಕಲಾವಿದರು ಹಾಗೂ ರಂಗಕರ್ಮಿಗಳು ಪ್ರಶ್ನಿಸಿದ್ದಾರೆ.
‘ಜಾನಪದ, ವೃತ್ತಿ ಮತ್ತು ಹವ್ಯಾಸ ರಂಗಭೂಮಿಯಿಂದ ಕಳೆದ ವರ್ಷ 6 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿತ್ತು. ಅಕಾಡೆಮಿಗಳ ಅಧ್ಯಕ್ಷರ ಜತೆಗೆ ವಿಷಯ ತಜ್ಞರು ಕೂಡ ಇದ್ದಲ್ಲಿ ಉತ್ತಮ ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಆದರೆ, ಈ ಬಾರಿ ರಂಗಭೂಮಿ ಕ್ಷೇತ್ರದಿಂದ ವಿಷಯ ತಜ್ಞರು ಇಲ್ಲದಿರುವುದು ಬೇಸರವನ್ನುಂಟು ಮಾಡಿದೆ’ ಎಂದು ಕರ್ನಾಟಕ ನಾಟಕ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಜೆ. ಲೋಕೇಶ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.