ADVERTISEMENT

ಇ.ಡಿ. ಸಮನ್ಸ್‌ ರದ್ದತಿ ಕೋರಿ ಮೇಲ್ಮನವಿ ಸಲ್ಲಿಸಿದ ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 13:03 IST
Last Updated 9 ಸೆಪ್ಟೆಂಬರ್ 2019, 13:03 IST
   

ಬೆಂಗಳೂರು: ಜಾರಿ ನಿರ್ದೇಶನಾಲಯ (ಇ.ಡಿ) ಜಾರಿಗೊಳಿಸಿದ್ದ ಸಮನ್ಸ್ ರದ್ದು ಕೋರಿ ಶಾಸಕ ಡಿ.ಕೆ. ಶಿವಕುಮಾರ್‌ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಶಿವಕುಮಾರ್ ಪರ ವಕೀಲರು ಸೋಮವಾರಮೇಲ್ಮನವಿ ಸಲ್ಲಿಸಿದರು.‌

ತುರ್ತು ವಿಚಾರಣೆ ನಡೆಸುವಂತೆ ನ್ಯಾಯಪೀಠಕ್ಕೆ ವಕೀಲರುಮನವಿ ಮಾಡಿದರು.ಇದೇ 11ಕ್ಕೆ ವಿಚಾರಣೆ ನಡೆಸುವುದಾಗಿ ವಿಭಾಗೀಯ ನ್ಯಾಯಪೀಠ ಹೇಳಿದೆ.

ADVERTISEMENT

‘ಆದಾಯ ತೆರಿಗೆ ಇಲಾಖೆ, ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಇದರನ್ವಯ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಸಿಐಆರ್ (ಪೊಲೀಸ್ ಎಫ್‌ಐಆರ್‌ಗೆ ಸಮಾನವಾದ–ಜಾರಿ ಪ್ರಕರಣ ಮಾಹಿತಿ ವರದಿ) ದಾಖಲಿಸಿದ್ದಾರೆ. ಹೀಗಾಗಿ, ಈ ಹಂತದಲ್ಲಿ ಆರೋಪಿಗಳ ಅರ್ಜಿಗಳು ವಿಚಾರಣೆಗೆ ಅರ್ಹವಾಗಿಲ್ಲ’ ಎಂದು ಏಕಸದಸ್ಯ ಪೀಠ ತೀರ್ಪಿನಲ್ಲಿ ತಿಳಿಸಿತ್ತು.

ನವದೆಹಲಿ ವರದಿ: ಬಂಧಿತ‌ ಡಿ.ಕೆ. ಶಿವಕುಮಾರ್ ಕುಟುಂಬಸದಸ್ಯರ ಭೇಟಿ ವೇಳೆ ತನಿಖಾಧಿಕಾರಿ ಇರಕೂಡದು ಎಂಬ ಮನವಿಯನ್ನು ದೆಹಲಿ ಜಾರಿ ನಿರ್ದೇಶನಾಲಯ (ಇ.ಡಿ.) ವಕೀಲರು ವಿಶೇಷ ನ್ಯಾಯಾಲಯದ ಎದುರು ಸಲ್ಲಿಸಿದ್ದಾರೆ.

ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಅವರ ಪೀಠದೆದುರು ಸೋಮವಾರ ಮಧ್ಯಾಹ್ನ ನಡೆದ ವಿಚಾರಣೆ ವೇಳೆ ಈ ಮನವಿ ಸಲ್ಲಿಸಲಾಗಿದೆ.

ಶಿವಕುಮಾರ್‌ ಸ್ವಯಂ ಮುಖ ಕ್ಷೌರಕ್ಕೆ ನೀಡುವಂತೆ, ವಿಚಾರಣೆಯ ವೇಳೆ ಪೆನ್‌, ಪೇಪರ್‌ ಬಳಕೆಗೂ ಅವಕಾಶ‌ ಕೋರಿ ಕೋರ್ಟ್ ಎದುರು ಶಿವಕುಮಾರ್ ಪರ ವಕೀಲಮಯಾಂಕ್ ಜೈನ್ ವಾದ ಮಂಡಿಸಿದ್ದಾರೆ. ಈ‌ ಬಗ್ಗೆ ಕೋರ್ಟ್ ಇನ್ನಷ್ಟೇಆದೇಶ ಹೊರಡಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.