
ಬೆಳಗಾವಿ (ಸುವರ್ಣಸೌಧ): ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆಯಲ್ಲಿ ಇರುವ ಮಧ್ಯೆಯೇ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ತಮ್ಮ, ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಡಿ.ಕೆ. ಶಿವಕುಮಾರ್ ಅವರನ್ನು ‘ಮುಖ್ಯಮಂತ್ರಿ’ ಎಂದು ಸಂಬೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ ಚರ್ಚೆಗೆ ಗ್ರಾಸವಾಗಿದೆ.
ಇಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಭಾಗವಹಿಸಲು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಮಂಗಳವಾರ ಬಂದ ಡಿ.ಕೆ. ಶಿವಕುಮಾರ್ ಅವರನ್ನು ಚನ್ನರಾಜ ಹಟ್ಟಿಹೊಳಿ ಅವರು ಸ್ವಾಗತಿಸಿದರು. ಈ ಕುರಿತಂತೆ ತಮ್ಮ ‘ಎಕ್ಸ್’ ಖಾತೆಯಲ್ಲಿ ‘ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್’ ಎಂದು ಉಲ್ಲೇಖಿಸಿ ಪೋಸ್ಟ್ ಮಾಡಿದ್ದರು.
ಡಿ.ಕೆ. ಶಿವಕುಮಾರ್ ಅವರನ್ನು ‘ಮುಖ್ಯಮಂತ್ರಿ’ ಎಂದು ಉಲ್ಲೇಖಿಸಿದ್ದು ಗಮನಕ್ಕೆ ಬಂದ ಕೂಡಲೇ ಆ ಪೋಸ್ಟ್ ಅಳಿಸಿ ಹಾಕಿದ ಚನ್ನರಾಜ ಹಟ್ಟಿಹೊಳಿ, ‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್’ ಎಂದು ಉಲ್ಲೇಖಿಸಿ ಹೊಸದಾಗಿ ಪೋಸ್ಟ್ ಮಾಡಿದ್ದಾರೆ. ಅಷ್ಟರಲ್ಲಾಗಲೇ ಚನ್ನರಾಜ ಹಟ್ಟಿಹೊಳಿ ಅವರ ಪೋಸ್ಟ್ ಕಾಂಗ್ರೆಸ್ನಲ್ಲಿ ಚರ್ಚೆಯ ವಿಷಯವಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ಚನ್ನರಾಜ ಹಟ್ಟಿಹೊಳಿ, ‘ನಮ್ಮ ಎಕ್ಸ್ ಖಾತೆಯನ್ನು ಬೇರೆಯವರ ಮೂಲಕ ಹ್ಯಾಂಡಲ್ ಮಾಡಿಸಲಾಗುತ್ತದೆ. ಡಿ.ಕೆ. ಶಿವಕುಮಾರ್ ಅವರನ್ನು ಸ್ವಾಗತಿಸಿದ ಪೋಸ್ಟ್ ಮಾಡುವಾತ ನಿದ್ದೆಗಣ್ಣಿನಲ್ಲಿದ್ದ ಎನಿಸುತ್ತದೆ. ಹೀಗಾಗಿ ಟೈಪಿಂಗ್ ತಪ್ಪಾಗಿದೆ. ಅದನ್ನು ಅರಿತ ಕೂಡಲೇ ಸರಿಪಡಿಸಲಾಗಿದೆ’ ಎಂದರು.
‘ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇಲ್ಲವೆ’ ಎಂಬ ಪ್ರಶ್ನೆಗೆ ‘ನನಗಷ್ಟೇ ಅಲ್ಲದೆ ಇಡೀ ರಾಜ್ಯದ ಜನರಿಗೆ ಆ ಆಸೆಯಿದೆ. ಅದನ್ನೆಲ್ಲ ಈಗ ಚರ್ಚೆ ಮಾಡುವುದಿಲ್ಲ’ ಎಂದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ‘ಚನ್ನರಾಜ ಹಟ್ಟಿಹೊಳಿ ಅವರ ‘ಎಕ್ಸ್’ ಖಾತೆಯಲ್ಲಿ ಆಗಿರುವ ಲೋಪ ಅರಿಯದೇ ನಡೆದಿರುವುದು. ನಾವು ಪೋಸ್ಟ್ ಮಾಡುವುದಿಲ್ಲ. ಅದಕ್ಕೆ ಪ್ರತ್ಯೇಕ ತಂಡವಿರುತ್ತದೆ. ಅವರು ಪೋಸ್ಟ್ ಮಾಡುವಾಗ ಅಚಾತುರ್ಯವಾಗಿದೆ. ನಾನು ಮತ್ತು ನನ್ನ ಸಹೋದರ ಪಕ್ಷದ ಶಿಸ್ತಿನ ಸಿಪಾಯಿಗಳು’ ಎಂದರು.
–––––––––––––––––––––––––
‘ಬಾಯಿ ಮುಚ್ಚಿಕೊಂಡು ಇರಬೇಕು’
‘ಅಧಿವೇಶನ ಮುಗಿಯುವವರೆಗೆ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾರೂ ಮಾತನಾಡಬಾರದು ಮತ್ತು ಬಾಯಿ ಮುಚ್ಚಿಕೊಂಡು ಇರಬೇಕು’ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸ್ವಪಕ್ಷೀಯರ ವಿರುದ್ಧ ಹರಿಹಾಯ್ದರು.
‘ಅಧಿವೇಶನ ಮುಗಿಯುವವರೆಗೆ ಬಾಯಿ ಮುಚ್ಚಿಕೊಂಡು ಇರಿ, ನಂತರ ಬೇಕಾದರೆ ನಿಮ್ಮ ಚಟ ತೀರಿಸಿಕೊಳ್ಳಿ. ನಾನು ಈ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡುತ್ತೇನೆ. ಪಕ್ಷದ ಆಂತರಿಕ ವಿಚಾರಗಳನ್ನು ಬಹಿರಂಗಪಡಿಸುವವರಿಗೆ ರಾಷ್ಟ್ರೀಯ ನಾಯಕರು ನೋಟಿಸ್ ಕೊಡಬೇಕು’ ಎಂದು ಆಗ್ರಹಿಸಿದರು.
‘ಹಿರಿಯರನ್ನು ಸಂಪುಟದಿಂದ ಬಿಟ್ಟು ನಮಗೆ ಅವಕಾಶ ಕೊಡಿ ಎಂದು ಕೇಳುತ್ತೇನೆ. ಮುಖ್ಯಮಂತ್ರಿ ಬದಲಾವಣೆ ಎಂದು ನಮ್ಮವರೇ ಕೆಲವರು ಮಾತನಾಡುತ್ತಾರೆ. ಬಿಜೆಪಿಯವರು ಉರಿಯುವ ಬೆಂಕಿಗೆ ತುಪ್ಪ ಸುರಿದು ಮಜಾ ತೆಗೆದುಕೊಳ್ಳುತ್ತಿದ್ದಾರೆ’ ಎಂದರು.
‘2028ರವರೆಗೂ ಸಿ.ಎಂ ಸ್ಥಾನದಲ್ಲಿ ಸಿದ್ದರಾಮಯ್ಯ’
‘2028ರವರೆಗೂ ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರೇ ಇರುತ್ತಾರೆಂದು ನಾನು ಅಂದುಕೊಂಡಿದ್ದೇನೆ’ ಎಂದು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ಮುಖ್ಯಮಂತ್ರಿ ಕುರ್ಚಿ ಖಾಲಿಯಾದಾಗ ಹೊಸ ಮುಖ್ಯಮಂತ್ರಿಯ ಮಾತು ಬರುತ್ತದೆ. ನಮ್ಮಲ್ಲಿ ಹೈಕಮಾಂಡ್ ಇದೆ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇದ್ದಾರೆ. ಏನೇ ಇದ್ದರೂ ಹೈಕಮಾಂಡ್ ತೀರ್ಮಾನ ಮಾಡಲಿದೆ’ ಎಂದರು.
ಕಿಂಗ್ ಈಸ್ ಅಲೈವ್: ಬೈರತಿ ಸುರೇಶ್
‘ಸಿದ್ದರಾಮಯ್ಯ ಅವರೇ ನಮ್ಮ (ಅಹಿಂದ) ನಾಯಕರು. ಅವರು ಇನ್ನೂ ಇದ್ದಾರೆ. ಟೈಗರ್ ಜಿಂದಾ ಹೈ ಮತ್ತು ಕಿಂಗ್ ಇಸ್ ಅಲೈವ್. ಹೀಗಾಗಿ ಸರ್ಕಾರವನ್ನಾಗಲಿ ಅಥವಾ ಅಹಿಂದ ಹೋರಾಟವನ್ನಾಗಲೀ ಮುಂದೆ ತೆಗೆದುಕೊಂಡು ಹೋಗುವವರು ಯಾರು ಎಂದು ಸಿದ್ದರಾಮಯ್ಯ ಅವರೇ ತೀರ್ಮಾನಿಸುತ್ತಾರೆ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು.
ಮುಂದಿನ ಅಹಿಂದ ನಾಯಕ ಯಾರು ಎಂಬ ಬಗ್ಗೆ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಸತೀಶ ಜಾರಕಿಹೊಳಿ ಹೆಸರು ಹೇಳಿದ್ದರು. ಈ ಹೇಳಿಕೆ ಸೇರಿದಂತೆ ಕೆಲ ನಾಯಕರ ಹೇಳಿಕೆಗಳಿಗೆ ಬೈರತಿ ಸುರೇಶ್ ಪ್ರತಿಕ್ರಿಯಿಸಿದರು. ‘ಕಾಂಗ್ರೆಸ್ ಪಕ್ಷದೊಳಗೆ ನಾಯಕತ್ವ ಬದಲಾವಣೆಯ ಚರ್ಚೆಯೇ ಇಲ್ಲ’ ಎಂದೂ ಅವರು ಹೇಳಿದರು. ‘ಮುಂದಿನ ನಾಯಕತ್ವ ಸೇರಿದಂತೆ ಉಳಿದೆಲ್ಲವನ್ನೂ ಸಿದ್ದರಾಮಯ್ಯ ಹೈಕಮಾಂಡ್ ನಾಯಕರು ತೀರ್ಮಾನಿಸುತ್ತಾರೆ. ಅದರಲ್ಲೂ ಸರ್ಕಾರ ಅಥವಾ ಅಹಿಂದ ಹೋರಾಟವನ್ನು ಮುಂದೆ ತೆಗೆದುಕೊಂಡು ಹೋಗುವವರು ಯಾರು ಎಂದು ಸಿದ್ದರಾಮಯ್ಯ ಅವರೇ ತೀರ್ಮಾನಿಸಬೇಕು’ ಎಂದರು.
‘ನನ್ನ ಹೇಳಿಕೆ ಸಿಎಲ್ಪಿಯಲ್ಲಿ ಪ್ರಸ್ತಾಪಿಸಲಿ’
‘ನನಗೆ ಗೊತ್ತಿರುವ ಹಾಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆಯಲ್ಲಿ ಈ ವಿಚಾರ ಚರ್ಚೆ ಆಗುವುದಿಲ್ಲ. ಒಂದು ವೇಳೆ ಯಾರಾದರೂ ಶಾಸಕರು ಈ ಬಗ್ಗೆ ಪ್ರಸ್ತಾಪಿಸುವುದಾದರೆ ಪ್ರಸ್ತಾಪಿಸಲಿ’ ಎಂದು ವಿಧಾನಪರಿಷತ್ತಿನ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು. ‘ನಾಯಕತ್ವದ ವಿಚಾರವಾಗಿ ನಿಮ್ಮ ಹೇಳಿಕೆಗೆ ಕೆಲವು ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರಲ್ಲ’ ಎಂದು ಯತೀಂದ್ರ ಅವರ ಗಮನಸೆಳೆದಾಗ ‘ನಾನು ನಿನ್ನೆಯೇ ಹೇಳಬೇಕಾದ್ದನ್ನು ಹೇಳಿದ್ದೇನೆ. ಮತ್ತೆ ಯಾವುದರ ಬಗ್ಗೆಯೂ ಚರ್ಚೆ ಮಾಡುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.