ಬೆಂಗಳೂರು: ‘ಲಾಕ್ಡೌನ್ ತೆರವುಗೊಳಿಸಿದ ಬಳಿಕ ರಾಜ್ಯದಾದ್ಯಂತ ಪ್ರವಾಸ ಕೈಗೊಂಡು, ಸಂಕಷ್ಟಕ್ಕೆ ಸಿಲುಕಿರುವ ಎಲ್ಲ ವರ್ಗ, ಧರ್ಮದ ಜನರ ಅಹವಾಲು ಆಲಿಸುತ್ತೇನೆ. ಅವರ ಧ್ವನಿಯಾಗುತ್ತೇನೆ’ ಎಂದು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಮೇ 31ರಂದು ಪಕ್ಷದ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಲು ನಿರ್ಧರಿಸಿದ್ದೆ. ಆದರೆ, ಅಂದು ಕರ್ಫ್ಯೂ (ಭಾನುವಾರ) ಇರುವುದರಿಂದ ಬೇರೊಂದು ದಿನ ನಿಗದಿಪಡಿಸುತ್ತೇನೆ’ ಎಂದರು.
‘ನನ್ನ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ಪ್ರತಿ ಗ್ರಾಮ ಪಂಚಾತಿಯಲ್ಲಿ, ವಾರ್ಡ್ನಲ್ಲಿ ಹಮ್ಮಿಕೊಳ್ಳಲಾಗುವುದು. ನಾನು ಧ್ವಜ ಸ್ವೀಕರಿಸಿ, ಜ್ಯೋತಿ ಹಚ್ಚಿದ ಬಳಿಕ 7,200 ಕಡೆಗಳಲ್ಲಿ ಕಾರ್ಯಕ್ರಮ ಮಾಡುತ್ತೇವೆ. ಸಂವಿಧಾನದ ಪೀಠಿಕೆ ಓದಿ, ಪ್ರತಿಜ್ಞೆ ಸ್ವೀಕರಿಸಲಾಗುವುದು’ ಎಂದರು.
ಕೇಂದ್ರ– ರಾಜ್ಯ ಸರ್ಕಾರದ ವೈಫಲ್ಯ: ಕೊರೊನಾದಿಂದ ಸಂಕಷ್ಟಕ್ಕೀಡಾದವರ ಸಮಸ್ಯೆ ಪರಿಹರಿಸಲು ಕೇಂದ್ರ– ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ’ ಎಂದರು.
‘ಮುಖ್ಯಮಂತ್ರಿ ಘೋಷಿಸಿರುವ ₹ 1,610 ಕೋಟಿ ಪ್ಯಾಕೇಜ್ ಕೂಡಾ ಈವರೆಗೂ ಯಾರಿಗೂ ತಲುಪಿಲ್ಲ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ನಾಲ್ಕೂವರೆ ಲಕ್ಷ ಮತದಾರರಿದ್ದು, ಮೂರು ಲಕ್ಷಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. ಸರ್ಕಾರ ಈ ಕ್ಷೇತ್ರಕ್ಕೆ ನೀಡಿದ ಆಹಾರ ಕಿಟ್ಗಳು ಕೇವಲ ಮೂರು ಸಾವಿರ.ನಾವು (ಕಾಂಗ್ರೆಸ್) ಅಧಿಕಾರದಲ್ಲಿದ್ದರೆ ಇಷ್ಟು ಹೊತ್ತಿಗಾಗಲೇ ಜನರ ಮನೆ ಬಾಗಿಲಿಗೆ ಚೆಕ್ ತಲುಪುತಿತ್ತು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.