ಬೆಳಗಾವಿ: ‘ಇಬ್ಬರು ಪ್ರೀತಿಸಿ ಮದುವೆಯಾದಾಗ ಬೇರೊಬ್ಬರು ದೂರು ನೀಡಿದರೆ ತನಿಖೆ ಮಾಡುತ್ತಾರಂತೆ. ತನಿಖೆ ಮುಗಿದ ನಂತರ ಇಬ್ಬರನ್ನೂ ಬೇರೆ ಮಾಡುತ್ತೀರಾ? ಬಿಜೆಪಿಯವರು ಅಂಬೇಡ್ಕರ್ ಹಾಗೂ ಬಸವಣ್ಣನವರ ತತ್ವ ಪಾಲನೆ ವಿಚಾರವಾಗಿ ಉತ್ತರಿಸಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬುಧವಾರ ಸವಾಲೆಸೆದರು.
ಮತಾಂತರ ನಿಷೇಧ ಮಸೂದೆ ಮಂಡಿಸಿದ ಬಗ್ಗೆ ಇಲ್ಲಿ ಪ್ರತಿಕ್ರಿಯಿಸಿದ ಅವರು, ‘ಶರಣರ ಸಂಸ್ಕೃತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿಯಿಂದ ದ್ರೋಹವಾಗಿದೆ. ಮಠಾಧಿಪತಿಗಳು ಕರೆ ಮಾಡಿ, ಏನಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸುತ್ತಿದ್ದಾರೆ’ ಎಂದರು.
‘ಪರಿಶಿಷ್ಟ ಜಾತಿ, ಪಂಗಡದ ಅನೇಕರು ಬೌದ್ಧ ಧರ್ಮ ಪಾಲಿಸುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಬೌದ್ಧ ಧರ್ಮ ನಂಬಿದ್ದಾರೆ. ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಎಂದರೆ ಏನು? ಜೈನರ ಕೈಗೆ ಧರ್ಮಸ್ಥಳದ ನಿಯಂತ್ರಣ ಏಕೆ ಹೋಯಿತು? ಅವರು ಮಂಜುನಾಥ ಸ್ವಾಮಿ ಆರಾಧಿಸುತ್ತಾರೆ. ಇದು ಅವರವರ ಇಚ್ಛೆ’ ಎಂದರು.
‘ಬಿಟ್ ಕಾಯಿನ್, ಶೇ. 40 ಕಮಿಷನ್, ಕೋವಿಡ್ ಪರಿಹಾರ ನೀಡದಿರುವುದು, ರೈತರಿಗೆ ಪರಿಹಾರ ಸಿಗದ ವಿಚಾರ, ಉತ್ತರ ಕರ್ನಾಟಕದ ಸಮಸ್ಯೆಗಳನ್ನು ನಾವು ಚರ್ಚಿಸುವ ಮೊದಲು ಮಸೂದೆ ಮಂಡನೆಗೆ ಆತುರ ಏನಿತ್ತು? ಚುನಾವಣೆ ವೈಫಲ್ಯ ಮುಚ್ಚಿಕೊಳ್ಳಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ದೇಶದಲ್ಲಿ ಕ್ರೈಸ್ತರ ಜನಸಂಖ್ಯೆ ಶೇ 2ರಷ್ಟಿದೆ. ಅವರ ಶಿಕ್ಷಣ ಸಂಸ್ಥೆಗೆ ಮಕ್ಕಳನ್ನು ಏಕೆ ಸೇರಿಸುತ್ತಾರೆ? ನೂರಾರು ಮಂದಿ ಅರ್ಜಿ ಹಾಕುತ್ತಿದ್ದಾರೆ. ಈವರೆಗೆ ಯಾವುದಾದರೂ ಬಲವಂತದ ಮತಾಂತರ ದೂರು ದಾಖಲಾಗಿದೆಯಾ? ಇದು ಕೇವಲ ಒಂದು ಸಮುದಾಯವನ್ನು ಗುರಿಯಾಗಿಸಿ ತೊಂದರೆ ನೀಡುವ ಪ್ರಯತ್ನವಾಗಿದೆ’ ಎಂದು ಅವರು ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.