ADVERTISEMENT

ಬಟ್ಟೆ ಬಿಚ್ಚಿಸಿ ಜೈಲಿಗೆ ಹಾಕಿದರೂ ಪಾದಯಾತ್ರೆ ನಿಶ್ಚಿತ: ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 0:56 IST
Last Updated 9 ಜನವರಿ 2022, 0:56 IST
   

ಕನಕಪುರ (ರಾಮನಗರ): ‘ಅಧಿಕಾರಿಗಳಿಗೆ ಒತ್ತಡ ಹಾಕಿ, ಸೋಂಕಿತರ ಸಂಖ್ಯೆಯನ್ನು ಬೇಕಂತಲೇ ಏರಿಕೆ ಮಾಡಿ ನಮ್ಮ ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆದಿದೆ. ಈ ಮೂಲಕ ನಮಗೆ ಕೆಟ್ಟ ಹೆಸರು ತರುವ ಪ್ರಯತ್ನ ನಡೆದಿದೆ. ನನ್ನನ್ನು ಬಂಧಿಸಿ ಬಟ್ಟೆ ಬಿಚ್ಚಿಸಿ ಜೈಲಿಗೆ ಹಾಕಿದರೂ ಪಾದಯಾತ್ರೆ ಮಾಡುವುದು ನಿಶ್ಚಿತ’ ಎಂದುಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಕನಕಪುರದ ತಮ್ಮ ನಿವಾಸದಲ್ಲಿ ಶನಿವಾರ ರಾತ್ರಿ ಪಕ್ಷದ ಶಾಸಕಾಂಗ ಸದಸ್ಯರ ಸಭೆ ಬಳಿಕ ಪತ್ರಕರ್ತರ ಜೊತೆ ಅವರು ಮಾತನಾಡಿದರು.

‘ಅಂತರ ಕಾಪಾಡಿಕೊಳ್ಳುತ್ತೇವೆ. ಸ್ಯಾನಿಟೈಸರ್ ಬಳಕೆ ಮಾಡುತ್ತೇವೆ. ನೂರಾರು ವೈದ್ಯರ ಸೇವೆ ಪಡೆಯುತ್ತಿದ್ದೇವೆ. ನಾನು, ಸಿದ್ದರಾಮಯ್ಯ ಸೇರಿ ಮೈಸೂರಿನಲ್ಲಿ ಮಾಡಿದ್ದ ಘೋಷಣೆಗೆ ಈಗಲೂ ಬದ್ಧರಾಗಿದ್ದೇವೆ’ ಎಂದರು.

ADVERTISEMENT

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ನಾವು ಮೂರನೇ ಅಲೆ ಪ್ರಾರಂಭಕ್ಕೂ ಮುನ್ನವೇ ಹೋರಾಟದ ರೂಪರೇಷೆ ಸಿದ್ಧಪಡಿಸಿದ್ದೆವು. ಆದರೆ, ಕೋವಿಡ್ ಕರ್ಫ್ಯೂ ಹೆಸರಿನಲ್ಲಿ ರಾಜ್ಯ ಸರ್ಕಾರ ಅಧಿಕಾರ ದುರ್ಬಳಕೆ ನಡೆಸಿದೆ. ಹೋರಾಟ ಹತ್ತಿಕಲು ಬಿಜೆಪಿ ನಾನಾ ರೀತಿಯಲ್ಲಿ ಷಡ್ಯಂತ್ರ ಮಾಡುತ್ತಿದೆ. ನಾವು ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ. ಕೋವಿಡ್ ನಿಯಮ ಪಾಲನೆ ಮಾಡುತ್ತಿರುವ ಬಗ್ಗೆ ಪರಿಶೀಲಿಸಿ, ಪೊಲೀಸರು ಕೇಸ್ ಹಾಕಬಹುದು ಅಷ್ಟೆ. ನಿಯಮ ಪಾಲಿಸಿದರೆ ಕೇಸ್ ಏಕೆ ಹಾಕುತ್ತಾರೆ’ ಎಂದು ಪ್ರಶ್ನೆಗೆ ಉತ್ತರಿಸಿದರು.

‘ಮೇಕೆದಾಟು ಹೋರಾಟ ಕುಡಿಯುವ ನೀರಿನ ಯೋಜನೆ. ಇದಕ್ಕೆ ಮೊದಲ ಆದ್ಯತೆ ನೀಡುವಂತೆ ಸುಪ್ರಿಂ ಕೋರ್ಟ್ ಸಹ ಹೇಳಿದೆ. ಇದು ನೀರಾವರಿ ಯೋಜನೆ ಅಲ್ಲ. ಈ ಯೋಜನೆಯಿಂದ ಬೆಂಗಳೂರಿಗರಿಗೆಮುಂದಿನ 50 ವರ್ಷ ಕಾಲ ನೀರಿನ ಬವಣೆ ಬರುವುದಿಲ್ಲ. ಎರಡೂವರೆ ಕೋಟಿ ಜನರಿಗೆ ಅನುಕೂಲವಾಗಲಿದೆ. ನಾವು ಇಲ್ಲಿ ರಾಜಕೀಯ ಮಾಡುತ್ತಿಲ್ಲ. ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.