
ಡಿ.ಕೆ. ಶಿವಕುಮಾರ್ ಹಾಗೂ ಬಿ.ವೈ ವಿಜಯೇಂದ್ರ
ಬೆಳಗಾವಿ: ‘ಕಾಂಗ್ರೆಸ್ ಹೈ ಕಮಾಂಡ್ಗಾಗಿ ರಾಜ್ಯ ಸರ್ಕಾರದ ಖಜಾನೆ ಖಾಲಿ ಮಾಡಿದ್ದಾರೆ’ ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಮಾತಿಗೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗರಂ ಆದರು. ‘ವಿಜಯೇಂದ್ರ ಒಬ್ಬ ಕಲೆಕ್ಷನ್ ಕಿಂಗ್’ ಎಂದೂ ಹರಿಹಾಯ್ದರು.
ನಗರದಲ್ಲಿ ಗುರುವಾರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ವಿಜಯೇಂದ್ರಗೆ ಸದನ ಅನುಭವವೂ ಇಲ್ಲ, ಜೀವನಾನುಭವವೂ ಇಲ್ಲ. ಮೊದಲು ಸರಿಯಾಗಿ ಸದನಕ್ಕೆ ಬಂದು ಪ್ರಶ್ನೆ ಮಾಡಲಿ. ತಪ್ಪಿಸಿಕೊಂಡು ಎಲ್ಲೆಲ್ಲೋ ಓಡಿ ಹೋಗುವುದಲ್ಲ. ಯಾವ ಖಜಾನೆ ಖಾಲಿ ಆಗಿದೆ, ಯಾವುದು ತುಂಬಿದೆ ಎಂದು ಉತ್ತರ ಕೊಡುತ್ತೇವೆ’ ಎಂದರು.
‘ವಿಜಯೇಂದ್ರ ಒಬ್ಬ ದೊಡ್ಡ ಕಲೆಕ್ಷನ್ ಮಾಸ್ಟರ್. ಅವರಪ್ಪನ ಹೆಸರು ಕೆಡಿಸಿದ್ದು ವಿಜಯೇಂದ್ರ. ಅವರ ‘ಟ್ರಾನ್ಸ್ಫರ್ ಕಲೆಕ್ಷನ್’ ಎಷ್ಟು ಎಂದು ಬಿಚ್ಚಿ ಇಡಬೇಕಾ?’ ಎಂದು ಮರು ಪ್ರಶ್ನಿಸಿದರು.
ಪ್ರಶ್ನೆಗೆ ಉತ್ತರಿಸಿದ್ದೇವೆ
‘ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸರಿಯಾಗಿ ಚರ್ಚಿಸಿಲ್ಲ ಎಂಬ ವಿರೋಧ ಪಕ್ಷಗಳ ಆರೋಪ ಸರಿಯಲ್ಲ. ಮಹದಾಯಿ, ಮತ್ತಿ ನೀರಾವರಿ ಯೋಜನೆಗಳ ಕುರಿತು ನಾನು ಉತ್ತರಿಸಿದ್ದೇನೆ. ಅವರ ಪ್ರಶ್ನೆಗಳೂ ಏನೇ ಇದ್ದರೂ ಕೇಳಲಿ. ಮುಖ್ಯಮಂತ್ರಿ, ಕಂದಾಯ ಸಚಿವರು ಉತ್ತರ ನೀಡುತ್ತಾರೆ’ ಎಂದು ಪ್ರತಿಕ್ರಿಯಿಸಿದರು.
‘ಈ ಭಾಗದ ಕಬ್ಬು ಬೆಳೆಗಾರರಿಗೆ ನಮ್ಮ ಸರ್ಕಾರ ಈಗಾಗಲೇ ಸ್ಪಂದಿಸಿದೆ. ಹೆಚ್ಚುವರಿ ದರದಿಂದ ಸರ್ಕಾರಕ್ಕೂ, ಕಾರ್ಖಾನೆಗಳಿಗೂ ಹೊರೆಯಾಗಲಿದೆ. ಇದನ್ನು ರೈತರು ಅರ್ಥ ಮಾಡಿಕೊಳ್ಳಬೇಕು. ಮೆಕ್ಕೆಜೋಳ ಬೆಳೆದವರ ಸಮಸ್ಯೆಗೂ ಸ್ಪಂದಿಸಿದ್ದೇವೆ. ನಾವು ರೈತರ ಪರವಾಗಿಯೇ ಇದ್ದೇವೆ’ ಎಂದೂ ಅವರು ಹೇಳಿದರು.