ನವದೆಹಲಿ: ಪಕ್ಷದ ರಾಜ್ಯ ಘಟಕದ ಹಾಗೂ ಆಯಾ ಜಿಲ್ಲಾ ಘಟಕಗಳ ಪದಾಧಿಕಾರಿಗಳ ನೇಮಕ ಪ್ರಕ್ರಿಯೆಯನ್ನು ದಸರಾ ಹಬ್ಬಕ್ಕೆ ಮೊದಲೇ ಪೂರ್ಣಗೊಳಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪದಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದ ಪಟ್ಟಿಯ ಕುರಿತು ಪಕ್ಷದಲ್ಲಿ ಯಾರ ವಿರೋಧವೂ ಇಲ್ಲ. ಈ ಸಂಬಂಧ ವಿಳಂಬವೂ ಆಗಿಲ್ಲ. ಅಧಿಕಾರದ ಆಕಾಂಕ್ಷೆ ಇಲ್ಲದ, ಪಕ್ಷಕ್ಕೆ ಪೂರ್ಣಾವಧಿ ಸೇವೆ ಸಲ್ಲಿಸುವ ಯುವ ಮುಖಂಡರಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ದಸರಾ ಹಬ್ಬಕ್ಕೆ ಮೊದಲೇ ನೇಮಕದ ಆದೇಶ ಹೊರಬೀಳಲಿದೆ ಎಂದರು.
ಹೈಕಮಾಂಡ್ ನಿರ್ಧಾರ:
ಸಿಂದಗಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಈಗಾಗಲೇ ಪಕ್ಷದ ವರಿಷ್ಠರು ಅಭ್ಯರ್ಥಿ ಅಂತಿಮಗೊಳಿಸಿದ್ದಾರೆ. ಹಾನಗಲ್ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತ ನಿರ್ಧಾರವನ್ನು ಹೈಕಮಾಂಡ್ ಶೀಘ್ರವೇ ಪ್ರಕಟಿಸಲಿದೆ ಎಂದು ಅವರು ಹೇಳಿದರು.
‘ಆಪರೇಷನ್ ಹಸ್ತದ ಕುರಿತು ಯೋಚನೆ ಮಾಡಿಲ್ಲ. ಪಕ್ಷದ ಸಿದ್ಧಾಂತದ ಬಗ್ಗೆ ಯಾರಿಗೆ ನಂಬಿಕೆ ಇದೆಯೋ, ಅವರೆಲ್ಲ ಬೇಷರತ್ತಾಗಿ ಪಕ್ಷ ಸೇರಬಹುದು. ಆದರೆ, ಕಾಂಗ್ರೆಸ್ ಶಾಸಕರನ್ನು ಸೆಳೆಯುವುದಾಗಿ ಬಿಜೆಪಿಯವರೇ ಹೇಳಿದ್ದಾರೆ. ನನ್ನನ್ನು ಹಾಗೂ ಸಿದ್ದರಾಮಯ್ಯ ಅವರನ್ನೂ ಸೇರಿಸಿಕೊಳ್ಳಲು ಅವರು ಪರಿಗಣಿಸಿರಬಹುದು’ ಎಂದು ಅವರು ವ್ಯಂಗ್ಯವಾಡಿದರು.
ಮುಂದಿನ ಚುನಾವಣೆಯಲ್ಲಿ 123 ಸ್ಥಾನ ಗೆಲ್ಲಲು ಶ್ರಮಿಸುವುದಾಗಿ ಜೆಡಿಎಸ್ ಮುಖಂಡರು ಹೇಳಿದ್ದಾರೆ. ಬಿಜೆಪಿ 150 ಸ್ಥಾನಗಳ ಗುರಿ ಇರಿಸಿಕೊಂಡಿದೆ. ಆದರೆ, ಕಾಂಗ್ರೆಸ್ನ ಗುರಿ 224 ಕ್ಷೇತ್ರಗಳು ಎಂದು ಅವರು ತಿಳಿಸಿದರು.
‘ಕಾಂಗ್ರೆಸ್ ಪಕ್ಷ ಒಂದು ಕುಟುಂಬ ಇದ್ದ ಹಾಗೆ. ನಮ್ಮ ಕುಟುಂಬದಲ್ಲಿ ಯಾವುದೇ ರೀತಿಯ ಕಲಹ ಇಲ್ಲ. ಮುಂದಿನ ಮುಖ್ಯಮಂತ್ರಿ ವಿಚಾರವಾಗಿ ಸಿದ್ದರಾಮಯ್ಯ ಯಾವ ಹೇಳಿಕೆ ನೀಡಿದ್ದಾರೆ ಎಂಬ ಕುರಿತು ಮಾಹಿತಿ ಇಲ್ಲ. ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನಿರ್ಧಾರವೇ ಅಂತಿಮ’ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.