ADVERTISEMENT

ಯಡಿಯೂರಪ್ಪರನ್ನು ಕಾಟಾಚಾರಕ್ಕಾಗಿ ಬಿಜೆಪಿ ಉಳಿಸಿಕೊಂಡಿದೆ: ಡಿಕೆಶಿ ಟೀಕೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2019, 20:12 IST
Last Updated 31 ಮಾರ್ಚ್ 2019, 20:12 IST
ಶಿವಕುಮಾರ್
ಶಿವಕುಮಾರ್   

ಶಿವಮೊಗ್ಗ: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಕಾಟಾಚಾರಕ್ಕಾಗಿ ಪಕ್ಷದಲ್ಲಿ ಉಳಿಸಿಕೊಂಡಿದ್ದು, ಲೋಕಸಭೆ ಚುನಾವಣೆಯ ನಂತರ ಅವರ ಸ್ಥಾನವನ್ನು ಬದಲಾವಣೆ ಮಾಡುವ ಸಾಧ್ಯತೆಯಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಭವಿಷ್ಯ ನುಡಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಯಡಿಯೂರಪ್ಪ ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ಈಗಾಗಲೇ ಅವರು ಟ್ರಯಲ್ ಮತ್ತು ಟೆಸ್ಟ್ ಮುಗಿಸಿದ್ದಾರೆ. ಹಾಗಾಗಿ ಅವರ ಪಕ್ಷದವರೇ ಅವರ ವಿಶ್ರಾಂತಿ ಬಯಸುತ್ತಿದ್ದಾರೆ. ಆದರೆ, ಅವರ ನಾಯಕತ್ವಕ್ಕೆ ಕೇಂದ್ರದಲ್ಲಿ ಒಂದು ಸಚಿವ ಸ್ಥಾನವನ್ನಾದರೂ ಬಿಜೆಪಿ ನೀಡಬಹುದಿತ್ತು ಎಂದರು.

‘ಬಿಜೆಪಿ ಕಷ್ಟದಲ್ಲಿರುವವರ ಸಹಾಯಕ್ಕೆ ಬರುವುದಿಲ್ಲ. ನನ್ನ ಸಹೋದರಿ ತೇಜಸ್ವಿನಿ ಅನಂತಕುಮಾರ್‌ ವಿಷಯದಲ್ಲಿ ಇದು ಸಾಬೀತಾಗಿದೆ. ತೇಜಸ್ವಿನಿ ಅವರಿಗೆ ಏಕೆ ಟಿಕೆಟ್ ತಪ್ಪಿತು? ಯಡಿಯೂರಪ್ಪ ದ್ವೇಷ ಸಾಧಿಸುವಲ್ಲಿ ಯಶಸ್ವಿಯಾದರೆ? ಎಂಬುದರ ಬಗ್ಗೆ ತಿಳಿಯುವ ಕುತೂಹಲ ಜನರೂ ಸೇರಿದಂತೆ ನನಗೂ ಇದೆ’ ಎಂದು ಹೇಳಿದರು.

ADVERTISEMENT

‘ಯಡಿಯೂರಪ್ಪ ಅವರು ಐಟಿಯ ವಕ್ತಾರರೇ? ಐಟಿ ದಾಳಿ ಉದ್ಯಮಿಗಳ ಮೇಲೆ ಆಗಿದೆಯೇ ಹೊರತು ಜನಪ್ರತಿನಿಧಿಗಳ ಮೇಲೆ ಆಗಿಲ್ಲ ಎಂದು ಹೇಗೆ ಹೇಳುತ್ತಾರೆ. ಯಾವುದೇ ಬಿಜೆಪಿ ನಾಯಕರ ಮೇಲೆ ಐಟಿ ದಾಳಿ ನಡೆಯಲಿಲ್ಲ. ತಮ್ಮ ಪಕ್ಷದವರು ನೋಟು ಎಣಿಸುವ ಮಿಷನ್ ಇಟ್ಟುಕೊಂಡಿದ್ದಾರೆಂದು ಎಲ್ಲರೂ ಹಾಗೆಯೇ ಇರುತ್ತಾರಾ’ ಎಂದು ಪ್ರಶ್ನಿಸಿದ ಅವರು, ‘ಕೇಂದ್ರವು ಒಂದು ಸ್ವಾಯತ್ತ ಸಂಸ್ಥೆಯನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬುದನ್ನು ಜನರು ಗಮನಿಸುತ್ತಿದ್ದಾರೆ’ ಎಂದರು.

ನನ್ನ ಗುರಿ ಜಯದ ಕಡೆಗೆ: ತಮ್ಮನ್ನು ಟ್ರಬಲ್ ಶೂಟರ್ ಎಂದು ಕರೆಯುತ್ತಾರಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೆಲವರು ತಮಗೆ ಇಷ್ಟ ಬಂದಂತೆ ಕರೆದುಕೊಳ್ಳುತ್ತಾರೆ. ಆದರೆ ಯಾರು ಏನಾದರೂ ಕರೆದುಕೊಳ್ಳಲಿ. ನಾನೊಬ್ಬ ಪಕ್ಷದ ಕಾರ್ಯಕರ್ತ. ನನ್ನ ಗುರಿ ಏನಿದ್ದರೂ ಗೆಲುವಿನ ಕಡೆಗೆ ಮಾತ್ರ. ಪಕ್ಷದ ಕಾರ್ಯಕರ್ತರಿಗೂ ವ್ಯಕ್ತಿ ಪೂಜೆ ಬಿಟ್ಟು, ಪಕ್ಷ ಪೂಜೆ ಮಾಡಿ ಎಂದು ಸೂಚಿಸಿದ್ದೇನೆ’ ಎಂದು ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.