ಬೆಂಗಳೂರು: ‘ಬೆನ್ನಿಗಾನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ನನಗೆ ನೋಟಿಸ್ ನೀಡಿಲ್ಲ’ ಎಂದು ಶಾಸಕ ಡಿ.ಕೆ.ಶಿವಕುಮಾರ್ ಗುರುವಾರ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ‘ನೋಟಿಸ್ ನೀಡಿಲ್ಲ ಎಂದು ಇ.ಡಿ ಅಧಿಕಾರಿಗಳು ಹೇಳಿದ್ದಾರೆ. ಕೆಲಸದ ನಿಮಿತ್ತ ದೆಹಲಿಗೆ ಹೋಗಿದ್ದೆ. ಅದಕ್ಕೆ ಇ.ಡಿ ನೋಟಿಸ್ ನೀಡಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಸಿಬಿಐ ಸಹ ಯಾವುದೇ ನೋಟಿಸ್ ಕೊಟ್ಟಿಲ್ಲ. ಆದರೆ ಸಿಬಿಐನವರು ನನ್ನ ಮನೆ ಕಾಯುತ್ತಿದ್ದಾರೆ. ಈ ಅಧಿಕಾರಿಗಳು ಮನೆಗೆ ಬರಲಿ ಎಂದು ಬಾಗಿಲು ತೆರೆದುಕೊಂಡು ಕಾಯುತ್ತಿದ್ದೇನೆ. ಅಕ್ರಮ ಸಂಪತ್ತು ಹೊಂದಿದ್ದ ಆರೋಪ ಪ್ರಕರಣವನ್ನು ಇ.ಡಿ ತನಿಖೆ ನಡೆಸುತ್ತಿದ್ದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಿಬಿಐಗೆ ವಹಿಸಿದ್ದಾರೆ. ಅದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ಎಸಿಬಿ, ಲೋಕಾಯುಕ್ತದ ಮೇಲೆ ಅವರಿಗೆ ನಂಬಿಕೆ ಇದ್ದಂತಿಲ್ಲ’ ಎಂದು ಆರೋಪಿಸಿದರು.
‘ಯಾವುದೇ ಸರ್ಕಾರಿ ಜಮೀನು ಖರೀದಿಸಿಲ್ಲ. ಸರ್ಕಾರ ಬಿಟ್ಟ ಭೂಮಿ ತೆಗೆದುಕೊಂಡಿದ್ದೇನೆ. ಡಿನೋಟಿಫಿಕೇಷನ್ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ಈಗಾಗಲೇ ವಜಾ ಆಗಿದೆ. ಅದರಲ್ಲಿ ನನಗೆ ಯಾವ ಸಂಕಟವೂ ಇಲ್ಲ’ ಎಂದರು.
ಕೆಪಿಸಿಸಿ ಅಧ್ಯಕ್ಷ, ವಿರೋಧ ಪಕ್ಷದ ನಾಯಕನ ಸ್ಥಾನ ಅಂಗಡಿಯಲ್ಲಿ ಸಿಗುವುದಿಲ್ಲ. ಆ ಸ್ಥಾನಗಳಲ್ಲಿ ಯಾರು ಕುಳಿತುಕೊಳ್ಳಬೇಕು ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.