ಹುಬ್ಬಳ್ಳಿ: ‘ಅಪಾಯಕಾರಿ ಕೊರೊನಾ ವೈರಾಣು ಶಂಕೆಯಿಂದ ಕಿಮ್ಸ್ಗೆ ದಾಖಲಾಗಿದ್ದ ಟೆಕ್ಕಿ ಸಂದೀಪ ಕೆಳಸಂಗದ ಅವರ ರಕ್ತದ ಮಾದರಿಯಲ್ಲಿ ಕೊರೊನಾ ಲಕ್ಷಣಗಳು ಇಲ್ಲ’ ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಚೀನಾದಿಂದ ಭಾರತಕ್ಕೆ ಬಂದಿದ್ದ ಸಂದೀಪ ಅವರು ಭಾನುವಾರ ರಾತ್ರಿ ಕಿಮ್ಸ್ಗೆ ದಾಖಲಾಗಿದ್ದರು. ಹದಿನಾಲ್ಕು ದಿನಗಳಿಂದ ಜ್ವರ, ಕೆಮ್ಮು ಹಾಗೂ ಶೀತದಿಂದ ಬಳಲುತ್ತಿದ್ದರು. ಕೊರೊನಾ ವೈರಾಣು ಸೋಂಕು ತಗುಲಿರಬಹುದು ಎಂದು ಮುಂಜಾಗ್ರತವಾಗಿ ಅವರ ರಕ್ತದ ಮಾದರಿಯನ್ನು ಬೆಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಲಾಜಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು’ ಎಂದು ಪ್ರತಿಕ್ರಿಯಿಸಿದ್ದಾರೆ.
‘ಅಲ್ಲಿಯ ವೈದ್ಯ ಡಾ. ಅಶೋಕ ಅವರು ಕಿಮ್ಸ್ ವೈದ್ಯರಿಗೆ ರಕ್ತದ ಮಾದರಿಯಲ್ಲಿ ಕೊರೊನಾ ವೈರಾಣುವಿನ ಯಾವುದೇ ಲಕ್ಷಣಗಳು ಇಲ್ಲ ಎಂದು ಮಂಗಳವಾರ ವರದಿ ನೀಡಿದ್ದಾರೆ. ಇದರಿಂದಾಗಿ ಕೊರೊನಾ ಕುರಿತ ಆತಂಕ ದೂರವಾಗಿದೆ. ಚಿಕಿತ್ಸೆಗೆ ದಾಖಲಾಗಿದ್ದ ಸಂದೀಪ ಅವರು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.