ದಾವಣಗೆರೆ: ಕೊರೊನಾ ಸೋಂಕು ವಿಪರೀತ ಹರಡಿರಬಹುದು. ಎಲ್ಲ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡುವಂಥ ಲಾಕ್ಡೌನ್ ಜಾರಿಯಾಗಿರಬಹುದು. ಆದರೆ ಮತ್ತೊಬ್ಬರಿಗಾಗಿ ಮಿಡಿಯುವ, ಬೇರೆಯವರ ಹಸಿವನ್ನು ಇಂಗಿಸಬೇಕು ಎಂದು ತುಡಿಯುವ ಮನಸ್ಸುಗಳಿಗೆ ಕಡಿವಾಣ ಬಿದ್ದಿಲ್ಲ. ದಾವಣಗೆರೆಯಲ್ಲಿ ಹಲವು ಸಂಘಟನೆಗಳು ಇಂಥ ಮಾನವೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿವೆ.
‘ಬಡವರು, ನಿರ್ಗತಿಕರು, ಭಿಕ್ಷುಕರು, ಅಲೆಮಾರಿಗಳಿಗೆ ಆಹಾರ ಇಲ್ಲದಾಗಬಾರದು ಎಂದು ಪ್ರತಿ ದಿನ ಮಧ್ಯಾಹ್ನ ಒಂದು ಹೊತ್ತಿನ ಊಟ ನೀಡುವ ಕೆಲಸ ಮಾಡುತ್ತಿದ್ದೇವೆ. ಎರಡು ದಿನಗಳ ಹಿಂದೆ ಕಾರಲ್ಲಿ ಬಂದ ಶ್ರೀಮಂತರು ಕೂಡ ಕೈಯೊಡ್ಡಿದರು. ಕಾರಣ ಏನೆಂದರೆ ಅವರಿಗೆ ಎಲ್ಲೂ ಊಟ ಸಿಗಲಿಲ್ಲ. ಅವರಿಗೂ ನೀಡಿದೆವು’ ಎಂದು ಎಂಸಿಸಿ ‘ಬಿ’ ಬ್ಲಾಕ್ನ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಿಂದ ಆಹಾರ ಪೂರೈಕೆಯ ಉಸ್ತುವಾರಿ ವಹಿಸಿರುವ ಗೋಪಾಲಗೌಡರು ವಿವರಿಸಿದರು.
‘ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಿಂದ ಪ್ರತಿದಿನ ಸುಮಾರು 300 ಆಹಾರ ಪ್ಯಾಕೆಟ್ ಪೂರೈಸಲಾಗುತ್ತಿದೆ. ದೇವಸ್ಥಾನ ಧರ್ಮದರ್ಶಿ ರಾಮಮೋಹನ್ ಎಂ.ಎನ್. ಅವರ ನಿರ್ದೇಶನದಂತೆ ಈ ಕೆಲಸ ಮಾಡುತ್ತಿದ್ದೇವೆ. ಮುರಳೀಧರ ಆಚಾರ್, ಜಗದೀಶ್, ಪ್ರಧಾನ ಅರ್ಚಕ ರವಿ ಕುಮಾರ್, ಮಂಜುನಾಥ ಸಹಿತ ದೇವಸ್ಥಾನದ ಎಲ್ಲರೂ ಸಹಕಾರ ನೀಡುತ್ತಿದ್ದಾರೆ’ ಎಂದು ತಿಳಿಸಿದರು.
ಪೊಲೀಸರಿಗೂ ವಿತರಣೆ: ಲಾಕ್ಡೌನ್ ಎಂದು ರಸ್ತೆ ಬದಿಯಲ್ಲಿ ಕಾಯುತ್ತಾ ನಿಂತು ಜನರ ಸುರಕ್ಷತೆಗಾಗಿ ಕಾಯುತ್ತಿರುವ ಪೊಲೀಸರಿಗೆ ಹಿಂದೂ ಮಹಾ ಗಣಪತಿ ಟ್ರಸ್ಟ್ನಿಂದ ಮಧ್ಯಾಹ್ನ ಆಹಾರ ಪೊಟ್ಟಣ ವಿತರಿಸಲಾಗುತ್ತಿದೆ.
‘ಏಪ್ರಿಲ್ 30ರಿಂದ ಪ್ರತಿದಿನ ಮಧ್ಯಾಹ್ನ ದಿನಕ್ಕೆ 350 ಪ್ಯಾಕೆಟ್ನಂತೆ ವಿತರಿಸುತ್ತಿದ್ದೇವೆ. ಅದರಲ್ಲಿ 200 ಪ್ಯಾಕೆಟ್ ಪೊಲೀಸರಿಗೆ ಹೋಗುತ್ತದೆ. 150 ಪ್ಯಾಕೆಟ್ಗಳನ್ನು ಆಸ್ಪತ್ರೆಗಳ ಬಳಿ ರೋಗಿಗಳ ಜತೆಗೆ ಬಂದವರಿಗೆ ವಿತರಿಸುತ್ತಿದ್ದೇವೆ’ ಎಂದು ಈ ಆಹಾರ ವಿತರಣೆಯ ನೇತೃತ್ವ ವಹಿಸಿರುವ ಜೊಳ್ಳಿಗುರು ‘ಪ್ರಜಾವಾಣಿ’ಗೆ ತಿಳಿಸಿದರು.
ಚಪಾತಿ, ಪಲ್ಯ: ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಕಾರದಿಂದಲೇ ಅನ್ನ ಸಾಂಬಾರು ನೀಡಲಾಗುತ್ತದೆ. ಅದರ ಜತೆಗೆ ಚಪಾತಿ, ಪಲ್ಯವನ್ನು ತರಳಬಾಳು ಸೇವಾ ಸಮಿತಿ ಮತ್ತು ಶಿವಸೈನ್ಯ ಯುವಕ ಸಂಘದಿಂದ ನೀಡಲಾಗುತ್ತಿದೆ. ಪ್ರತಿದಿನ ಮಧ್ಯಾಹ್ನ 400 ಮತ್ತು ಸಂಜೆ 400 ಪಾಕೇಟ್ಗಳನ್ನು ಜಿಲ್ಲಾ ಚಿಗಟೇರಿ ಆಸ್ಪತ್ರೆ ಮತ್ತು ಹೆರಿಗೆ ಆಸ್ಪತ್ರೆಯಲ್ಲಿ ವಿತರಣೆಯಾಗುತ್ತಿದೆ. ಇದಲ್ಲದೇ ಹೊರಗೆ ಊಟ ಅಗತ್ಯ ಇರುವವರಿಗೆ ಸುಮಾರು 200 ಪ್ಯಾಕೆಟ್ ನೀಡುತ್ತಿದ್ದಾರೆ.
‘ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ನಿರ್ದೇಶನದಂತೆ ಆಹಾರ ವಿತರಣೆ ಮಾಡುತ್ತಿದ್ದೇವೆ. ಹದಡಿ ರಸ್ತೆಯಲ್ಲಿರುವ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಅಡುಗೆ ನಡೆಯುತ್ತದೆ’ ಎಂದು ಇದರ ಉಸ್ತುವಾರಿ ವಹಿಸಿರುವರಲ್ಲಿ ಪ್ರಮುಖರಾದ ಶಶಿಧರ ಹೆಮ್ಮನಬೇತೂರು, ಮಾಗನೂರು ಉಮೇಶ ಗೌಡ, ಶ್ರೀನಿವಾಸ ಮೆಳ್ಳೆಗಟ್ಟೆ, ಲಿಂಗರಾಜು ಅಗಸನಗಟ್ಟೆ ಮಾಹಿತಿ ನೀಡಿದರು.
ಮುಂದುವರಿದ ‘ಸ್ಫೂರ್ತಿ’ ಸೇವೆ: ಎಂಸಿಸಿ ‘ಎ’ ಬ್ಲಾಕ್ನಲ್ಲಿರುವ ಸ್ಫೂರ್ತಿ ಸೇವಾ ಟ್ರಸ್ಟ್ ಕಳೆದ ವರ್ಷ ಲಾಕ್ಡೌನ್ ಆದಾಗಲೂ ಆಹಾರ ಪಾಕೇಟ್ಗಳನ್ನು ವಿತರಣೆ ಮಾಡಿತ್ತು. ಈ ಬಾರಿಯೂ ತನ್ನ ಸೇವೆಯನ್ನು ಮುಂದುವರಿಸಿದೆ. ಜಿಲ್ಲಾ ಆಸ್ಪತ್ರೆ, ಹಳೇ ಆಸ್ಪತ್ರೆ ಬಳಿ ರೋಗಿಗಳ ಆರೈಕೆಗೆ ಬರುವವರಿಗೆ ಪ್ರತಿ ದಿನ 600 ಪ್ಯಾಕೆಟ್ ವಿತರಣೆ ಮಾಡಲಾಗುತ್ತಿದೆ ಎಂದು ಟ್ರಸ್ಟ್ನ ಬಿ. ಸತ್ಯನಾರಾಯಣಮೂರ್ತಿ ವಿವರ ನೀಡಿದರು.
ಯುವ ಕಾಂಗ್ರೆಸ್ ಸಹಿತ ವಿವಿಧ ಸಂಘಟನೆಗಳು ಆಹಾರ ವಿತರಣೆ ಮಾಡುತ್ತಾ ಹಸಿದ ಹೊಟ್ಟೆಗಳನ್ನು ತಣ್ಣಗಾಗಿಸುತ್ತಿವೆ.
ಕ್ಲಾಸ್ಮೇಟ್ಗಳ ‘ಪ್ರೇರಣಾ’ ಸಂಸ್ಥೆ
1996ರ ಡಿಪ್ಲೊಮಾ ಕ್ಲಾಸ್ಮೇಟ್ಗಳು ಸೇರಿ ಪ್ರೇರಣಾ ಯುವ ಸಂಸ್ಥೆಯನ್ನು ಹುಟ್ಟುಹಾಕಿ ಸಮಾಜಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಈಗಿನ ಮೇಯರ್ ಎಸ್.ಟಿ. ವೀರೇಶ್ ಅದರ ಅಧ್ಯಕ್ಷ. ಈ ಬಾರಿ ಲಾಕ್ಡೌನ್ ಕಾಲದಲ್ಲಿ ಕೊರೊನಾ ಸೋಂಕಿತರಾಗಿ ಹೋಮ್ ಐಸೊಲೇಶನ್ನಲ್ಲಿ ಇರುವವರಿಗೆ ಆಹಾರ ವಿತರಣೆ ಮಾಡುತ್ತಿದ್ದಾರೆ. ಯಾರಿಗೆ ಅಗತ್ಯ ಇದೆಯೋ ಅವರು ಕರೆ ಮಾಡಿದರೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.
‘ಪ್ರೇರಣಾ ಯುವ ಸಂಸ್ಥೆಯು ಜಿಲ್ಲಾ ಖಾಸಗಿ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ, ಸೇವಾ ಭಾರತಿ, ಭಾರತ ವಿಕಾಸ ಪರಿಷತ್, ಮಾಜಿ ಸೈನಿಕರ ನೆರವಿನಿಂದ ಬೆಳಿಗ್ಗಿನ ಉಪಾಹಾರ 100, ಮಧ್ಯಾಹ್ನ ಮತ್ತು ರಾತ್ರಿ ಊಟ 200 ಸದ್ಯ ನೀಡುತ್ತಿದ್ದೇವೆ. ಬೇಡಿಕೆ ಹೆಚ್ಚಾದರೆ ವಿತರಣೆಯೂ ಹೆಚ್ಚಾಗಲಿದೆ’ ಎಂದು ಎಸ್.ಟಿ. ವೀರೇಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.