ಬೆಂಗಳೂರು: ‘ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವ ಬದಲು ಆಡಳಿತ ಸಮಿತಿ ನೇಮಿಸುವ ತಪ್ಪು ನಿರ್ಧಾರವನ್ನು ಸರ್ಕಾರ ಕೈಬಿಡಬೇಕು. ಚುನಾವಣೆ ನಡೆಸದಂತೆ ರಾಜ್ಯ ಚುನಾವಣಾ ಆಯೋಗದ ಮೇಲೆ ಒತ್ತಡ ತರುವ ಪ್ರಯತ್ನವನ್ನೂ ನಿಲ್ಲಿಸಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಪತ್ರ ಬರೆದಿದೆ.
‘ಬೇಡಿಕೆ ಪರಿಗಣಿಸದಿದ್ದರೆ ಸ್ಥಳೀಯ ಸರ್ಕಾರಗಳ ಉಳಿವಿಗಾಗಿ ಮತ್ತು ಗ್ರಾಮ ಸ್ವರಾಜ್ಯದ ಅಸ್ತಿತ್ವಕ್ಕಾಗಿ ರಾಜ್ಯದಾದ್ಯಂತ ಪ್ರತಿಭಟನೆ ಮತ್ತು ಕಾನೂನು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ’ ಎಂದೂ ಆಂದೋಲನದ ಸಂಚಾಲಕರಾದ ನಂದನ ರೆಡ್ಡಿ ಮತ್ತು ಸಂಯೋಜಕರಾದ ದಾಮೋದರ ಆಚಾರ್ಯ ಎಚ್ಚರಿಕೆ ನೀಡಿದ್ದಾರೆ.
‘ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಸಮಿತಿ ನೇಮಕ ತೀರ್ಮಾನ ಸಂವಿಧಾನದ ಆಶಯಕ್ಕೆ ವಿರುದ್ಧ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ರಾಜ್ ಕಾಯ್ದೆಯ ಉಲ್ಲಂಘನೆಯಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರಾವಧಿ ಮುಗಿಯುತ್ತಿರುವ ಸಂದರ್ಭದಲ್ಲಿ ಕೋವಿಡ್ 19 ನೆಪ ಹೇಳಿ ಚುನಾವಣೆ ಮುಂದೂಡಲು ಆಯೋಗದ ಮೇಲೆ ಸರ್ಕಾರ ಒತ್ತಡ ಹೇರಲಾಗುತ್ತಿದೆ. ಆಡಳಿತ ಸಮಿತಿ ನೇಮಿಸುವ ಉದ್ದೇಶ ಸರ್ಕಾರಕ್ಕೆ ಏಕೆ. ಈ ಉದ್ದೇಶದ ಈಡೇರಿಕೆಗೆ ಗ್ರಾಮ ಸ್ವರಾಜ್ ಕಾಯ್ದೆಯ ಅಂಶಗಳನ್ನು ತಿರುಚಲು ಸರ್ಕಾರ ಕೈಹಾಕಿದ್ದು ಯಾಕೆ’ ಎಂದು ಅವರು ಪ್ರಶ್ನಿಸಿದ್ದಾರೆ.
‘ಜನಾದೇಶ ಇಲ್ಲದೆ ಆಡಳಿತ ಸಮಿತಿ ನೇಮಿಸಲು ರಾಜ್ಯ ಸರ್ಕಾರ ಹೊರಟಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಪ್ರಯತ್ನವಾಗಿದೆ’ ಎಂದೂ ಟೀಕಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.