ADVERTISEMENT

ರಾಜಕೀಯ ಲಾಭಕ್ಕಾಗಿ ಪಿಎಫ್‌ಐ ಬೆಂಬಲಿಸದಿರಿ: ನಳಿನ್‌ ಕುಮಾರ್‌ ಕಟೀಲ್

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 11:35 IST
Last Updated 28 ಸೆಪ್ಟೆಂಬರ್ 2022, 11:35 IST
ನಳಿನ್‌ ಕುಮಾರ್ ಕಟೀಲ್‌
ನಳಿನ್‌ ಕುಮಾರ್ ಕಟೀಲ್‌   

ಬೆಂಗಳೂರು: ಪಿಎಫ್‌ಐ ಅನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಸ್ವಾಗತಿಸಿದ್ದು, ನಿಷೇಧದ ವಿಚಾರದಲ್ಲಿ ಯಾವುದೇ ರಾಜಕೀಯಗಳು ಪಕ್ಷ ತುಷ್ಟೀಕರಣ ಮತ್ತು ತಕ್ಷಣದ ರಾಜಕೀಯ ಲಾಭ ಪಡೆದುಕೊಳ್ಳಲು ರಾಜಕಾರಣ ಮಾಡಬಾರದು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಸುದ್ದಿಗಾರರ ಜತೆ ಮಾತನಾಡಿರುವ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದೇಶದ್ರೋಹಿ ಪಿಎಫ್‌ಐ ಮೇಲಿದ್ದ ಪ್ರಕರಣಗಳನ್ನು ರದ್ದು ಮಾಡಿ ಅವುಗಳ ಬೆಳವಣಿಗೆಗೆ ಕಾರಣರಾಗಿದ್ದಾರೆ. ಇದನ್ನು ಜನ ಅರ್ಥ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ತಕ್ಕ ಉತ್ತರವನ್ನು ಮುಂದಿನ ದಿನಗಳಲ್ಲಿ ನೀಡುವುದು ಖಚಿತ ಎಂದು ಅವರು ಹೇಳಿದರು.

ಪಿಎಫ್‌ಐ ಜಾಗತಿಕ ಉಗ್ರ ಸಂಘಟನೆಗಳ ಜತೆ ಸಂಪರ್ಕ ಮತ್ತು ಸಂಬಂಧ ಹೊಂದಿದ್ದರು. ವಿದೇಶಗಳಿಂದ ನೂರಾರು ಕೋಟಿ ದೇಣಿಗೆ ಪಡೆದು ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು. ಕೇಂದ್ರ ಸರ್ಕಾರ ಬಲವಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ದೇಶದ ಏಕರೆ ಮತ್ತು ಸಮಗ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿದೆ ಎಂದು ಅವರು ಹೇಳಿದರು.

ದೇಶ ಪ್ರೇಮಿ ಮುಸ್ಲಿಮರ ಜವಾಬ್ದಾರಿ ಹೆಚ್ಚು:

‘ಪಿಎಫ್‌ಐ ನಿಷೇಧವನ್ನು ಕೆಲವು ರಾಜಕೀಯ ಪಕ್ಷಗಳ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಿದರೆ ದೇಶದ ಭವಿಷ್ಯಕ್ಕೆ ಹೊಡೆತ ಬೀಳುತ್ತದೆ. ಈ ದುಷ್ಟ ಶಕ್ತಿಗಳ ಕೈಯಿಂದ ಬಿಡಿಸುವ ಕಾರ್ಯದಲ್ಲಿ ತೊಡಕಾಗಲಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

‘ನಿಷೇಧದ ಬಳಿಕ ಪಿಎಫ್‌ಐನ ದುಷ್ಟ ಶಕ್ತಿಗಳು ಭೂಗತರಾಗಿ ಸಮಾಜವನ್ನು ಪ್ರಚೋದಿಸುವ ಕೆಲಸ ಮಾಡಬಹುದು. ಇಂತಹ ಪ್ರಕರಣಗಳು ಗಮನಕ್ಕೆ ಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು. ಕಾನೂನಿನ ಜತೆ ಕೈಜೋಡಿಸಬೇಕು. ದೇಶ ಭದ್ರತೆ, ಸಮಾಜದ ಗೌರವ ಕಾಪಾಡುವ ನಿಟ್ಟಿನಲ್ಲಿ ದೇಶಪ್ರೇಮಿ ಮುಸ್ಲಿಮರು ಯೋಚನೆ ಮಾಡಬೇಕಾದ ಅಗತ್ಯವಿದೆ. ರಾಷ್ಟ್ರ ವಿರೋಧಿ ಮತ್ತು ಮತಾಂಧತೆಯ ವಿರುದ್ಧ ಅರಿವು ಮೂಡಿಸಬೇಕಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.