ADVERTISEMENT

ಕಲಬುರ್ಗಿ: ಪ್ರವಾಹದ ಬೆನ್ನಲ್ಲೇ ನೀರಿನ ವೇದನೆ!

ಊರಿಗೆ ಆಧಾರವಾಗಿದ್ದ ಕೆರೆ ಕೆಸರು ಗದ್ದೆಯಾಯಿತು

ಜಗನ್ನಾಥ ಶೇರಿಕಾರ
Published 23 ಅಕ್ಟೋಬರ್ 2020, 20:17 IST
Last Updated 23 ಅಕ್ಟೋಬರ್ 2020, 20:17 IST
ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ನಾಗಾಈದಲಾಯಿ ಕೆರೆ ಈಚೆಗೆ ಸುರಿದ ಮಳೆಯಿಂದ ಒಡೆದಿತ್ತು. ಈಗ ಸಂಪೂರ್ಣ ಖಾಲಿಯಾಗಿದೆ
ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ನಾಗಾಈದಲಾಯಿ ಕೆರೆ ಈಚೆಗೆ ಸುರಿದ ಮಳೆಯಿಂದ ಒಡೆದಿತ್ತು. ಈಗ ಸಂಪೂರ್ಣ ಖಾಲಿಯಾಗಿದೆ   

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನನಾಗಾಈದಲಾಯಿ ಕೆರೆ 28 ಹೆಕ್ಟೇರ್‌ ಪ್ರದೇಶದಲ್ಲಿ ಹರಡಿಕೊಂಡಿದ್ದು,ನೀರು ತುಂಬಿಕೊಂಡು ನಳನಳಿಸುತ್ತಿತ್ತು. ಈಚೆಗೆ ಸುರಿದ ಭಾರಿ ಮಳೆಯಿಂದ ತಡೆಗೋಡೆ ಕೊಚ್ಚಿಹೋಗಿ ಈಗ ಕೆರೆಯಲ್ಲಿಯ ನೀರೆಲ್ಲ ಖಾಲಿಯಾಗಿದೆ. ಊರಿಗೆ ಆಧಾರವಾಗಿದ್ದ ಕೆರೆ ಈಗ ಕೆಸರು ಗದ್ದೆಯಂತಾಗಿದೆ.

ತಾಲ್ಲೂಕಿನ ದೋಟಿಕೊಳ, ಹುಲ್ಸಗೂಡ, ಹೂಡದಳ್ಳಿ ಬೃಹತ್‌ ಕೆರೆಗಳೂ ಒಡೆದಿದ್ದು, ಎಲ್ಲ ನೀರು ಹರಿದು ಹೋಗಿದೆ. ಈ ಕೆರೆಗಳು ಸರಾಸರಿ ತಲಾ 350 ಎಕರೆ ಪ್ರದೇಶಕ್ಕೆ ನೀರಾವರಿಗೆ ಮೂಲವಾಗಿದ್ದವು. ಇತರೆ ಸಣ್ಣಪುಟ್ಟ ಕೆರೆಗಳಿಗೂ ಹಾನಿಯಾಗಿದೆ.

‘ನಾಗಾಈದಲಾಯಿ ಕೆರೆಯು ನಾಗಾಈದಲಾಯಿ ತಾಂಡಾ, ಕುಸ್ರಂಪಳ್ಳಿ, ಕುಸ್ರಂಪಳ್ಳಿ ತಾಂಡಾ ರೈತರ ಜಾನುವಾರುಗಳ ದಾಹ ನೀಗಿಸುತ್ತಿತ್ತು. ಈಗ ನೀರಿಲ್ಲದೇ ಮುಂದೇನು ಎಂಬ ಚಿಂತೆ ಕಾಡುತ್ತಿದೆ’ ಎನ್ನುತ್ತಾರೆ ಗ್ರಾಮಸ್ಥ ನೆಲ್ಲಿ ಮಲ್ಲಿಕಾರ್ಜುನ.

ADVERTISEMENT

‘ಎರಡುವರ್ಷಗಳ ಹಿಂದೆ ಮಳೆಯ ಅಭಾವದಿಂದ ಕೆರೆ ಒಣಗಿತ್ತು. ರೈತರೇ ಕೂಡಿ ಹೂಳು ತೆಗೆದಿದ್ದೆವು. ಈಗ ಆ ಕೆರೆ ಒಡೆದು ಖಾಲಿ ಆಗಿದೆ’’ ಎಂದು ಹೂಡದಳ್ಳಿಯ ಬಸವರಾಜ ಬಿರಾದಾರ ಹೇಳಿದರು.

‘ನಮ್ಮೂರಿನ ಕೆರೆ ನಿರ್ಮಿಸಿ 51 ವರ್ಷಗಳು ಗತಿಸಿವೆ. ಭಾರಿ ಪ್ರವಾಹದಿಂದ ಬಂಡ್‌ಗೆ ಹಾನಿಯಾಗಿದೆ’ ಎನ್ನುತ್ತಾರೆ ದೋಟಿಹಾಳದ ವಿಠಲರಾವ್‌ ಕುಲಕರ್ಣಿ.

‘ಕೆರೆಗಳಿಗೆ ಉಂಟಾಗಿರುವ ಹಾನಿ ಸರಿಪಡಿಸಲು ಅಂದಾಜು ₹ 15 ಕೋಟಿ ಅನುದಾನದ ಅಗತ್ಯವಿದೆ’ ಎನ್ನುವುದು ಸಣ್ಣ ನೀರಾವರಿ ಇಲಾಖೆಯ ಉಪ ವಿಭಾಗದ ಎಇಇ ಶಿವಶರಣಪ್ಪ ಕೇಶ್ವಾರ್ ಅವರ ಹೇಳಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.