ADVERTISEMENT

ಎಸ್‌ಐಟಿ ಡಿ.ಜಿಗೆ ನೋಟಿಸ್: ಕೋರ್ಟ್ ಮೌಖಿಕ ಎಚ್ಚರಿಕೆ

ಮೊದಲ ಆರೋಪಿ ಹಾಜರುಪಡಿಸದ್ದಕ್ಕೆ ನ್ಯಾಯಾಲಯ ಅತೃಪ್ತಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 20:00 IST
Last Updated 17 ಅಕ್ಟೋಬರ್ 2019, 20:00 IST
ಧಾರವಾಡದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಪ್ರಕರಣದ ವಿಚಾರಣೆ ಎದುರಿಸಿದ ಬಳಿಕ ಪೊಲೀಸ್ ವಾಹನ ಏರುವ ಮುನ್ನ ಆರೋಪಿಗಳಾದ ಅಮಿತ ಬದ್ದಿ ಮತ್ತು ಶರದ್ ಬಾಬು ಸಾಹೇಬ ‘ತಾವು ಅಮಾಯಕರು’ ಎಂದು ಕೂಗಿದರು
ಧಾರವಾಡದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಪ್ರಕರಣದ ವಿಚಾರಣೆ ಎದುರಿಸಿದ ಬಳಿಕ ಪೊಲೀಸ್ ವಾಹನ ಏರುವ ಮುನ್ನ ಆರೋಪಿಗಳಾದ ಅಮಿತ ಬದ್ದಿ ಮತ್ತು ಶರದ್ ಬಾಬು ಸಾಹೇಬ ‘ತಾವು ಅಮಾಯಕರು’ ಎಂದು ಕೂಗಿದರು   

ಧಾರವಾಡ: ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಮೋಲ್‌ ಕಾಳೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ 3ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯ, ಎಸ್‌ಐಟಿ ಡಿ.ಜಿಗೆ ನೋಟಿಸ್ ಜಾರಿ ಮಾಡುವುದಾಗಿ ಗುರುವಾರ ಮೌಖಿಕ ಎಚ್ಚರಿಕೆ ನೀಡಿತು.

ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಸಂದರ್ಭ ಎಲ್ಲಾ ಆರೋಪಿಗಳು ಹಾಜರಿರಬೇಕು. ಮೊದಲ ಆರೋಪಿ ಅಮೋಲ್‌ ಕಾಳೆಯನ್ನು ಎಸ್‌ಐಟಿಯು ಕೋರ್ಟ್‌ ಮುಂದೆ ಹಾಜರುಪಡಿಸದೆ ತಾಳ್ಮೆ ಪರೀಕ್ಷಿಸುತ್ತಿದೆ. ಮುಂದಿನ ದಿನದಲ್ಲಿ ಎಲ್ಲ ಆರೋಪಿಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು ಎಂದು ವಿಶೇಷ ಪ್ರಾಸಿಕ್ಯೂಟರ್ ಅವರಿಗೆ ಸೂಚಿಸಿ, ಇದೇ 24ಕ್ಕೆ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿತು.

ಪ್ರಕರಣದ ಸಂಬಂಧ ಸದ್ಯ ನ್ಯಾಯಾಂಗ ವಶದಲ್ಲಿರುವ ಇತರೆ ಆರೋಪಿಗಳಾದ ಗಣೇಶ ಮಿಸ್ಕಿನ್‌, ಪ್ರವೀಣ ಚತುರೆ, ಅಮಿತ್‌ ಬದ್ದಿ, ವಾಸುದೇವ ಸೂರ್ಯವಂಶಿ ಮತ್ತು ಶರದ್ ಬಾಹು ಸಾಹೇಬ್‌ ಅವರನ್ನು ಹಾಜರುಪಡಿಸಲಾಗಿತ್ತು.

ADVERTISEMENT

ಅನಾರೋಗ್ಯದ ಕಾರಣ ನೀಡಿ ಅಮೋಲ್‌ ಕಾಳೆಯನ್ನು ಹಾಜರುಪಡಿಸಲಿಲ್ಲ. ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲೂ ಭಾಗಿಯಾಗಿರುವ ಆರೋ‍ಪ ಎದುರಿಸುತ್ತಿರುವ ಅಮೋಲ್‌ ಕಾಳೆ ಸದ್ಯ ಮೈಸೂರು ಕಾರಾಗೃಹದಲ್ಲಿದ್ದಾರೆ.

ಈ ಮಧ್ಯೆ, ನ್ಯಾಯಾಲಯಕ್ಕೆ ಬಂದ ಆರೋಪಿಗಳು ‘ನಾವು ಅಮಾಯಕರು, ನಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ’ ಎಂದರು. ವಿಚಾರಣೆ ನಂತರ ಹೊರ ಬಂದ ಆರೋಪಿಗಳು, ‘ನಮಗೆ ನ್ಯಾಯ ಬೇಕು’ ಎಂದು ಹಿಂದಿಯಲ್ಲಿ ಅಲವತ್ತುಕೊಂಡು ಪೊಲೀಸ್‌ ವಾಹನ ಏರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.