ಚಿತ್ರದುರ್ಗ: ಭೀಕರ ಬರ ಪರಿಸ್ಥಿತಿಯಿಂದ ಕೊಳವೆಬಾವಿಗಳು ಸಂಪೂರ್ಣ ಬತ್ತಿ ಹೋಗಿದ್ದು, ಅಡಿಕೆ ತೋಟಗಳು ಒಣ
ಗುತ್ತಿವೆ. ತೋಟ ಉಳಿಸಿಕೊಳ್ಳಲು ಶ್ರಮಿಸಿ ಕೈಚೆಲ್ಲಿದ ರೈತರು ಅಡಿಕೆ ಮರಗಳಿಗೆ ಕೊಡಲಿ ಪೆಟ್ಟು ನೀಡುತ್ತ ಕಣ್ಣೀರು ಸುರಿಸುತ್ತಿದ್ದಾರೆ.
ಅಂತರ್ಜಲ ಮಟ್ಟ ಕುಸಿದ ಪರಿಣಾಮ ಚಿತ್ರದುರ್ಗ, ಹಿರಿಯೂರು ಹಾಗೂ ಹೊಳಲ್ಕೆರೆ ತಾಲ್ಲೂಕಿನ ಅಡಿಕೆ ತೋಟ
ಗಳಿಗೆ ಸಂಕಷ್ಟ ಎದುರಾಗಿದೆ. ಟ್ಯಾಂಕರ್ ನೀರು ಹರಿಸಿದರೂ ತೋಟ ರಕ್ಷಿಸಿಕೊಳ್ಳಲು ಆಗದೇ ಅನೇಕರು ಪರದಾಡುತ್ತಿದ್ದಾರೆ. ಇಂತಹ ರೈತರ ಕರುಣಾಜನಕ ಕಥೆಗಳು ಪ್ರತಿ ಹಳ್ಳಿಯಲ್ಲೂ ಸಿಗುತ್ತಿವೆ.
ಚಿತ್ರದುರ್ಗ ತಾಲ್ಲೂಕಿನ ಈರಜ್ಜನಹಟ್ಟಿಯ ರೈತ ನಾಗರಾಜ 25 ವರ್ಷದ ತೋಟವನ್ನು ಕಡಿದು ಹಾಕಿದ್ದಾರೆ. ಸುಮಾರು ನಾಲ್ಕು ಎಕರೆ ಜಮೀನಿನಲ್ಲಿದ್ದ ಎರಡು ಸಾವಿರಕ್ಕೂ ಅಧಿಕ ಅಡಿಕೆ ಮರಗಳು ನೆಲಕ್ಕುರುಳಿವೆ. ನಿತ್ಯ ಬೆಳಿಗ್ಗೆ ಜಮೀನಿಗೆ ಬರುವ ಇವರು ಸರ್ವನಾಶವಾದ ಅಡಿಕೆ ತೋಟವನ್ನು ತದೇಕಚಿತ್ತದಿಂದ ನೋಡುತ್ತ ಸಂಕಟಪಡುತ್ತಿದ್ದಾರೆ.
ಚಿತ್ರಹಳ್ಳಿಯ ನಾಗರಾಜ ಅವರು ದಶಕದ ಹಿಂದೆ ಹಿರಿಜನಹಟ್ಟಿಯ ಸಮೀಪ ಬಂದು ತೋಟ ಬೆಳೆಸಿದ್ದರು. ಪ್ರತಿ
ವರ್ಷ ಹತ್ತಾರು ಲಕ್ಷ ಆದಾಯವೂ ಬರುತ್ತಿತ್ತು. ಐದು ವರ್ಷಗಳಿಂದ ಸತತವಾಗಿ ತಲೆದೋರಿದ ಬರ ಪರಿಸ್ಥಿತಿಗೆ ಕಂಗೆಟ್ಟು ಹೋಗಿದ್ದಾರೆ.
‘ಕಳೆದ ವರ್ಷ ಬಿದ್ದ ಮಳೆಗೆ ಅಡಿಕೆ ಮರಗಳ ಬುಡ ಕೂಡ ಒದ್ದೆಯಾಗಲಿಲ್ಲ. ತೋಟದಲ್ಲಿದ್ದ ಏಳು ಕೊಳವೆಬಾವಿಗಳು ಒಂದರ ಮೇಲೊಂದು ಕೈಕೊಟ್ಟವು. ಟ್ಯಾಂಕರ್ ಮೂಲಕ ನೀರು ಹರಿಸಿ ತೋಟ ಉಳಿಸಿಕೊಳ್ಳಲು ₹3 ಲಕ್ಷ ಖರ್ಚು ಮಾಡಿದೆ. ಕೊನೆಗೂ ಸೋತು ಹೋದೆ’ ಎಂದು ರೈತ ನಾಗರಾಜ ಹೇಳಿದರು.
ಪಕ್ಕದ ಜಾನಕೊಂಡ ಗ್ರಾಮದಲ್ಲಿ ರಾಜಣ್ಣ ಎಂಬುವರ ತೋಟ ಸಂಪೂರ್ಣ ಒಣಗಿದೆ. ಐದು ಕೊಳವೆಬಾವಿ ಬತ್ತಿವೆ. ಟ್ಯಾಂಕರ್ ನೀರು ಹರಿಸಿ ತೋಟ ಉಳಿಸಿಕೊಳ್ಳುವ ಪ್ರಯತ್ನ ಫಲ ನೀಡಲಿಲ್ಲ. ಅಡಿಕೆ ಜತೆಗೆ ತೆಂಗಿನ ಮರಗಳು ನೆಲಕ್ಕುರುಳುತ್ತಿವೆ. ವಿಶ್ವೇಶ್ವರ ಎಂಬುವರ
ನಾಲ್ಕು ಎಕರೆ ತೋಟದಲ್ಲಿದ್ದ 1,800 ಅಡಿಕೆ ಮರಗಳು ಒಂದೊಂದಾಗಿ ಉರುಳುತ್ತಿವೆ. 20 ವರ್ಷಗಳಿಂದ ಫಲ ನೀಡುತ್ತಿದ್ದ ತೋಟ ಬರಡಾಗಿರುವುದನ್ನು ಕಂಡು ವ್ಯಥೆ ಪಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.