ADVERTISEMENT

ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಮುಖಚರ್ಯೆ ಆಧಾರಿತ ಇ–ಹಾಜರಾತಿ ಕಡ್ಡಾಯ

ಇದೇ ಶೈಕ್ಷಣಿಕ ಸಾಲಿನಿಂದಲೇ ಜಾರಿಗೆ ಸರ್ಕಾರದ ಆದೇಶ, ₹5 ಕೋಟಿ ವೆಚ್ಚಕ್ಕೆ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 0:14 IST
Last Updated 22 ಜೂನ್ 2025, 0:14 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   

ಬೆಂಗಳೂರು: ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ, ನಕಲಿ ದಾಖಲಾತಿ ತೋರಿಸಿ ಸರ್ಕಾರದ ವಿವಿಧ ಸೌಲಭ್ಯ ಪಡೆಯುತ್ತಿರುವ ಶಾಲೆಗಳ ಕಳ್ಳಾಟಕ್ಕೆ ತಡೆ ಹಾಕಲು ಮುಂದಾಗಿರುವ ಶಿಕ್ಷಣ ಇಲಾಖೆ, ‘ಇ–ಹಾಜರಾತಿ’ ಕಡ್ಡಾಯದತ್ತ ಹೆಜ್ಜೆ ಇಟ್ಟಿದೆ.

ಇದೇ ಶೈಕ್ಷಣಿಕ ಸಾಲಿನಿಂದಲೇ  ಸರ್ಕಾರಿ ಹಾಗೂ ಸರ್ಕಾರದ ಅನುದಾನ ಪಡೆಯುವ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ‘ಇ–ಹಾಜರಾತಿ’ ಕಡ್ಡಾಯಗೊಳಿಸುವ ಆದೇಶವನ್ನೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.

ಮಕ್ಕಳ ಮುಖಚರ್ಯೆ ಗುರುತಿಸುವ ಮೂಲಕ ಇ–ಹಾಜರಾತಿ ದಾಖಲಿಸುವ ‘ನಿರಂತರ’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದಾಗಿ ಈ ವರ್ಷದ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಇಲಾಖೆ ಆಯುಕ್ತ ಕೆ.ವಿ. ತ್ರಿಲೋಕ್‌ಚಂದ್ರ ಅವರನ್ನು ಯೋಜನೆಯ ಅನುಷ್ಠಾನಾಧಿಕಾರಿಯಾಗಿ ನೇಮಿಸಿದೆ.

ADVERTISEMENT

ಯೋಜನೆಯನ್ನು ಅನುಷ್ಠಾನಗೊಳಿಸಲು ಅಗತ್ಯವಾದ ಕೃತಕ ಬುದ್ಧಿಮತ್ತೆ ಆಧಾರಿತ ಮೊಬೈಲ್‌ ಹಾಗೂ ಇತರೆ ಪರಿಕರಗಳನ್ನು ರಾಜ್ಯದ 52,686 ಶಾಲೆಗಳಲ್ಲಿ ಅಳವಡಿಸಲು ₹5 ಕೋಟಿ ಅನುದಾನ ನೀಡಲಾಗಿದೆ. ಯೋಜನೆಯ ಅನುಷ್ಠಾನಕ್ಕೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಾಗೂ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ನಿಯಮಗಳ ಪ್ರಕಾರ ಟೆಂಡರ್‌ ಆಹ್ವಾನಿಸುವ ಅಧಿಕಾರವನ್ನು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ ನೀಡಲಾಗಿದೆ. 

ಹಲವು ಅಕ್ರಮಗಳಿಗೆ ತಡೆ: ಸರ್ಕಾರಿ ಶಾಲೆ ಮಕ್ಕಳಿಗೆ ಸರ್ಕಾರ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ, ಮಧ್ಯಾಹ್ನದ ಬಿಸಿಯೂಟ, ಕ್ಷೀರ ಭಾಗ್ಯ ಯೋಜನೆ ಅಡಿ ಹಾಲು ವಿತರಣೆ, ವಾರಕ್ಕೆ ಆರು ದಿನಗಳು ಮೊಟ್ಟೆ, ಬಾಳೆ ಹಣ್ಣು ನೀಡುತ್ತಿದೆ. ಅದಕ್ಕಾಗಿ ಪ್ರತಿ ವರ್ಷ ₹4 ಸಾವಿರ ಕೋಟಿಗೂ ಅಧಿಕ ಮೊತ್ತ ವೆಚ್ಚ ಮಾಡಲಾಗುತ್ತಿದೆ. ಕೆಲ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆ ಇದ್ದರೂ, ಹೆಚ್ಚು ತೋರಿಸಿಕೊಂಡು ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಎದುರಾಗಿದ್ದವು.

ಮಕ್ಕಳ ಸಂಖ್ಯೆ ನಿಯಮಕ್ಕಿಂತ ಕಡಿಮೆ ಇರುವ ಶಾಲೆಯ ಶಿಕ್ಷಕರನ್ನು ಹೆಚ್ಚುವರಿ ಎಂದು ಗುರುತಿಸಿ, ಬೇರೆ ಶಾಲೆಗೆ ವರ್ಗಾವಣೆ ಮಾಡಲಾಗುತ್ತಿದೆ. ಇಂತಹ ಸಮಯದಲ್ಲಿ ಸ್ಥಳ ನಿಯೋಜನೆಯಿಂದ ತಪ್ಪಿಸಿಕೊಳ್ಳಲು ಶಿಕ್ಷಕರು ಕೃತಕ ಹಾಜರಾತಿ ಸೃಷ್ಟಿಸುತ್ತಿರುವ ಆರೋಪವೂ ಇತ್ತು. 

ಪ್ರತಿ ಮಕ್ಕಳು ಶಾಲೆಗೆ ಬರುವುದನ್ನು ಖಾತ್ರಿಪಡಿಸಲಿದೆ. ಶಾಲೆ ತೊರೆಯವ ಮಕ್ಕಳ ಮೇಲೆ ನಿಗಾ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಸಿಗಲಿದೆ.
ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಸಚಿವ

ಖಾಸಗಿ ಶಾಲೆಗಳು ಫಲಿತಾಂಶದ ಪ್ರತಿಷ್ಠೆಗೆ ಬಿದ್ದು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ, ಅಲ್ಲೇ ಪರೀಕ್ಷೆ ಬರೆಯಿಸುತ್ತಿರುವ ಪ್ರಕರಣಗಳು ದಾಖಲಾಗಿದ್ದವು. ಕೆಲ ಅನುದಾನಿತ ಶಾಲೆಗಳಲ್ಲಿ ಮಕ್ಕಳು ದಾಖಲಾಗದಿದ್ದರೂ, ಹಾಜರಾತಿ ತೋರಿಸಿ, ಅನುದಾನ, ಶಿಕ್ಷಕರ ವೇತನ ಪಡೆಯುತ್ತಿದ್ದವು. ಇಂತಹ ಎಲ್ಲ ವಾಮಮಾರ್ಗಕ್ಕೂ ಇ–ಹಾಜರಾತಿ ಕಡಿವಾಣ ಹಾಕಲಿದೆ. 

ಯೋಜನೆಯ ಪ್ರಯೋಜನೆಗಳು

ವಿದ್ಯಾರ್ಥಿಗಳ ಹಾಜರಾತಿಯಲ್ಲಿ ನಿಖರತೆ ಕಡಿಮೆ ಸಮಯದಲ್ಲಿ ಹಾಜರಾತಿ ದಾಖಲು ಪ್ರತಿದಿನ ಶಾಲೆಗೆ ಬರುವ ಮಕ್ಕಳ ಖಚಿತತೆ ಮಕ್ಕಳ ಹಾಜರಾತಿ ಮೇಲಧಿಕಾರಿಗಳಿಗೆ ಲಭ್ಯ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಉಪಯುಕ್ತ ಅನಗತ್ಯ ಹೆಚ್ಚುವರಿ ಅನುದಾನದ ಹಂಚಿಕೆಗೆ ತಡೆ  ಶೈಕ್ಷಣಿಕ ವ್ಯವಸ್ಥೆಯಲ್ಲಿ ಸುಧಾರಣೆಗೆ ನಾಂದಿ  

ಇ–ಹಾಜರಾತಿ ಪ್ರಕ್ರಿಯೆ ಹೇಗೆ?

ಪ್ರತಿ ಶಾಲೆಯಲ್ಲೂ ವೆಕ್ಟರ್‌–ಆಧಾರಿತ ಸುಧಾರಿತ ತಂತ್ರಜ್ಞಾನದ ಮುಖಚರ್ಯೆ ಗುರುತಿಸುವ ಯಂತ್ರ ಅಳವಡಿಸಲಾಗುತ್ತದೆ. ಅದರಲ್ಲಿ ಸೆರೆ ಹಿಡಿದ ವಿದ್ಯಾರ್ಥಿಗಳ ದತ್ತಾಂಶವನ್ನು ಮೊಬೈಲ್‌ ಆ್ಯಪ್‌ ಮೂಲಕ ವಿಶಿಷ್ಟ ಗುರುತಿಸುವ ಸಾಧನಕ್ಕೆ ರವಾನಿಸಲಾಗುತ್ತದೆ. ಎಸ್‌ಎಟಿಎಸ್‌ ತಂತ್ರಾಂಶಕ್ಕೂ (ವಿದ್ಯಾರ್ಥಿ ಸಾಮರ್ಥ್ಯ ಪತ್ತೆ ವ್ಯವಸ್ಥೆ) ಸಂಪರ್ಕ ಕಲ್ಪಿಸಲಾಗಿದೆ. ಈ ಎಲ್ಲ ಪ್ರಕ್ರಿಯೆಯ ಕೇಂದ್ರ ಘಟಕವನ್ನು ವಿಕಾಸ ಸೌಧದಲ್ಲಿ ಸ್ಥಾಪಿಸಲಾಗುತ್ತದೆ. ರಾಜ್ಯವಲಯದಿಂದ ನಿರ್ವಹಿಸಲ್ಪಡುತ್ತದೆ. ಇದು ವಿದ್ಯಾರ್ಥಿಗಳ ಗೌಪ್ಯತೆ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.