ADVERTISEMENT

ಶಿಕ್ಷಣಕ್ಕೆ ಜಿಡಿಪಿಯ ಶೇ 10ರಷ್ಟು ಹಣ ಅಗತ್ಯ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 21:00 IST
Last Updated 1 ಆಗಸ್ಟ್ 2022, 21:00 IST
ಸುಬ್ರಮಣಿಯನ್‌ ಸ್ವಾಮಿ
ಸುಬ್ರಮಣಿಯನ್‌ ಸ್ವಾಮಿ   

ಮೈಸೂರು: ‘ಜಿಡಿಪಿಯ (ನಿವ್ವಳ ಆಂತರಿಕ ಉತ್ಪನ್ನ) ಶೇ 10ರಷ್ಟು ಮೊತ್ತವನ್ನು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ವ್ಯಯಿಸದ ಹೊರತು ಆರ್ಥಿಕತೆಯಲ್ಲಿ ಚೀನಾ, ಅಮೆರಿಕವನ್ನು ಹಿಂದಿಕ್ಕಲಾಗದು’ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಪ್ರತಿಪಾದಿಸಿದರು.

ಮಾನಸಗಂಗೋತ್ರಿಯ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ನಡೆದ 60ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿ, ‘ಬ್ರಿಟಿಷರ ಶಿಕ್ಷಣ ಪದ್ಧತಿಯನ್ನೇ ಇನ್ನೂ ಅನುಸರಿಸುತ್ತಿದ್ದೇವೆ. ಸುಳ್ಳು ಇತಿಹಾಸವನ್ನು ಮಕ್ಕಳಿಗೆ ಬೋಧಿಸುತ್ತಿದ್ದೇವೆ. ಶಿಕ್ಷಕರಿಗೆ ಅಧಿಕಾರಿಗಳಿಗಿಂತ ಹೆಚ್ಚಿನ ಭತ್ಯೆ ನೀಡಬೇಕು. ಇಡೀ ಕ್ಷೇತ್ರವನ್ನು ಆಮೂಲಾಗ್ರವಾಗಿ ಬದಲಿಸಬೇಕು’ ಎಂದರು.

‘ವರ್ಣ, ಜಾತಿಗಳು ವೃತ್ತಿ ಆಧರಿಸಿ ವಿಂಗಡಿಸಿದವು. ಯಾರೂ ಬೇಕಾದರೂ ಬ್ರಾಹ್ಮಣರಾಗುವ– ಕ್ಷತ್ರಿಯರಾಗುವ ಅವಕಾಶವಿದೆ. ಕ್ಷತ್ರೀಯ ವಿಶ್ವಾಮಿತ್ರ ಮಹರ್ಷಿಯಾಗಲಿಲ್ಲವೇ? ಅಂಬೇಡ್ಕರ್‌ ಕೂಡಾ ಬ್ರಾಹ್ಮಣರೇ. ಏಕೆಂದರೆ ಅವರು ಹೆಚ್ಚು ಓದಿದ್ದರು. ನೆಹರೂ ಯಾವುದೇ ಪರೀಕ್ಷೆಯಲ್ಲೂ ಉತ್ತೀರ್ಣರಾಗಿರಲಿಲ್ಲ. ಅವರ ಕುಟುಂಬವೂ ಅವರಂತೆಯೇ ಇದೆ’ ಎಂದರು.

ADVERTISEMENT

‘ಬ್ರಿಟಿಷರ ವಸಹಾತುಶಾಹಿ ಮನಸ್ಥಿತಿ ಯಿಂದ ಹುಟ್ಟಿದ್ದು ಪೆರಿಯಾರ್‌ರ ದ್ರಾವಿಡ ಸಿದ್ಧಾಂತ. ಬ್ರಿಟಿಷರೇ ಆಳಬೇಕೆಂದು ಅವರು ಮನವಿ ಕೊಟ್ಟಿದ್ದರು. ಆರ್ಯರು ಹೊರಗಿನಿಂದ ಬಂದವರಲ್ಲ. ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ ಅಧ್ಯಯನ ವಿಭಾಗದ ಸಂಶೋಧನೆಯು ದೇಶದ ನಾಗರಿಕರ ವಂಶವಾಹಿಯೆಲ್ಲ ಒಂದೇ ಎಂದು ಹೇಳುತ್ತದೆ. ಹೀಗಾಗಿ ಇಲ್ಲಿನವರೆಲ್ಲರೂ ಹಿಂದೂಗಳೇ’ ಎಂದು ಪ್ರತಿಪಾದಿಸಿದರು.

‘ಇಂಗ್ಲಿಷ್‌ನ ಜಾಗದಲ್ಲಿ ಸಂಸ್ಕೃತ ಆಡಳಿತ– ಸಂವಹನ ಭಾಷೆಯಾಗಬೇಕು. ಇನ್ನೈವತ್ತು ವರ್ಷಗಳಲ್ಲಿ ಹಿಂದಿಯೇ ಸಂಸ್ಕೃತವಾಗಲಿದೆ. ಆದ್ದರಿಂದ, ಮಾತೃ ಭಾಷೆಯ ಜೊತೆಗೆ 10ನೇ ತರಗತಿವರೆಗೆ ಸಂಸ್ಕೃತವನ್ನು ಕಲಿಸಬೇಕು’ ಎಂದರು.

‘ಭಾರತವು ಮೂರನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಐದಾರು ವರ್ಷದಲ್ಲಿ ಚೀನಾವನ್ನು ಹಿಂದಿಕ್ಕಲಿದ್ದೇವೆ. ಕೆಲವರು ಅರ್ಥ ವ್ಯವಸ್ಥೆ ಸುಧಾರಿಸಲು ನನ್ನ ಅನುಭವ ಬಳಸಿಕೊಳ್ಳುತ್ತಿಲ್ಲ. ನನಗೆ ಅಧಿಕಾರ ನೀಡಿದರೆ ಕಪ್ಪುಹಣವನ್ನು ಭಾರತಕ್ಕೆ ತರುತ್ತೇನೆ. ಭ್ರಷ್ಟಾಚಾರವನ್ನು ಸಂಪೂರ್ಣ ಕಿತ್ತೊಗೆಯುತ್ತೇನೆ’ ಎಂದು ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.