ADVERTISEMENT

ಬೀದರ್: ಮಕ್ಕಳಿಗೆ ಮೊಟ್ಟೆ ವಿತರಣೆಗೆ ತಕರಾರು

ಅತ್ತ ಪ್ರತಿಭಟನೆ; ಇತ್ತ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 19:31 IST
Last Updated 30 ನವೆಂಬರ್ 2021, 19:31 IST
ಮೊಟ್ಟೆ
ಮೊಟ್ಟೆ   

ಬೀದರ್‌: ಅನುದಾನಿತ, ಸರ್ಕಾರಿ ಶಾಲೆಗಳ 1 ರಿಂದ 8ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ಕೊಡುವ ಸರ್ಕಾರದ ಆದೇಶಕ್ಕೆ ಜಿಲ್ಲೆಯಲ್ಲಿ ಪರ–ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.

‘ಸರ್ಕಾರವು ಆದೇಶ ಹಿಂಪಡೆಯಬೇಕು’ ಎಂದು ಒತ್ತಾಯಿಸಿ ಮಂಗಳವಾರ ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ ಮತ್ತು ಅಕ್ಕನಾಗಲಾಂಬಿಕಾ ಮಹಿಳಾ ಗಣ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

‘ಮೊಟ್ಟೆ ಸಸ್ಯಾಹಾರ, ಮಾಂಸಾಹಾರ ಅಲ್ಲ. ಅದು ಪೌಷ್ಟಿಕಾಂಶಗಳಿಂದ ತುಂಬಿದ ದ್ರವ. ಮೊಟ್ಟೆಗೆ ಧರ್ಮ, ಜಾತಿ ಲೇಪನ ಮಾಡಬಾರದು’ ಆರ್‌ಪಿಐ, ಭಾರತೀಯ ವಿದ್ಯಾರ್ಥಿ ಸಂಘ ಸೇರಿ ವಿವಿಧ ಸಂಘಟನೆಗಳು ಕೋರಿವೆ.

ADVERTISEMENT

ಪ್ರತಿಭಟನೆ: ‘ಕೋಳಿಮೊಟ್ಟೆಯಿಂದ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವ ಕಳಕಳಿ ಇದ್ದರೆ ಹಣ್ಣು, ದ್ವಿದಳ ಧಾನ್ಯಗಳು, ಮೊಳಕೆ ಕಾಳು ಮುಂತಾದವನ್ನು ನೀಡುವ ವ್ಯವಸ್ಥೆ ಮಾಡಬೇಕು’ ಎಂದು ಬಸವ ಮಂಟಪದ ಪ್ರಧಾನ ಸಂಚಾಲಕಿ ಮಾತೆ ಸತ್ಯಾದೇವಿ ಒತ್ತಾಯಿಸಿದರು.

ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಬಸವರಾಜ ಧನ್ನೂರ ಅವರು, ‘2007ರಲ್ಲಿ ಸರ್ಕಾರ ಹೋರಾಟಕ್ಕೆ ಮಣಿದು ನಿರ್ಧಾರ ಕೈಬಿಟ್ಟಿತ್ತು.ಈಗ ಮುಖ್ಯಮಂತ್ರಿ ಬೊಮ್ಮಾಯಿ ಅವರು ಈ ನಿರ್ಧಾರ ಕೈಗೊಂಡಿದ್ದು ಸರಿಯಲ್ಲ’ ಎಂದರು.

ಸೂಕ್ತ ನಿರ್ಧಾರ:ಆರ್‌ಪಿಐ (ಅಂಬೇಡ್ಕರ್) ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಗೋರನಾಳಕರ್ ಅವರು, ‘ಅಂಗನವಾಡಿ ಕೇಂದ್ರಗಳಲ್ಲಿ ಈಗಲೂ ಮೊಟ್ಟೆ ವಿತರಿಸಲಾಗುತ್ತಿದೆ. ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರಿಗೆ ಮೊಟ್ಟೆ ವಿತರಿಸಲಾಗುತ್ತಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಸೂಕ್ತ ನಿರ್ಣಯ ಕೈಗೊಂಡಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.