ಬೆಂಗಳೂರು: ಪ್ರಸ್ತುತ ವಿದ್ಯುತ್ ದರ ಪರಿಷ್ಕರಿಸುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್ಸಿ) ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂಗಳು) ಪ್ರಸ್ತಾವ ಸಲ್ಲಿಸಿವೆ.
ಕೆಇಆರ್ಸಿ ಒಪ್ಪಿಗೆ ಸೂಚಿಸಿದರೆ ಹೊಸ ವರ್ಷದಲ್ಲಿ ವಿದ್ಯುತ್ ದರ ಹೆಚ್ಚಳವಾಗಲಿದೆ. ರಾಜ್ಯದಲ್ಲಿ ವಿದ್ಯುತ್ ದರ ಪರಿಷ್ಕರಿಸಿ ಒಂದು ವರ್ಷವಾಗಿರುವುದರಿಂದ ಹೊಸದಾಗಿ ಈ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆರ್ಥಿಕವಾಗಿ ನಷ್ಟವಾಗುತ್ತಿರುವುದರಿಂದ ಪ್ರತಿ ಯೂನಿಟ್ಗೆ ₹1.58 ಹೆಚ್ಚಿಸುವಂತೆ ಬೆಸ್ಕಾಂ ಕೋರಿಕೆ ಸಲ್ಲಿಸಿದೆ. ಎಲ್ಲ ಎಸ್ಕಾಂಗಳ ಪ್ರಸ್ತಾವಗಳನ್ನು ಕೆಇಆರ್ಸಿ ಪರಿಶೀಲಿಸಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ದರ ಪರಿಷ್ಕರಿಸಬಹುದು ಎಂದು ತಿಳಿಸಿವೆ.
ಕಳೆದ ವರ್ಷ ಬೆಸ್ಕಾಂ ₹1.35 ಹೆಚ್ಚಿಸುವಂತೆ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಕೆಇಆರ್ಸಿ 30 ಪೈಸೆ ಮಾತ್ರ ಹೆಚ್ಚಿಸಿತ್ತು.
‘ಸಂಸ್ಥೆಯ ಒಟ್ಟು ವೆಚ್ಚ ಮತ್ತು ಆದಾಯ ಪರಿಶೀಲಿಸಿ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಕೈಗಾರಿಕೆಗಳು ಮುಚ್ಚಿದ್ದವು. ಇದರಿಂದ ಕಂಪನಿಗೆ ಆದಾಯವು ಕಡಿಮೆಯಾಗಿದೆ. ಈ ರೀತಿಯ ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಲಾಗಿದೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.