ಮೈಸೂರು: ‘ಸಿ.ಡಿ ಪ್ರಕರಣದಿಂದ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟಾಗಿರುವುದು ನಿಜ. ಏನು ಮಾಡುವುದು? ಸರ್ಕಾರ ನಡೆಸುವಾಗ ಇಂಥ ಘಟನೆಗಳು ಎದುರಾಗುತ್ತಿರುತ್ತವೆ’ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಶನಿವಾರ ಇಲ್ಲಿ ತಿಳಿಸಿದರು.
‘ನಾವು ಅಷ್ಟು ಪ್ರಬುದ್ಧರಾಗಿಲ್ಲ. ವ್ಯಕ್ತಿಯೊಬ್ಬರ ವೈಯಕ್ತಿಕ ಬದುಕನ್ನು ಇಷ್ಟು ದೊಡ್ಡದಾಗಿ ಮಾಡಬಾರದಿತ್ತು, ಇದೊಂದು ವೈಯಕ್ತಿಕ ಘಟನೆ ಎಂದು ಸುಮ್ಮನಾಗಿ ಬಿಡಬಹುದಿತ್ತು. ಆದರೆ, ತೇಜೋವಧೆ ಮಾಡಲಾಗಿದೆ’ ಎಂದು ಹೇಳಿದರು.
ಶಾಸಕ ರಮೇಶ ಜಾರಕಿಹೊಳಿ ಬಂಧನ ಸಾಧ್ಯತೆ ವಿಚಾರವಾಗಿ ಪ್ರತಿಕ್ರಿಯಿಸಿ, ‘ಒಬ್ಬ ಮನುಷ್ಯನನ್ನು ಏಕಾಏಕಿ ಬಂಧಿಸುವುದು ಕಷ್ಟ. ಯುವತಿ ಹೇಳಿಕೆಗಳಲ್ಲಿಯೇ ಹಲವು ಗೊಂದಲಗಳಿವೆ. ಹೀಗಾಗಿ, ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಮುಂದಿನ ಹೆಜ್ಜೆ ಇಡಬೇಕು. ಆಕೆಯೇ ಮುಂದೆ ಬಂದು ದೃಢವಾಗಿ ಹೇಳಿದ್ದರೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದರು’ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೆಸರು ಪದೇಪದೇ ಪ್ರಸ್ತಾಪವಾಗುತ್ತಿರುವ ಕುರಿತು, ‘ಆಡಿಯೊದಲ್ಲಿ ಆಕೆ ಶಿವಕುಮಾರ್ ಹೆಸರು ಪ್ರಸ್ತಾಪ ಮಾಡಿದ್ದಾಳೆ ಅಷ್ಟೆ. ಈ ಸಂಬಂಧ ಯಾವುದೇ ರೀತಿಯ ಸಾಕ್ಷ್ಯ ನೀಡಿಲ್ಲ. ಶಿವಕುಮಾರ್ ಈ ರೀತಿ ಮಾಡಲಾರರು ಎಂಬುದು ನನ್ನ ಭಾವನೆ’ ಎಂದು ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.