ADVERTISEMENT

ಕಾಂಗ್ರೆಸ್‌ ವಿರುದ್ಧ ಎಚ್‌.ಸಿ ಬಾಲಕೃಷ್ಣ ಅಸಮಾಧಾನ: ಬಿಜೆಪಿಯತ್ತ ಒಲವು?

​ಪ್ರಜಾವಾಣಿ ವಾರ್ತೆ
Published 14 ಮೇ 2020, 2:00 IST
Last Updated 14 ಮೇ 2020, 2:00 IST
ಮಾಜಿ ಶಾಸಕ ಎಚ್‌.ಸಿ ಬಾಲಕೃಷ್ಣ
ಮಾಜಿ ಶಾಸಕ ಎಚ್‌.ಸಿ ಬಾಲಕೃಷ್ಣ    

ರಾಮನಗರ: ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣ ಬುಧವಾರ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅವರು ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾಗಡಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಬಾಲಕೃಷ್ಣ ಪರೋಕ್ಷವಾಗಿ ಡಿ.ಕೆ. ಸಹೋದರರ ವಿರುದ್ಧ ಕಿಡಿಕಾರಿದರು. ‘ಕಾಂಗ್ರೆಸ್ ಪಕ್ಷದಲ್ಲಿ ನನಗೆ ಕೊಡಬೇಕಾದ ಗೌರವ ಕೊಡದೇ ಮೂಲೆಗುಂಪು ಮಾಡಲಾಗಿದೆ. ಕಾಂಗ್ರೆಸ್ ನಾಯಕರು ಸ್ಥಳೀಯ ಶಾಸಕ ಎ.ಮಂಜುನಾಥ್‌ ಜೊತೆ ತಿರುಗಾಡುತ್ತಾರೆ. ಸಂಸದ ಡಿ.ಕೆ. ಸುರೇಶ್ ಸಹ ಅವರ ಜೊತೆಯೇ ಕಾರ್ಯಕ್ರಮಗಳಿಗೆ ಹೋಗುತ್ತಾರೆ. ನನ್ನನ್ನು ಆಹ್ವಾನಿಸುವ ಸೌಜನ್ಯ ತೋರುತ್ತಿಲ್ಲ’ ಎಂದರು.

‘ನಾನು ಯಾವುದೇ ಪಕ್ಷವನ್ನು ನಂಬಿದವನಲ್ಲ. ನನಗೆ ಪಕ್ಷಕ್ಕಿಂತ ಕಾರ್ಯಕರ್ತರು ಮುಖ್ಯ. ಅವರ ಆಶಯದಂತೆ ನಡೆಯುತ್ತೇನೆ’ ಎಂದೂ ಅವರು ಹೇಳಿದರು. ‘ಹಾಗಂತ ನಾನು ಕಾಂಗ್ರೆಸ್ ಬಿಡುತ್ತೇನೆ. ಬಿಜೆಪಿ ಸೇರುತ್ತೇನೆ ಎಂದು ಹೇಳಲಾರೆ. ಈಗ ಆ ಬಗ್ಗೆ ಮಾತನಾಡುವುದು ಸೂಕ್ತ ಅಲ್ಲ’ ಎಂದರು.

ADVERTISEMENT

ಸಿ.ಎಂ. ಭೇಟಿ: ಬಾಲಕೃಷ್ಣ ಎರಡು ದಿನದ ಹಿಂದಷ್ಟೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ಬಿಡದಿ ಉಪನಗರ ಯೋಜನೆ ಸಂಬಂಧದ ಚರ್ಚೆ ಸಲುವಾಗಿ ಹೋಗಿದ್ದರಾದರೂ ಅಲ್ಲಿಯೂ ಈ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಜೆಡಿಎಸ್‌ನಿಂದ ಮೂರು ಬಾರಿ ಶಾಸಕರಾಗಿದ್ದ ಬಾಲಕೃಷ್ಣ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಸೇರಿದ್ದರು. ಆದರೆ ಆಗಿನಿಂದಲೂ ಅವರಿಗೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಹೊಂದಾಣಿಕೆ ಸಾಧ್ಯವಾಗಿಲ್ಲ. ಕಳೆದ ಲೋಕಸಭೆ ಚುನಾವಣೆ ಸಂದರ್ಭವೂ ಬಿಜೆಪಿ ಸೇರಲಿದ್ದಾರೆ ಎಂದು ಸುದ್ದಿ ಹಬ್ಬಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.