ADVERTISEMENT

ಡಿಸಿಎಂ ಅವಕಾಶವೂ ಸಿಗಬಹುದು: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 11:30 IST
Last Updated 16 ಅಕ್ಟೋಬರ್ 2020, 11:30 IST
ಶ್ರೀರಾಮುಲು
ಶ್ರೀರಾಮುಲು   

ಬಳ್ಳಾರಿ: ‘ಬಿಜೆಪಿ ಸರ್ಕಾರ ರಚನೆಯಾದ ಸಂದರ್ಭದಲ್ಲೇ ಸಮಾಜಕಲ್ಯಾಣ ಖಾತೆಯನ್ನು ಕೇಳಿದ್ದರೂ ಈಗ ದೊರಕಿದೆ. ಉಪಮುಖ್ಯಮಂತ್ರಿಯಾಗುವ ಅವಕಾಶವೂ ಮುಂದಿನ ದಿನಗಳಲ್ಲಿ ಬರಬಹುದು. ಅದಕ್ಕಾಗಿ ಕಾಯಬೇಕಷ್ಟೇ’ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.

ನಗರದಲ್ಲಿ ಶುಕ್ರವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸದ್ಯ ಪಕ್ಷದ ಮುಂದೆ ಚುನಾವಣೆಗಳನ್ನು ಎದುರಿಸುವ ಸವಾಲಿದೆ. ಪಕ್ಷ ಎರಡೂ ಉಪಚುನಾವಣೆಗಳಲ್ಲಿ ಗೆಲ್ಲುತ್ತದೆ. ನಂತರ ನಮಗೆ ಶಕ್ತಿ ಬರುತ್ತದೆ. ಆಗ ಅವಕಾಶಗಳನ್ನು ಕೇಳಲು ಸಾಧ್ಯ’ ಎಂದರು.

‘ನನ್ನನ್ನು ಪಕ್ಷ ಎಂದಿಗೂ ಬಿಟ್ಟುಕೊಟ್ಟಿಲ್ಲ. ಕೇಳಿದ ಇಲಾಖೆಯನ್ನೇ ಕೊಟ್ಟಿರುವುದರಿಂದ ಕೆಲಸ ಮಾಡಲು ಅವಕಾಶವಾಗುತ್ತದೆ. ಆರೋಗ್ಯ ಇಲಾಖೆಯಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇನೆ. ಹೀಗಾಗಿಯೇ ಸಮಾಜ ಕಲ್ಯಾಣ ಇಲಾಖೆಯನ್ನು ಕೊಟ್ಟಿದ್ದಾರೆ’ ಎಂದರು.

ADVERTISEMENT

‘ದೇವರಾಜ ಅರಸ್‌ ಅವರಿಂದ ಇಲ್ಲಿವರೆಗೆ ಮುಖ್ಯಮಂತ್ರಿಗಳಾದವರು ಕೈಗೊಂಡ ತೀರ್ಮಾನಗಳ ಬಗ್ಗೆ ಅಧ್ಯಯನ ಮಾಡುತ್ತಿರುವೆ. ತಳಸಮುದಾಯದ ಜನರಿಗೆ ಸಹಾಯ ಮಾಡಲು ಸಮಾಜ ಕಲ್ಯಾಣ ಇಲಾಖೆಯಲ್ಲಿ ಅವಕಾಶವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.