ADVERTISEMENT

ನೆಲಕಚ್ಚಿದ ಮೆಣಸಿನಕಾಯಿ ದರ

ರೈತರಿಗೆ ದಾಸ್ತಾನು ಹೊರೆ; ಶೀತಲಗೃಹ ಮಾಲೀಕರಿಗೂ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 25 ಜನವರಿ 2025, 18:06 IST
Last Updated 25 ಜನವರಿ 2025, 18:06 IST
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ರಾಮಗೇರಿ ಗ್ರಾಮದಲ್ಲಿ ರೈತರು ಒಣಗಲು ಹಾಕಿರುವ ಮೆಣಸಿನಕಾಯಿ 
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ರಾಮಗೇರಿ ಗ್ರಾಮದಲ್ಲಿ ರೈತರು ಒಣಗಲು ಹಾಕಿರುವ ಮೆಣಸಿನಕಾಯಿ    

ಬಳ್ಳಾರಿ: ಜಿಲ್ಲೆಯಲ್ಲಿ ಮೆಣಸಿನಕಾಯಿ ಬೆಳೆದಿರುವ ರೈತರು ಹಾಗೂ ದಾಸ್ತಾನು ಮಾಡಿಕೊಂಡಿರುವ ಶೀತಲಗೃಹಗಳ ಮಾಲೀಕರು, ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.   

ಈ ಬಾರಿ ಜಿಲ್ಲೆಯ ಸುಮಾರು ಒಂದು ಲಕ್ಷ ಎಕರೆಯಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಸಂತೋಷ್‌ ಸಪ್ಪಂಡಿ ಹೇಳಿದ್ದಾರೆ.

ಪ್ರತಿ ಎಕರೆಗೆ 18ರಿಂದ 20 ಕ್ವಿಂಟಲ್‌ ಇಳುವರಿ ಬರುವ ನಿರೀಕ್ಷೆ ಇತ್ತು. ಆದರೆ, ಕಪ್ಪುಚುಕ್ಕೆ ರೋಗದಿಂದ ಶೇ 30ರಷ್ಟು ಬೆಳೆ ಹಾನಿಗೀಡಾಗಿದೆ.

ADVERTISEMENT

ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹9 ಸಾವಿರದಿಂದ ₹15 ಸಾವಿರದವರೆಗೆ ಬೆಲೆ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ₹20 ಸಾವಿರದಿಂದ ₹25 ಸಾವಿರದ ವರೆಗೆ ಬೆಲೆ ಇತ್ತು.

ಸೂಕ್ತ ಬೆಲೆ ದೊರೆಯದ ಕಾರಣ 2023–24ನೇ ಸಾಲಿನಡಿ ಬೆಳೆದಿದ್ದ ಸುಮಾರು 15 ಲಕ್ಷ ಚೀಲದಷ್ಟು ಮೆಣಸಿನಕಾಯಿಯನ್ನು ರೈತರು ಶೀತಲಗೃಹಗಳಲ್ಲಿ ದಾಸ್ತಾನು ಇಟ್ಟಿದ್ದಾರೆ. ದಾಸ್ತಾನು ವೇಳೆ  ಕ್ವಿಂಟಲ್‌ಗೆ ₹20 ಸಾವಿರದಿಂದ ₹25 ಸಾವಿರದವರೆಗೆ ಬೆಲೆ ಇತ್ತು.

ಇದನ್ನು ನಂಬಿಕೊಂಡು ರೈತರು ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದಾರೆ. ಈಗ ಹಳೆಯ ಮೆಣಸಿನಕಾಯಿ ಬೆಲೆಯು ಕ್ವಿಂಟಲ್‌ಗೆ ₹7,500ರಿಂದ ₹9 ಸಾವಿರ ಇದೆ. ಹಾಗಾಗಿ, ರೈತರು ದಾಸ್ತಾನಿಟ್ಟಿದ್ದ ಸರಕು ಏನಾಗಿದೆ ಎಂದೂ ವಿಚಾರಿಸುತ್ತಿಲ್ಲ. ಇದು ಶೀತಲಗೃಹಗಳ ಮಾಲೀಕರನ್ನು ಆತಂಕಕ್ಕೆ ದೂಡಿದೆ.

‘ವಿದ್ಯುತ್‌ ಬಿಲ್‌ ಕಟ್ಟಲು, ಕೆಲಸಗಾರರಿಗೆ ಸಂಬಳ ನೀಡಲೂ ಆಗದೆ ಒದ್ದಾಡುತ್ತಿದ್ದೇವೆ’ ಎನ್ನುತ್ತಾರೆ ಶೀತಲಗೃಹಗಳ ಮಾಲೀಕರ ಸಂಘದ ಅಧ್ಯಕ್ಷ ಸತ್ಯಬಾಬು.  

ಜಿಲ್ಲೆಯಲ್ಲಿ ಈ ಬಾರಿ ಇಳುವರಿ ಕುಸಿದಿದೆ. ಆದರೆ, ಆಂಧ್ರಪ್ರದೇಶದ ಗುಂಟೂರು, ತೆಲಂಗಾಣದ ವಾರಂಗಲ್‌, ಭದ್ರಾಚಲಂನಲ್ಲಿಯೂ ಇಳುವರಿ ಉತ್ತಮವಾಗಿಲ್ಲ. ಹಾಗಾಗಿ, ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾಗಲಿದೆ ಎಂಬುದು ಶೀತಲಗೃಹಗಳ ಮಾಲೀಕರ ನಿರೀಕ್ಷೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ಎಪಿಎಂಸಿಗೆ ರೈತರು ಮಾರಾಟಕ್ಕೆ ತಂದಿರುವ ಒಣ ಮೆಣಸಿನಕಾಯಿ
ಈ ಬಾರಿ ಹೆಚ್ಚು ಮಳೆ ಸುರಿಯಿತು. ಇದರಿಂದ ಇಳುವರಿ ಕಡಿಮೆಯಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಒಣಮೆಣಸಿನಕಾಯಿ ದರ ಏರಿಕೆಯಾಗುವ ನಿರೀಕ್ಷೆಯಿದೆ
ಬಸವರಾಜ ಹರವಿ ಬೆಳೆಗಾರ ಕುಂದಗೋಳ 

ಮಾರುಕಟ್ಟೆಯತ್ತ ಸುಳಿಯದ ಕಂಪನಿಗಳು!

ಹಾವೇರಿ: ಜಿಲ್ಲೆಯ ಬ್ಯಾಡಗಿ ಎಪಿಎಂಸಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮೆಣಸಿನಕಾಯಿ ಆವಕ ಹಾಗೂ ದರದಲ್ಲಿ ಶೇ 50ರಷ್ಟು ಇಳಿಕೆಯಾಗಿದೆ.

ಬ್ಯಾಡಗಿ ಮೂಲ ತಳಿಗೆ ಹೆಚ್ಚು ಬೆಲೆ ಸಿಗುತ್ತಿತ್ತು. ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದ ಇಳುವರಿ ಕಡಿಮೆಯಾಗಿದ್ದು ಮಾರುಕಟ್ಟೆಯಲ್ಲಿ ಬೇಡಿಕೆಯೂ ಕುಸಿದಿದೆ. ರೈತರು ಮೆಣಸಿನಕಾಯಿ ಕೃಷಿ ಮಾಡುವಾಗ ಹೇರಳವಾಗಿ ರಸಗೊಬ್ಬರ ಮತ್ತು ಕೀಟನಾಶಕ ಬಳಸುತ್ತಾರೆ.

ಕೀಟನಾಶಕ ಅಂಶವು ಮೆಣಸಿನಕಾಯಿಯಲ್ಲಿ ಬೆರೆತು ಹೋಗುತ್ತದೆ. ಮೆಣಸಿನಕಾಯಿ ಸೇರಿ ಆಹಾರ ಪದಾರ್ಥಗಳಲ್ಲಿ ಇರಬೇಕಾದ ಕೀಟನಾಶಕ ಅವಶೇಷಗಳ ಪ್ರಮಾಣದ ಮಿತಿಯನ್ನು ಭಾರತದ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್ಎಸ್ಎಐ) ನಿಗದಿಪಡಿಸಿದೆ. 

ನಿಗದಿತ ಮಿತಿಗಿಂತಲೂ ಅಧಿಕ ಕೀಟನಾಶಕ ಅಂಶ ಇರುವುದರಿಂದ ಸಂಬಾರ ಪದಾರ್ಥಗಳನ್ನು ತಯಾರಿಸುವ ಕಂಪನಿಗಳು ಮೆಣಸಿನಕಾಯಿ ಕೊಳ್ಳಲು ಜಿಲ್ಲೆಯತ್ತ ರುತ್ತಿಲ್ಲ ಎಂದು ಹೇಳಲಾಗಿದೆ. ಇದೇ ಬೇಡಿಕೆ ಕುಸಿತಕ್ಕೆ ಕಾರಣವಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ‘

ರಾಜ್ಯದ ಬ್ಯಾಡಗಿ ಹುಬ್ಬಳ್ಳಿ ಬಳ್ಳಾರಿ ಕಲಬುರಗಿ ಶಹಾಪುರ ಸೇರಿ ಆಂಧ್ರಪ್ರದೇಶದ ಶೀತಲಗೃಹಗಳಲ್ಲಿ ವರ್ತಕರು ದಾಸ್ತಾನಿಟ್ಟಿರುವ ಮೆಣಸಿನಕಾಯಿ ಇನ್ನೂ ಮಾರಾಟವಾಗಿಲ್ಲ. ಹೆಚ್ಚಿನ ಬೆಲೆಗೆ ಖರೀದಿಸಿರುವ ಈ ಮೆಣಸಿನಕಾಯಿಯ ಮಾರಾಟದಲ್ಲಿ ತೊಡಗಿದ್ದಾರೆ. ಹಾಗಾಗಿ ಹೊಸ ಉತ್ಪನ್ನದ ಖರೀದಿಗೆ ಆಸಕ್ತಿ ತೋರುತ್ತಿಲ್ಲ’ ಎಂದು ವರ್ತಕರ ಸಂಘದ ಗೌರವ ಕಾರ್ಯದರ್ಶಿ ವಿ.ಎಸ್. ಮೋರಿಗೇರಿ ಹೇಳುತ್ತಾರೆ.

ದರ ಏರಿಕೆ ಸಾಧ್ಯತೆ ಕ್ಷೀಣ

ಗದಗ: ಜಿಲ್ಲೆಯ 36 ಸಾವಿರ ಹೆಕ್ಟೇರ್‌ನಲ್ಲಿ ಮೆಣಸಿನಕಾಯಿ ಬಿತ್ತನೆಯಾಗಿದ್ದು ಇಳುವರಿ ಕೂಡ ಉತ್ತಮವಾಗಿದೆ.

ಆದರೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗಿರುವುದು ರೈತರನ್ನು ಆತಂಕಕ್ಕೆ ದೂಡಿದೆ. ಲಕ್ಷ್ಮೇಶ್ವರ ತಾಲ್ಲೂಕಿನ ಕೆಲವೆಡೆ ಫಸಲು ಉತ್ತಮವಾಗಿದ್ದರೆ ಮತ್ತೆ ಕೆಲವು ಕಡೆ ಇಳುವರಿ ಕುಸಿತವಾಗಿದೆ. ಕಳೆದ ವರ್ಷ ಕ್ವಿಂಟಲ್‌ಗೆ ₹35 ಸಾವಿರದವರೆಗೂ ಬೆಲೆ ಇತ್ತು. ಪ್ರಸ್ತುತ ₹8 ಸಾವಿರದಿಂದ ₹20 ಸಾವಿರ ಇದೆ. 

‘ರೋಣ ತಾಲ್ಲೂಕಿನ ಬಹುತೇಕ ರೈತರು ಹುಬ್ಬಳ್ಳಿ ಬ್ಯಾಡಗಿ ಮತ್ತು ಗದಗ ಮಾರುಕಟ್ಟೆಗೆ ಒಣಮೆಣಸಿನಕಾಯಿ ತೆಗೆದುಕೊಂಡು ಹೋಗುತ್ತಾರೆ. ಕ್ವಿಂಟಲ್‌ಗೆ ₹30 ಸಾವಿರ ಬೆಲೆ ಸಿಗುತ್ತದೆಂದು ನಿರೀಕ್ಷೆ ಇತ್ತು. ಮಾರುಕಟ್ಟೆಯಲ್ಲಿ ದರ ಕುಸಿದಿರುವುದು ನಿರಾಸೆ ಮೂಡಿಸಿದೆ’ ಎನ್ನುತ್ತಾರೆ ರೈತರಾದ ಶರಣಪ್ಪ ಹದ್ಲಿ ಮತ್ತು ಮಲ್ಲಣ್ಣ ದಾದ್ಮಿ.

‘ಗದಗ ರೋಣ ಗಜೇಂದ್ರಗಡ ಮುಂಡರಗಿ ಮತ್ತು ಶಿರಹಟ್ಟಿ ತಾಲ್ಲೂಕಿನಲ್ಲಿ ಹೆಚ್ಚಾಗಿ ಮೆಣಸಿನಕಾಯಿ ಬೆಳೆಯಲಾಗುತ್ತದೆ. ಸದ್ಯ ಗುಣಮಟ್ಟದ ಮೆಣಸಿನಕಾಯಿಗೆ ಉತ್ತಮ ದರ ಇದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಆವಕ ಹೆಚ್ಚಳವಾದರೆ ದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ’ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಶಿಕಾಂತ ಕೋಟಿಮನಿ ಹೇಳುತ್ತಾರೆ. 

ಕಳೆದ ವರ್ಷ ಬ್ಯಾಡಗಿ ಮಾರುಕಟ್ಟೆಗೆ ಮೆಣಸಿನಕಾಯಿಯು ದೊಡ್ಡ ಪ್ರಮಾಣದಲ್ಲಿ ಆವಕ ಆಗಿತ್ತು. ಆಗ ವ್ಯಾಪಾರಸ್ಥರು ಖರೀದಿಸಿದ್ದ ಮೆಣಸಿನಕಾಯಿ ದಾಸ್ತಾನು ಇದೆ. ಇದರಿಂದ ಬೆಲೆ ಕಡಿಮೆಯಾಗಿದೆ. ಮುಂಬರುವ ದಿನಗಳಲ್ಲೂ ಬೆಲೆ ಏರಿಕೆಯಾಗುವ ಸಾಧ್ಯತೆ ಕಡಿಮೆ ಎಂಬುದು ರೈತರ ಅನಿಸಿಕೆ.

ಮಾಸಿದ ಬಣ್ಣ; ಕುಸಿದ ಬೇಡಿಕೆ

ಧಾರವಾಡ/ಹುಬ್ಬಳ್ಳಿ: ಈ ಬಾರಿ ಜಿಲ್ಲೆಯ 11500 ಹೆಕ್ಟೇರ್‌ನಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ. ಸತತ ಮಳೆಯಿಂದ ಮೆಣಸಿನಕಾಯಿ ಗುಣಮಟ್ಟ ಕಳೆದುಕೊಂಡಿದೆ. ಮಳೆ ಹಾಗೂ ತೇವಾಂಶ ಹೆಚ್ಚಳದಿಂದಾಗಿ ಒಣಮೆಣಸಿನಕಾಯಿಯ ಬಣ್ಣ ಮಾಸಿದೆ. ಕೆಂಪು ಕಾಯಿ ಕಪ್ಪುಬಣ್ಣಕ್ಕೆ ತಿರುಗಿದೆ.

ಕಳೆದ ವರ್ಷ ಶೀತಲಗೃಹಗಳಲ್ಲಿ ದಾಸ್ತಾನಿಟ್ಟಿರುವ ಮೆಣಸಿನಕಾಯಿಯ ಗುಣಮಟ್ಟವೂ ತೃಪ್ತಿಕರವಾಗಿಲ್ಲ. ಇದರಿಂದ ಸ್ಥಳೀಯ ಮಾರುಕಟ್ಟೆ ಹಾಗೂ ಹೊರರಾಜ್ಯಗಳಲ್ಲಿ ಬೇಡಿಕೆ ಕುಸಿದಿದೆ. ಮತ್ತೊಂದೆಡೆ ದರವೂ ಕುಸಿದಿದೆ. ‘ಜಿಲ್ಲೆಯ ಕುಂದಗೋಳ ಹುಬ್ಬಳ್ಳಿ ಅಣ್ಣಿಗೇರಿ ನವಲಗುಂದ ಭಾಗದಲ್ಲಿ ಹೆಚ್ಚಾಗಿ ಮೆಣಸಿನಕಾಯಿ ಬೆಳೆಯಲಾಗುತ್ತದೆ’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕಾಶಿನಾಥ ಭದ್ರಣ್ಣವರ ತಿಳಿಸಿದ್ದಾರೆ.

  ಇಲ್ಲಿನ ಅಮರಗೋಳ ಎಪಿಎಂಸಿ ಮಾರುಕಟ್ಟೆಯಲ್ಲಿ ಒಣಮೆಣಸಿನಕಾಯಿ ದರವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 35ರಷ್ಟು ಇಳಿಕೆಯಾಗಿದೆ. ಕಳೆದ ವರ್ಷ ಗುಣಮಟ್ಟದ ಸರಕಿಗೆ ಕ್ವಿಂಟಲ್‌ಗೆ ಗರಿಷ್ಠ ₹60 ಸಾವಿರ ಇದ್ದ ದರವು ಈಗ ₹41 ಸಾವಿರಕ್ಕೆ ಕುಸಿದಿದೆ. ಸರಾಸರಿ ದರ ಕ್ವಿಂಟಲ್‌ಗೆ ₹13 ಸಾವಿರ ಇದೆ. ಹಾವೇರಿ ಗದಗ ಬಳ್ಳಾರಿಯಿಂದಲೂ ಇಲ್ಲಿನ ಮಾರುಕಟ್ಟೆಗೆ ಮೆಣಸಿನಕಾಯಿ ಆವಕವಾಗುತ್ತದೆ. ಕಳೆದ ಒಂದು ತಿಂಗಳಲ್ಲಿ ಮಾರುಕಟ್ಟೆಗೆ 30 ಸಾವಿರ ಕ್ವಿಂಟಲ್‌ ಅಷ್ಟೇ ಆವಕವಾಗಿದೆ. ಬೇಡಿಕೆ ಕುಸಿತದಿಂದಾಗಿ ಮುಂಬೈ ಪುಣೆ ಕೋಲ್ಕತ್ತ ಮಾರುಕಟ್ಟೆಗೆ ಪೂರೈಕೆಯಾಗುತ್ತಿದ್ದ ಪ್ರಮಾಣದಲ್ಲೂ ಕಡಿಮೆಯಾಗಿದೆ ಎಂದು ವ್ಯಾ‍‍ಪಾರಿಗಳು ಹೇಳುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.