ಹೊಸನಗರ: ಸಮೀಪದ ನಗರ ಹೋಬಳಿ ನಾಡ ಕಚೇರಿ ಎದುರು ನಡೆಯುತ್ತಿರುವ ರೈತರ ಸಮಸ್ಯೆ ಕುರಿತ ಪ್ರತಿಭಟನಾ ಸಭೆಯಲ್ಲಿ ಸೋಮವಾರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕುಸಿದು ಬಿದ್ದರು.
ವೇದಿಕೆಯಲ್ಲಿ ವಾಂತಿ ಮಾಡಿಕೊಂಡು, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಅವರನ್ನು ಕೂಡಲೇ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಥಮ ಚಿಕಿತ್ಸೆಗೆ ಕರೆದೊಯ್ಯಲಾಯಿತು. ವೈದ್ಯಾಧಿಕಾರಿ ಡಾ. ತೇಜಸ್ವಿ ತುರ್ತು ಚಿಕಿತ್ಸೆ ನೀಡಿದರು. ರಕ್ತದಲ್ಲಿ ಸಕ್ಕರೆ ಅಂಶ ಇಳಿಮುಖ ಆಗಿರುವುದರಿಂದ ಪ್ರಜ್ಞೆ ಕಳೆದುಕೊಂಡಿದ್ದರು. ಇದಕ್ಕೆ ಚಿಕಿತ್ಸೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಚೇತರಿಕೆಯ ನಂತರ ಯಾವುದೇ ವೀಲ್ ಚೇರ್ ಬಳಸದೇ ಅವರು ನಡೆದುಕೊಂಡೇ ಕಾರಿಗೆ ಹೋಗಲು ಸಜ್ಜಾದರು. ಈ ವೇಳೆ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ದಯಾನಂದ್ ಆರೋಗ್ಯ ವಿಚಾರಿಸಿದರು. ಈ ವೇಳೆಯಲ್ಲಿಯೂ ನಗರ ಹೋಬಳಿ ರೈತರ ಸಮಸ್ಯೆಗೆ ಕೂಡಲೇ ಪರಿಹಾರ ನೀಡುವಂತೆ ಕೋರಿದರು.
ಸುಮಾರು ಒಂದು ತಾಸಿನ ವಿಶ್ರಾಂತಿಯಿಂದಚೇತರಿಸಿಕೊಂಡ ತಿಮ್ಮಪ್ಪ ಅವರು ಕಾರಿನಲ್ಲಿ ಸಾಗರಕ್ಕೆ ತೆರಳಿದರು.
ಈ ಪ್ರಕರಣ ಕೆಲ ಹೊತ್ತು ಆತಂಕಕ್ಕೆ ಕಾರಣ ಆಗಿತ್ತು. ತ್ವರಿತ ಚಿಕಿತ್ಸೆ ದೊರೆತು, ಕಾಗೋಡು ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಮರೆಯಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.