ಬೆಂಗಳೂರು: ಭವಿಷ್ಯ ನಿಧಿ ಪ್ರಾಧಿಕಾರದಿಂದ ನ್ಯಾಯಯುತ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನಿವೃತ್ತ ನೌಕರರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಉಪವಾಸ ಸತ್ಯಾಗ್ರಹ ನಡೆಸಿದರು.
ನಿವೃತ್ತ ನೌಕರರ ಸಂಘದ ನೇತೃತ್ವದಲ್ಲಿ ಮೌರ್ಯ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನದ ತನಕ ಮೆರವಣಿಗೆ ನಡೆಸಿ, ಬಳಿಕ ಧರಣಿ ನಡೆಸಿದರು.
ಕೇಂದ್ರ ಸರ್ಕಾರ 1995ರಲ್ಲಿ ಜಾರಿಗೆ ತಂದ (ಇಪಿಎಸ್-95) ಪಿಂಚಣಿ ಯೋಜನೆಗೆ ಸಾರಿಗೆ ಸಂಸ್ಥೆಗಳ ನೌಕರರನ್ನೂ ಸೇರ್ಪಡೆ ಮಾಡಲಾಗಿದೆ. ನೌಕರರಿಂದ ಭವಿಷ್ಯ ನಿಧಿಗೆ ಹಣದ ವಂತಿಗೆ ಸಲ್ಲಿಸಲಾಗಿದೆ. ಆದರೆ, 25ರಿಂದ 35 ವರ್ಷಗಳ ಸೇವೆ ಸಲ್ಲಿಸಿದ ನೌಕರರಿಗೆ ತಿಂಗಳಿಗೆ ಕನಿಷ್ಠ ₹1 ಸಾವಿರದಿಂದ ಗರಿಷ್ಠ 3₹ ಸಾವಿರ ಪಿಂಚಣಿಯನ್ನು ಭವಿಷ್ಯ ನಿಧಿ ಪ್ರಾಧಿಕಾರ ನೀಡುತ್ತಿದೆ ಎಂದು ಪ್ರತಿಭಟನನಿರತರು ಹೇಳಿದರು.
‘ಸುಪ್ರೀಂ ಕೋರ್ಟ್ 2016ರಲ್ಲಿ ನ್ಯಾಯಯುತ ಪಿಂಚಣಿ ನೀಡಬೇಕು ಎಂದು ಆದೇಶಿಸಿದ್ದರೂ, ಅದನ್ನು ಪ್ರಾಧಿಕಾರ ಪಾಲಿಸುತ್ತಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಬೇರೆ ಸಂಸ್ಥೆಗಳ ನಿವೃತ್ತ ನೌಕರರಿಗೆ ನೀಡುತ್ತಿರುವ ಮಾದರಿಯಲ್ಲೇ ಸಾರಿಗೆ ಸಂಸ್ಥೆ ನಿವೃತ್ತ ನೌಕರರಿಗೂ ಪಿಂಚಣಿ ನೀಡಬೇಕು’ ಎಂದು ಆಗ್ರಹಿಸಿದರು.
ಪ್ರಾದಿಕಾರ ಸ್ಪಂದಿಸದ ಕಾರಣಕ್ಕೆ ಅನಿವಾರ್ಯವಾಗಿ ಉಪವಾಸ ಸತ್ಯಾಗ್ರಹ ನಡೆಸಬೇಕಾಗಿದೆ ಎಂದು ಸಂಘದ ಅಧ್ಯಕ್ಷ ಶಂಕರ್ ಕುಮಾರ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.