ಉಳ್ಳಾಲ: ಮಂಗಳೂರಿನ ಬಂದರು ಪ್ರದೇಶದ ಮೀನುಗಾರಿಕಾ ದಕ್ಕೆಯಲ್ಲಿ ಲಂಗರು ಹಾಕಿದ್ದ ಮೀನುಗಾರಿಕಾ ಟ್ರಾಲ್ ದೋಣಿಯ ಹಗ್ಗ ತುಂಡಾಗಿ ಉಳ್ಳಾಲದ ಅಳಿವೆಬಾಗಿಲು ಸಮೀಪ ಬಂಡೆಗಳಿಗೆ ಸಿಲುಕಿ ಮುಳುಗಡೆಯಾಗಿದೆ. ದುಷ್ಕರ್ಮಿಗಳು ಹಗ್ಗ ತುಂಡರಿಸಿದ್ದಾರೆ ಅನ್ನುವ ಸಂಶಯವನ್ನು ದೋಣಿ ಮಾಲೀಕರು ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಬಜಾಲ್ ನಿವಾಸಿ ಮೌರಿಸ್ ಎಂಬವರಿಗೆ ಸೇರಿದ ‘ಪ್ರಾವಿಡೆನ್ಸ್’ ಹೆಸರಿನ ಮೀನುಗಾರಿಕಾ ಟ್ರಾಲ್ ದೋಣಿ ಇದಾಗಿದೆ. ಸೋಮವಾರ ನಸುಕಿನಲ್ಲಿ ಉಳ್ಳಾಲದ ಅಳಿವೆಬಾಗಿಲು ಬಳಿ ದೋಣಿ ಕಾಣಿಸಿತ್ತು. ತಕ್ಷಣವೇ ಅದನ್ನು ದಡಕ್ಕೆ ಎಳೆದು ತರಲು ಪ್ರಯತ್ನಿಸಲಾಯಿತು. ಆದರೆ, ಅಲೆಗಳ ಅಬ್ಬರಕ್ಕೆ ದೋಣಿ ಮುಳುಗಲಾರಂಭಿಸಿತು. ಸ್ವಲ್ಪ ಸಮಯದ ಬಳಿಕ ದೋಣಿ ಸಂಪೂರ್ಣವಾಗಿ ಮುಳುಗಿತು.
ದೋಣಿಯ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ನಷ್ಟ ಉಂಟುಮಾಡುವ ಉದ್ದೇಶದಿಂದಲೇ ದುಷ್ಕರ್ಮಿಗಳು ಲಂಗರು ಹಗ್ಗವನ್ನು ಕತ್ತರಿಸಿದ್ದಾರೆ ಎಂದು ದೋಣಿಯ ಮಾಲೀಕರು ಅನುಮಾನ ವ್ಯಕ್ತಪಡಿಸಿದ್ದಾರೆ. ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕ್ರಮ ಜರುಗಿಸುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.