ADVERTISEMENT

ಅಮೃತ ಕಾಲಕ್ಕೆ ಐದು ವರ್ಷ ಸಾಕು: ಎಚ್‌ಡಿಕೆ

26ರಂದು ‘ಪಂಚರತ್ನ’ ಯಾತ್ರೆ ಸಮಾರೋಪ 10 ಲಕ್ಷ ಕಾರ್ಯಕರ್ತರು ಭಾಗಿ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 19:38 IST
Last Updated 21 ಮಾರ್ಚ್ 2023, 19:38 IST
   

ಮೈಸೂರು: ‘ಅಮೃತ ಕಾಲಕ್ಕೆ 2047 ಆಗಬೇಕಿಲ್ಲ. ನನಗೆ ಅಧಿಕಾರ ಕೊಟ್ಟರೆ ಐದು ವರ್ಷ ಸಾಕು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮಂಗಳವಾರ ಪ್ರತಿಪಾದಿಸಿದರು.

ಸುದ್ದಿಗೋಷ್ಠಿಯಲ್ಲಿ ಅವರು, ‘ಎಚ್.ಡಿ.ದೇವೇಗೌಡರ ಕನಸಾದ ‘ಪಂಚರತ್ನ’ ಕಾರ್ಯಕ್ರಮಗಳ ಜಾರಿಗೆ ₹ 2.5 ಲಕ್ಷ ಕೋಟಿ ಸಂಗ್ರಹಿಸಲಾಗುವುದು. ಎಲ್ಲ ಸಮುದಾಯಗಳ ಅಭಿವೃದ್ಧಿಯಾಗಿ ಸುವರ್ಣ ರಾಜ್ಯ ಸ್ಥಾಪನೆಯಾಗಲಿದೆ’ ಎಂದರು.

‘ಪಂಚರತ್ನ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಮಾ.26ರಂದು ನಗರದ ಚಾಮುಂಡಿಬೆಟ್ಟದ ತಪ್ಪಲಿನ ಉತ್ತನಹಳ್ಳಿ ರಿಂಗ್ ರಸ್ತೆ ಮೈದಾನದಲ್ಲಿ ಸಮಾರೋಪ ನಡೆಯಲಿದೆ. 10 ಲಕ್ಷ ಜನ ಸೇರಲಿದ್ದಾರೆ’ ಎಂದರು.

ADVERTISEMENT

‘ಏಪ್ರಿಲ್ ಮೊದಲ ವಾರ ಚುನಾವಣೆ ಘೋಷಣೆ ಆಗುವ ಸಂಭವವಿದ್ದು, ಸಮಾರೋಪದ ಮೂಲಕವೇ ಪ್ರಚಾರ ಆರಂಭಿಸುತ್ತಿದ್ದೇವೆ. ದೇವೇಗೌಡರು ಶ್ರೀರಾಂಪುರದಿಂದ 3 ಕಿ.ಮೀ ರೋಡ್ ಶೋ ನಡೆಸಲಿದ್ದಾರೆ’ ಎಂದರು.

‘ಜನರಿಗೆ ಕಾಂಗ್ರೆಸ್ ನಕಲಿ ಗ್ಯಾರಂಟಿ ಕಾರ್ಡ್‌ ಕೊಡುತ್ತಿದೆ. ರಾಜ್ಯದ ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಗ್ಯಾರಂಟಿ ಕೊಡುವುದು ಕಷ್ಟವೆಂದು ಸಿದ್ದರಾಮಯ್ಯ ಅವರಿಗೂ ಗೊತ್ತಿದೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.