ಪ್ರಾತಿನಿಧಿಕ ಚಿತ್ರ
ನವದೆಹಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ₹4100 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಮೈಸೂರು-ಕುಶಾಲನಗರ ಚತುಷ್ಪಥ/ಆರು ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ 140 ಎಕರೆ ಕಾಡು ಬಳಸಲು ಕೇಂದ್ರ ಅರಣ್ಯ ಇಲಾಖೆಯ ಪ್ರಾದೇಶಿಕ ಉನ್ನತಾಧಿಕಾರ ಸಮಿತಿ (ಆರ್ಇಸಿ) ಷರತ್ತುಬದ್ಧ ಅನುಮತಿ ನೀಡಿದೆ.
ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲ್ಲೂಕು ವ್ಯಾಪ್ತಿಗಳಲ್ಲಿ ನಾಗರಹೊಳೆ ಹುಲಿ ಅಭಯಾರಣ್ಯ ಹಾಗೂ ಹುಣಸೂರು ಅರಣ್ಯ ವಿಭಾಗದ ಕಾಡನ್ನು ಹೆದ್ದಾರಿ ವಿಸ್ತರಣೆಗೆ ಬಳಸಿಕೊಳ್ಳಲಾಗುತ್ತದೆ. ಈ ಹೆದ್ದಾರಿ ವಿಸ್ತರಣೆ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು 2023ರಲ್ಲಿ ಚಾಲನೆ ನೀಡಿದ್ದರು.
ಯೋಜನೆಗೆ ಕಾಡು ಬಳಕೆಗಾಗಿ ಹೆದ್ದಾರಿ ಪ್ರಾಧಿಕಾರವು 2024ರ ಜುಲೈನಲ್ಲಿ ಪ್ರಸ್ತಾವ ಸಲ್ಲಿಸಿತ್ತು. ಹುಣಸೂರು ವೃತ್ತದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ಹೆದ್ದಾರಿ ವಿಸ್ತರಣೆಗಾಗಿ ಹುಣಸೂರು ವಿಭಾಗದಲ್ಲಿ 571 ಮರಗಳನ್ನು ಕಡಿಯಲಾಗುತ್ತದೆ. ಈ ಅರಣ್ಯವು ರಾಷ್ಟ್ರೀಯ ಉದ್ಯಾನ ಅಥವಾ ವನ್ಯಜೀವಿಧಾಮದ ಭಾಗವಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದ್ದರು. ನಾಗರಹೊಳೆ ಹುಲಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಈ ಯೋಜನೆಗಾಗಿ 40 ಎಕರೆ ಅರಣ್ಯ ಬಳಸಿಕೊಳ್ಳಲಾಗುತ್ತದೆ. ಇಲ್ಲಿನ ಡಿಸಿಎಫ್ ಪ್ರಕಾರ, ಈ ಪ್ರದೇಶವು ಕಾವೇರಿ ಅಧಿಸೂಚಿತ ಅರಣ್ಯದ ವ್ಯಾಪ್ತಿಯಲ್ಲಿ ಬರುತ್ತದೆ.
40 ಎಕರೆ ಅರಣ್ಯವು ಅಭಯಾರಣ್ಯದ ಮೀಸಲು ಪ್ರದೇಶದ ಕಾವೇರಿ ಭಾಗದಲ್ಲಿ ಬರುತ್ತದೆಯೇ ಇಲ್ಲವೇ ಎಂಬ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕು. ಅಭಯಾರಣ್ಯದ ಮೀಸಲು ಪ್ರದೇಶದಲ್ಲಿ ಬಂದರೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ಅನುಮೋದನೆ ಪಡೆಯಬೇಕು ಎಂದು ಉನ್ನತಾಧಿಕಾರ ಸಮಿತಿ ಷರತ್ತು ವಿಧಿಸಿದೆ.
ಕಾಡು ಬಳಕೆಗೆ ಅನುಮೋದನೆ ಕೋರಿರುವ ಪ್ರದೇಶವು ರಂಗನತಿಟ್ಟು ಪಕ್ಷಿಧಾಮದ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿದ್ದು, ರಾಷ್ಟ್ರೀಯ ವನ್ಯಜೀವಿಧಾಮದಿಂದ ಅಗತ್ಯ ಅನುಮೋದನೆ ಪಡೆಯಬೇಕು ಎಂದು ಸಮಿತಿ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.