ADVERTISEMENT

ಅರಣ್ಯ ಅತಿಕ್ರಮಣ: ರಾಜ್ಯಕ್ಕೆ ಎನ್‌ಜಿಟಿ ಚಾಟಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2024, 16:08 IST
Last Updated 3 ಫೆಬ್ರುವರಿ 2024, 16:08 IST
<div class="paragraphs"><p>ಎನ್‌ಜಿಟಿ</p></div>

ಎನ್‌ಜಿಟಿ

   

ನವದೆಹಲಿ: ಕರ್ನಾಟಕದಲ್ಲಿ ಅರಣ್ಯ ಅತಿಕ್ರಮಣ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪ್ರಧಾನ ಪೀಠವು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದೆ. 

ಅರಣ್ಯ ಅತಿಕ್ರಮಣದ ಕುರಿತು ಮಾಧ್ಯಮಗಳ ವರದಿಯ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ನ್ಯಾಯಮೂರ್ತಿ ಸುಧೀರ್ ಅಗರವಾಲ್‌ ಹಾಗೂ ಎ.ಸೆಂಥಿಲ್‌ ವೇಲ್ ಅವರ ದ್ವಿಸದಸ್ಯ ಪೀಠ, ‘ಅರಣ್ಯ ಒತ್ತುವರಿ ಪತ್ತೆ ಹಚ್ಚಲು ಸರ್ಕಾರ ಸರ್ವೆ ನಡೆಸಿದರೆ ಸಾಲದು. ಒತ್ತುವರಿ ತೆರವುಗೊಳಿಸಿ ಮೌನವಾಗಿರುವುದು ಸರಿಯಲ್ಲ. ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಹಾನಿ ಬಗ್ಗೆ ಪರಿಹಾರಾತ್ಮಕ ಕ್ರಮಗಳನ್ನು ಅರಣ್ಯ ಇಲಾಖೆ ಕೈಗೊಳ್ಳಬೇಕು’ ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. 

ADVERTISEMENT

‘ಸರ್ವೆ ಕಾರ್ಯ ಕೈಗೊಂಡ ಬಳಿಕ ನಿರ್ದಾಕ್ಷಿಣ್ಯವಾಗಿ ಒತ್ತುವರಿ ತೆರವುಗೊಳಿಸಬೇಕು. ಅತಿಕ್ರಮಣದಿಂದ ಅರಣ್ಯಕ್ಕೆ ಹಾನಿಯಾಗಿದ್ದರೆ ಯಾವುದೇ ವಿಳಂಬವಿಲ್ಲದೆ ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು. ಜತೆಗೆ, ಕೈಗೊಂಡ ಕ್ರಮಗಳ ವರದಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕು’ ಎಂದು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಪೀಠ ಆದೇಶ ನೀಡಿದೆ. 

ಈ ಸಂಬಂಧ ಅರಣ್ಯ ಇಲಾಖೆಯು ಒಂದು ತಿಂಗಳಲ್ಲಿ ವರದಿ ಸಿದ್ಧಪಡಿಸಬೇಕು. ವರದಿ ಸಲ್ಲಿಸಿದ ಎರಡು ತಿಂಗಳಲ್ಲಿ ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪೀಠ ಸೂಚಿಸಿದೆ. ಹೆಚ್ಚಿನ ವಿಚಾರಣೆಗಾಗಿ ಪ್ರಕರಣವನ್ನು ದಕ್ಷಿಣ ವಲಯ ಪೀಠಕ್ಕೆ ವರ್ಗಾಯಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.