ಮೈಸೂರು:‘ಬಾಬಾ ಸಾಹೇಬರ ಮಾತಿಗೆ ಅನುಸಾರವಾಗಿ ರಾಜಕೀಯ ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಂಡು, ರಾಜ್ಯದ ಏಳಿಗೆಗೆ ಶ್ರಮಿಸಿದ್ದೇವೆಂದು ನಾವು ಗರ್ವದಿಂದ ಹೇಳುತ್ತೇವೆ. ಹೀಗೆ ಹೇಳುವ ನೈತಿಕತೆ, ಕೋಮುವಾದಿಗಳ ಜೊತೆ ಸೇರಿಕೊಂಡಿರುವ ಸಂಸದ ಶ್ರೀನಿವಾಸಪ್ರಸಾದ್ ಅವರಲ್ಲಿ ಉಳಿದಿದೆಯೇ’ ಎಂದು ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ಟ್ವಿಟರ್ನಲ್ಲಿ ಪ್ರಶ್ನಿಸಿದ್ದಾರೆ.
‘ಲೋಕಸಭಾ ಚುನಾವಣೆಯಲ್ಲಿ ಗೆದ್ದ ಮೇಲೆ ಅಭಿವೃದ್ಧಿಯಲ್ಲಿ ಶೂನ್ಯ ಸಂಪಾದನೆ ಮಾಡಿರುವ ಪ್ರಸಾದ್, ಕೇವಲ ಒಣ ರಾಜಕೀಯದಲ್ಲಿ ಮಗ್ನರಾಗಿದ್ದು, ಬಾಬಾ ಸಾಹೇಬರ ಶ್ರಮದಿಂದ ದೊರೆತ ಅಧಿಕಾರದ ಉದ್ದೇಶ ಹಾಗೂ ಅದರ ಮಹತ್ವ ಹಾಳು ಮಾಡುತ್ತಿದ್ದಾರೆ’ ಎಂದುಟೀಕಿಸಿದ್ದಾರೆ.
‘2018ರ ವಿಧಾನಸಭೆ ಚುನಾವಣೆಯಲ್ಲಿ ಒಂದು ಯಶಸ್ವಿ ಸರ್ಕಾರವನ್ನು ಉರುಳಿಸಲು ಮತ್ತು ಶೋಷಿತರ ಹಾಗೂ ಅಹಿಂದ ವರ್ಗ ಗಳ ಕೈಯಿಂದ ಅಧಿಕಾರವನ್ನು ಕಿತ್ತುಕೊಳ್ಳಲು ಯಾರೆಲ್ಲಾ ಸಂಚು ಮಾಡಿದ್ದಾರೆಂದು ನನಗೂ ಗೊತ್ತಿದೆ. ಈ ಬಗ್ಗೆ ಪ್ರಸಾದ್ ಅವರಿಗೂ ಮಾಹಿತಿ ಇರಬಹುದು’ ಎಂದಿದ್ದಾರೆ.
‘ನಂಜನಗೂಡು ಉಪಚುನಾವಣೆಯಲ್ಲಿ ಅವರನ್ನುನಾನು ಮತ್ತು ಸಿದ್ದರಾಮಯ್ಯ ಸೇರಿ ಸೋಲಿಸಿರುವುದಾಗಿ ಹೇಳಿದ್ದಾರೆ. ಹಾಗಿದ್ದರೆ ಉಪಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಅಭ್ಯರ್ಥಿಯನ್ನು ಬಿಟ್ಟು, ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರಸಾದ್ ಅವರನ್ನು ಗೆಲ್ಲಿಸಬೇಕಾಗಿತ್ತೇ?’ ಎಂದೂ ಅವರು ಕೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.