ಪ್ರತಿನಿಧಿಕ ಚಿತ್ರ
ಮೆಟಾ ಎಐ ಚಿತ್ರ
ಬೆಂಗಳೂರು: ‘ರಾಜ್ಯದ ಅರ್ಹ 100 ರೈತರಿಗೆ ಉಚಿತ ರೊಬೊಟಿಕ್ ಮೊಣಕಾಲು ಕೀಲು ಕಸಿ ಶಸ್ತ್ರಚಿಕಿತ್ಸೆ ಒದಗಿಸುವ ಬೆಂಗಳೂರಿನ ‘ಕಾವೇರಿ ಹಾಸ್ಪಿಟಲ್ಸ್ʼನ ‘ಕಾವೇರಿ ಸಂಕಲ್ಪ’ ಕಾರ್ಯಕ್ರಮಕ್ಕೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಗುರುವಾರ ಚಾಲನೆ ನೀಡಿದರು.
‘ಖಾಸಗಿ ಆಸ್ಪತ್ರೆ ಸಿಎಸ್ಆರ್ ಹಣವನ್ನು ಈ ರೀತಿಯಾಗಿ ಬಳಸುತ್ತಿರುವುದು ಖುಷಿಯ ವಿಚಾರ. ರೈತರು ನಮ್ಮ ಆರ್ಥಿಕತೆಯ ಅಡಿಪಾಯ. ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಿ ಕೆಲಸ ಮಾಡುವ ಅವರಿಗೆ ದೈಹಿಕ ಶಕ್ತಿಯನ್ನು ಮತ್ತೆ ತುಂಬುವ ಮೂಲಕ ಸಬಲೀಕರಣಗೊಳಿಸುವ ಈ ಕಾರ್ಯಕ್ರಮ ಶ್ಲಾಘನೀಯ’ ಎಂದರು.
ಬೆಂಗಳೂರು ಮತ್ತು ಹೊಸೂರಿನ ʻಕಾವೇರಿ ಹಾಸ್ಪಿಟಲ್ಸ್ʼ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್. ವಿಜಯಭಾಸ್ಕರನ್ ಮಾತನಾಡಿ, ‘ಕೃಷಿ ಎಂಜಿನಿಯರ್, ಪ್ರಾಧ್ಯಾಪಕ ಮತ್ತು ಸಂಶೋಧಕನಾಗಿ ಸುಮಾರು ಎರಡು ದಶಕಗಳನ್ನು ಕಳೆದಿರುವ ನಾನು, ರೈತರಿಗೆ ಆಗುವ ದೈಹಿಕ ಹಾನಿಯನ್ನು ನೇರವಾಗಿ ನೋಡಿದ್ದೇನೆ. ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ’ ಎಂದರು.
‘ನಾಗಮಂಗಲ, ಹಾಸನ, ದಾವಣಗೆರೆ, ಮಂಗಳೂರು, ಹುಬ್ಬಳ್ಳಿ, ಕೋಲಾರ ಭಾಗಗಳಲ್ಲಿ ಏಪ್ರಿಲ್ ತಿಂಗಳಿನಲ್ಲಿ ಉಚಿತವಾಗಿ ವೈದ್ಯಕೀಯ ತಪಾಸಣೆ ನಡೆಸಿ ಅರ್ಹರಿಗೆ ಸೌಲಭ್ಯ ಒದಗಿಸಲಾಗುವುದು’ ಎಂದರು.
ʻಕಾವೇರಿ ಹಾಸ್ಪಿಟಲ್ಸ್ʼ ಎಲೆಕ್ಟ್ರಾನಿಕ್ ಸಿಟಿ ಮತ್ತು ಮಾರತ್ತಹಳ್ಳಿ ಘಟಕಗಳ ಪ್ರಮುಖರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.