ADVERTISEMENT

ಮುಂದಿನ ವರ್ಷದಿಂದ ಪ್ರೌಢಶಾಲಾ ಹಂತದಲ್ಲೇ ತಾಂತ್ರಿಕ ಶಿಕ್ಷಣದ ಜ್ಞಾನ: CM ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 11:06 IST
Last Updated 14 ಜುಲೈ 2022, 11:06 IST
CM ಬೊಮ್ಮಾಯಿ
CM ಬೊಮ್ಮಾಯಿ   

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರೌಢಶಾಲಾ ಹಂತದಲ್ಲೇ ಮಕ್ಕಳಿಗೆ ತಾಂತ್ರಿಕ ಶಿಕ್ಷಣದ ಪ್ರಾಥಮಿಕ ಜ್ಞಾನ ನೀಡಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಗುರುವಾರ ನಡೆದ ವಿಶ್ವ ಯುವ ಕೌಶಲ್ಯ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 60 ರ ದಶಕದಲ್ಲಿ ಪ್ರೌಢಶಾಲಾ ಹಂತದಲ್ಲೇ ಮಕ್ಕಳಿಗೆ ತಾಂತ್ರಿಕ ಶಿಕ್ಷಣದ ಜ್ಞಾನ ನೀಡಲಾಗುತ್ತಿತ್ತು. ಕ್ರಮೇಣ ಅದನ್ನು ನಿಲ್ಲಿಸಲಾಯಿತು. ಜೀವನೋಪಾಯಕ್ಕೆ ಅನುಕೂಲವಾಗುವ ತಂತ್ರಜ್ಞಾನದಲ್ಲಿ ಆಸಕ್ತಿಯನ್ನು ಬೆಳೆಸಲು ಇದು ಹೆಚ್ಚು ಅನುಕೂಲವಾಗುತ್ತದೆ. ಆದ ಕಾರಣ ಪುನಃ ಆರಂಭಿಸಲಾಗುವುದು ಎಂದು ಅವರು ಹೇಳಿದರು.

8,9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದ ಪ್ರಾಥಮಿಕ ಜ್ಞಾನ ನೀಡಲಾಗುವುದು. ಕೌಶಲ್ಯ ಕ್ಷೇತ್ರದಲ್ಲಿ ಕರ್ನಾಟಕ ದೇಶದಲ್ಲಿ ನಂ 1 ಆಗಬೇಕು, ವಿಶ್ವದಲ್ಲಿ 10 ರೊಗಳಗಿನ ಸ್ಥಾನವನ್ನು ಪಡೆಯುವ ನಿಟ್ಟಿಲ್ಲಿ ಪ್ರಯತ್ನ ಹಾಕಬೇಕು ಎಂದೂ ಅವರು ತಿಳಿಸಿದರು.

ADVERTISEMENT

ರಾಜ್ಯದಲ್ಲಿ ಐಟಿಐಗಳನ್ನು ಹೈಟೆಕ್‌ ಮಾಡುವುದರ ಜತೆಗೆ, ಜಿಟಿಟಿಸಿಗಳ ಆಧುನೀಕರಣ ಮತ್ತು ಸಾಮರ್ಥ್ಯವನ್ನು ವೃದ್ಧಿಸುವ ಕೆಲಸ ಮಾಡಲಾಗಿದೆ. ಅಲ್ಲದೇ ರಾಜ್ಯ ಆರು ಪ್ರಮುಖ ಎಂಜನಿಯರಿಂಗ್‌ ಕಾಲೇಜುಗಳನ್ನು ಐಐಟಿ ಮಟ್ಟಕ್ಕೆ ಉನ್ನತೀಕರಿಸಲಾಗುವುದು. ಇಲ್ಲಿನ ಗುಣಮಟ್ಟದಿಂದ ಐಐಟಿಗೆ ಹೋಗುವುದನ್ನು ತಡೆದು, ಅಲ್ಲಿಗೆ ಹೋಗುವವರು ಇಲ್ಲಿ ಬಂದು ಶಿಕ್ಷಣ ಪಡೆಯುವಂತಾಗಬೇಕು. ಎಲ್ಲರಿಂದಲೂ ಐಐಟಿಗಳಿಗೆ ಸರಿಸಾಟಿಯಾಗುವಂತೆ ಉನ್ನತ ದರ್ಜೆಗೇರಿಸಲು ನಿರ್ಧರಿಸಲಾಗಿದೆ ಎಂದು ಬೊಮ್ಮಾಯಿ ಹೇಳಿದರು.

ಇದಲ್ಲದೇ, ಸ್ತ್ರೀಶಕ್ತಿ ಮೂಲಕ ಸುಮಾರು 5 ಲಕ್ಷ ಮಹಿಳೆಯರಿಗೆ ಕೌಶಲ್ಯ ನೀಡಲು ಉದ್ದೇಶಿಸಲಾಗಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಹಾಯಕವಾಗುತ್ತದೆ ಎಂದೂ ಅವರು ತಿಳಿಸಿದರು.

ಕೌಶಲ ಎಂಬುದು ದೇವರು ಕೊಟ್ಟ ವರ ಅದನ್ನು ಜ್ಞಾನದ ಜೊತೆ ಜೋಡಿಸುವ ಕೆಲಸ ಆಗಬೇಕು. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದಲ್ಲ ಒಂದು ಕೌಶಲ ಇದ್ದೇ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದರು.

ಉನ್ನತ ಶಿಕ್ಷಣ ಸಚಿವ, ಐಟಿ– ಬಿಟಿ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿ, ಯುವ ಜನರಿಗೆ ಈಗಿನ ಕಾಲಕ್ಕೆ ತಕ್ಕಂತೆ ಕೌಶಲ ಕಲಿಸಲು ಸರ್ಕಾರ ಉದ್ದೇಶಿಸಿದೆ. ಪ್ರತಿಯೊಂದು ಜಿಲ್ಲೆಯಲ್ಲೂ ಗುಣಮಟ್ಟದ ಕೌಶಲ ತರಬೇತಿಯನ್ನು ನೀಡಲಾಗುವುದು. ಇದಕ್ಕಾಗಿ ಹಲವು ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಇನ್‌ಫೋಸಿಸ್‌ ಸಂಸ್ಥೆಯೊಂದೇ 27 ಲಕ್ಷ ಯುವ ಜನರಿಗೆ ಕೌಶಲ ತರಬೇತಿ ನೀಡಿದ್ದು, ಅದರಲ್ಲಿ ರಾಜ್ಯದ 17 ಲಕ್ಷ ಮಂದಿ ತರಬೇತಿ ಪಡೆದಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.