ಮೈಸೂರು: ಇಲ್ಲಿನ ಲಿಂಗಾಂಬುಧಿ ಪಾಳ್ಯ ಸಮೀಪದ ನಿರ್ಜನ ಪ್ರದೇಶದಲ್ಲಿ, ಯುವತಿ ಮೇಲೆ ಬುಧವಾರ ರಾತ್ರಿ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದು, ಆಕೆಯ ಸ್ನೇಹಿತನ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ.
‘ಫೇಸ್ಬುಕ್’ನಲ್ಲಿ ಪರಿಚಯವಾಗಿದ್ದ ವಿವಾಹಿತ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದ ಯುವತಿಯು, ಸುತ್ತಾಟಕ್ಕೆಂದು ಬುಧವಾರ ರಾತ್ರಿ ಹತ್ತೂವರೆ ವೇಳೆಗೆ ಬೈಕ್ನಲ್ಲಿ ಲಿಂಗಾಂಬುಧಿಪಾಳ್ಯ ಬಳಿ ಬಂದಿದ್ದಾರೆ. ಈ ವೇಳೆ ಅಲ್ಲಿ ಮದ್ಯ ಸೇವಿಸುತ್ತಿದ್ದ ಮೂವರು, ಯುವತಿ ಮೇಲೆ ಅತ್ಯಾಚಾರ ನಡೆಸಿದ್ದಾರೆ. ತಡೆಯಲು ಬಂದ ಸ್ನೇಹಿತನ ಕಾಲನ್ನು ಕಲ್ಲಿನಿಂದ ಬಲವಾಗಿ ಜಜ್ಜಿದ್ದಾರೆ. ಆತನ ತಲೆ ಮತ್ತು ಎದೆಯ ಭಾಗಗಳ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
‘ಮೇಲ್ನೋಟಕ್ಕೆ ಯುವತಿಯ ಮೈಮೇಲೆ ಯಾವುದೇ ಗಾಯದ ಗುರುತುಗಳು ಕಂಡು ಬಂದಿಲ್ಲ. ಆರೋಪಿಗಳು ಹಲ್ಲೆ ನಡೆಸುವುದಾಗಿ ಬೆದರಿಸಿದ್ದರಿಂದ ಹೆಚ್ಚಿನ ಪ್ರತಿರೋಧ ತೋರಿಲ್ಲ ಎಂದು ಯುವತಿ ಹೇಳಿದ್ದಾರೆ. ಇವರನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದ್ದು, ವರದಿಯನ್ನು ನಿರೀಕ್ಷಿಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಮೈಸೂರು ದಕ್ಷಿಣ ವಲಯ ಐಜಿಪಿ ಉಮೇಶ್ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್, ಡಿವೈಎಸ್ಪಿ ಕ್ಷಮಾ ಮಿಶ್ರಾ, ಇನ್ಸ್ಪೆಕ್ಟರ್ ಜಯಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
‘ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ’ ಎಂದು ಡಿವೈಎಸ್ಪಿ ಕ್ಷಮಾ ಮಿಶ್ರಾ ಹೇಳಿದರು.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಎಸ್.ಪಿ ಅಮಿತ್ಸಿಂಗ್, ‘ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗುವುದು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.