ADVERTISEMENT

ಪೋಷಕರ ಮಡಿಲು ಸೇರಿದ ಬಾಲಕಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 16:36 IST
Last Updated 5 ಜೂನ್ 2021, 16:36 IST
ಪೋಷಕರ ಜೊತೆ ಬಾಲಕಿ ಸೃಷ್ಠಿ
ಪೋಷಕರ ಜೊತೆ ಬಾಲಕಿ ಸೃಷ್ಠಿ   

ಬೆಂಗಳೂರು: ತಂದೆ–ತಾಯಿ ಕೆಲಸಕ್ಕೆ ಹೋಗಿದ್ದ ವೇಳೆ ಮನೆಯಿಂದ ರೈಲು ನಿಲ್ದಾಣಕ್ಕೆ ಬಂದು ಅನಾಥವಾಗಿ ಸುತ್ತಾಡುತ್ತಿದ್ದ 6 ವರ್ಷದ ಬಾಲಕಿ, ಯಲಹಂಕ ಪೊಲೀಸರ ತುರ್ತು ಸ್ಪಂದನೆಯಿಂದ ಪೋಷಕರ ಮಡಿಲು ಸೇರಿದ್ದಾಳೆ.

‘ಕೊಂಡಪ್ಪ ಲೇಔಟ್‌ ನಿವಾಸಿ ಅನಿಲ್ ಹಾಗೂ ನೇತ್ರಾ ದಂಪತಿ ಪುತ್ರಿ ಸೃಷ್ಟಿ, ಯಲಹಂಕ ರೈಲು ನಿಲ್ದಾಣದಲ್ಲಿ ಶನಿವಾರ ಮಧ್ಯಾಹ್ನ ಒಬ್ಬಳೇ ಓಡಾಡುತ್ತಿದ್ದಳು. ನಿಲ್ದಾಣದಲ್ಲಿ ನಿಂತಿದ್ದ ರೈಲುಗಳನ್ನು ಹತ್ತಿ ಇಳಿಯುತ್ತಿದ್ದಳು. ಅದನ್ನು ಗಮನಿಸಿದ್ದ ಪ್ರಯಾಣಿಕರೊಬ್ಬರು, ಬಾಲಕಿಯನ್ನು ವಿಚಾರಿಸಿದ್ದರು. ಯಾವುದೇ ವಿಳಾಸ ಹೇಳಿರಲಿಲ್ಲ. ಹೀಗಾಗಿ, ಬಾಲಕಿಯನ್ನು ಪೊಲೀಸರಿಗೆ ಒಪ್ಪಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಠಾಣೆಗೆ ಬಾಲಕಿಯನ್ನು ಕರೆದುಕೊಂಡು ಬಂದಿದ್ದ ಪೊಲೀಸರು, ‘ರೈಲು ನಿಲ್ದಾಣದಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ. ಪೋಷಕರು ಯಾರಾದರೂ ಇದ್ದರೆ ಠಾಣೆಗೆ ಬನ್ನಿ’ ಎಂದು ಆಕೆಯ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ವಾಟ್ಸ್‌ಆ್ಯಪ್‌ಗೆ ಬಂದಿದ್ದ ವಿಡಿಯೊ ನೋಡಿದ ತಂದೆ ಅನಿಲ್, ಪತ್ನಿ ಸಮೇತ ಠಾಣೆಗೆ ಬಂದು ಮಗಳನ್ನು ಕರೆದುಕೊಂಡು ಹೋದರು’ ಎಂದೂ ಮೂಲಗಳು ತಿಳಿಸಿವೆ.

ADVERTISEMENT

’ಭದ್ರತಾ ಸಿಬ್ಬಂದಿ ಕೆಲಸ ಮಾಡುತ್ತಿದ್ದ ಅನಿಲ್, ಮನೆಯಿಂದ ಹೊರಗೆ ಹೋಗಿದ್ದರು. ಪತ್ನಿ ಸಹ ಮನೆಗೆಲಸಕ್ಕೆ ತೆರಳಿದ್ದರು. ಈ ವೇಳೆ ಬಾಲಕಿ ಒಬ್ಬಳೇ ಮನೆಯಲ್ಲಿದ್ದಳು. ಅಲ್ಲಿಂದ ಹೊರಬಂದ ಬಾಲಕಿ, ತನ್ನಿಷ್ಟದ ರೈಲು ನೋಡಲು ನಿಲ್ದಾಣಕ್ಕೆ ಬಂದಿದ್ದಳು. ವಾಪಸು ಮನೆಗೆ ಹೋಗಲು ದಾರಿ ಗೊತ್ತಾಗದೇ ನಿಲ್ದಾಣದಲ್ಲಿ ಓಡಾಡುತ್ತಿದ್ದಳು. ಆಕಸ್ಮಾತ್ ರೈಲಿನಲ್ಲಿ ಹತ್ತಿ ಹೋಗಿದ್ದರೆ ಹುಡುಕುವುದು ಕಷ್ಟವಾಗುತ್ತಿತ್ತು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.