ADVERTISEMENT

ಅಮಿತ್ ಶಾ ಭೇಟಿ ವಿರೋಧಿಸಿ ದಕ್ಷಿಣ ಕನ್ನಡದಲ್ಲಿ ‘ಗೋ ಬ್ಯಾಕ್’ ಚಳವಳಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 8:41 IST
Last Updated 6 ಜನವರಿ 2020, 8:41 IST
   

ಮಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ಪರವಾಗಿ ಜನಜಾಗೃತಿ ಹೆಸರಿನಲ್ಲಿ ಸಮಾವೇಶ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದೇ 19ರಂದು ಮಂಗಳೂರಿಗೆ ಭೇಟಿ ನೀಡುವುದನ್ನು ವಿರೋಧಿಸಿ 'ಗೋ ಬ್ಯಾಕ್ ಅಮಿತ್ ಶಾ' ಹೆಸರಿನಲ್ಲಿ ಚಳವಳಿ ನಡೆಸುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಕಟಿಸಿದೆ.

ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮತ್ತು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, 'ದಕ್ಷಿಣ ಕನ್ನಡ ಜಿಲ್ಲೆ ಈಗ ಶಾಂತ ಸ್ಥಿತಿಗೆ ಮರಳುತ್ತಿದೆ. ಈ ಹಂತದಲ್ಲಿ ಅಮಿತ್ ಶಾ ಭೇಟಿ ನೀಡಿದರೆ ಮತ್ತೆ ಪ್ರಚೋದನೆಗೆ ಕಾರಣವಾಗುತ್ತದೆ. ಆದ್ದರಿಂದ ಅವರ ಭೇಟಿಗೆ ಅವಕಾಶ ನೀಡಬಾರದು' ಎಂದು ಆಗ್ರಹಿಸಿದರು.

'ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ರಾಜಕೀಯ ಪಕ್ಷವೇ ಪ್ರತಿಭಟನಕಾರರ ವಿರುದ್ಧ ಯುದ್ಧಕ್ಕೆ ಇಳಿದಂತೆ ವರ್ತಿಸಬಾರದು. ಅಮಿತ್ ಶಾ ಭೇಟಿಯಿಂದ ಜಿಲ್ಲೆಯಲ್ಲಿ ಶಾಂತಿ ಕದಡುತ್ತದೆ. ಅದನ್ನು ವಿರೋಧಿಸಿ ನಾವು ಉಪವಾಸ ಸತ್ಯಾಗ್ರಹ ನಡೆಸುತ್ತೇವೆ' ಎಂದು ಐವನ್ ಡಿಸೋಜ ತಿಳಿಸಿದರು.

ADVERTISEMENT

ಗೋಲಿಬಾರ್ ನಲ್ಲಿ ಮೃತಪಟ್ಟವರ ಮನೆಗಳಿಗೆ ಈವರೆಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರು ಭೇಟಿ ನೀಡಿಲ್ಲ. ಕೇಂದ್ರ ಗೃ ಸಚಿವರು ರಾಜಕೀಯ ಮಾಡಲು ಬರುವುದನ್ನು ಮುಂದೂಡಿ, ಸಚಿವರು ಶಾಸಕರನ್ನು ಸಂತ್ರಸ್ತರ ಮನೆಗಳಿಗೆ ಕಳುಹಿಸಲಿ ಎಂದರು.

ಹರೀಶ್ ಕುಮಾರ್ ಮಾತನಾಡಿ, 'ಸಿಎಎ ಮತ್ತು ಎನ್ಆರ್ ಸಿ ವಿರುದ್ಧದ ಪ್ರತಿಭಟನೆಗಳನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಹಿಂಸಾ ಮಾರ್ಗವನ್ನು ಹಿಡಿದಿರುವುದು ಖಂಡನೀಯ. ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದಿರುವ ಹಿಂಸೆಯನ್ನು ಕಾಂಗ್ರೆಸ್ ಖಂಡಿಸುತ್ತದೆ' ಎಂದರು.

ಬಿಜೆಪಿಯ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಯ ಸದಸ್ಯರೇ ಹಿಂಸಾಚಾರ ನಡೆಸಿರುವ ಆರೋಪವಿದೆ. ದೆಹಲಿ ಪೊಲೀಸರು ಮತ್ತು ವಿಶ್ವವಿದ್ಯಾಲಯದ ಆಡಳಿತದ ಬೆಂಬಲದಲ್ಲೇ ಎಲ್ಲವೂ ನಡೆದಿದೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.