ಕಲಬುರ್ಗಿ: ನಗರಲ್ಲಿ ಭಾನುವಾರದ ಲಾಕ್ಡೌನ್ ಕಾರಣ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಆಯಿತು. ಆದರೆ, ಮುಖ್ಯರಸ್ತೆಗಳಲ್ಲಿ ಬೈಕ್, ಆಟೊದಲ್ಲಿ ಓಡಾಡುತ್ತಿದ್ದ ಸುಮಾರು 100ಕ್ಕೂ ಹೆಚ್ಚು ಮಂದಿಗೆ ಪೊಲೀಸರು ಲಾಠಿ ಏಟು ನೀಡಿದರು.
ಬೆಳಿಗ್ಗೆ 8ರವರೆಗೂ ನಗರ ಸಂಪೂರ್ಣ ಸ್ತಬ್ಧಗೊಂಡಿತ್ತು. ಅಲ್ಲಲ್ಲಿ ಪೊಲಿಸ್ ವಾಹನಗಳು ಸೈರನ್ ಹಾಕಿಕೊಂಡು ಪಹರೆ ನಡೆಸಿದವು.
ಆದರೆ, ಬಸ್ ನಿಲ್ದಾಣ, ಮುಸ್ಲಿಂ ಚೌಕ್, ಜಗತ್ ವೃತ್ತ, ಸೂಪರ್ ಮಾರ್ಕೆಟ್ ಮುಂತಾದೆಡೆ ಹಲವು ಯುವಕರು ಬೈಕ್, ಆಟೊಗಳಲ್ಲಿ ಔಡಾಡುತ್ತಿರುವುದು ಕಂಡುಬಂತು. ಕೆಲವರಂತೂ ಬೈಕ್ ಮೇಲೆ ತ್ರಿಬಲ್ ರೈಡ್ ಮಾಡಿ ಮೋಜು ಮಾಡಲು ರಸ್ತೆಗಿಳಿದರು. ಎಚ್ಚೆತ್ತುಕೊಂಡ ಪೊಲೀಸರು ಲಾಠಿ ಬೀಸಲು ಶುರು ಮಾಡಿದರು. ಸಕಾರಣವಿಲ್ಲದೇ ಹೊರಬಂದ ಹಲವರು ದಂಡ ಕಟ್ಟಬೇಕಾಯಿತು.
ಉಳಿದಂತೆ, ಔಷಧ, ಹಾಲು, ಪೆಟ್ರೋಲ್ ಬಂಕ್ ಹೊರತುಪಡಿಸಿ ಉಳಿದೆಲ್ಲ ವ್ಯಾಪಾರ ಸಾಧಾರಣವಾಗಿ ನಡೆಯಿತು. ಅತ್ಯಂತ ಜನನಿಬಿಡ ಪ್ರದೇಶವಾದ ಇಲ್ಲಿನ 'ಸೂಪರ್ ಮಾರ್ಕೆಟ್'ನಲ್ಲಿ ವರ್ತಕರು ಸ್ವಯಂ ಪ್ರೇರಣೆಯಿಂದ ಮಳಿಗೆಗಳನ್ನು ಬಂದ್ ಮಾಡಿದರು.
ಬೆಳಿಗ್ಗೆ ಪೊಲೀಸರು ವಾಹನಗಳಲ್ಲಿ ಗಸ್ತು ಸುತ್ತಿ ಮನೆಯಿಂದ ಹೊರಬರದಂತೆ ಜನರಿಗೆ ಎಚ್ಚರಿಕೆ ನೀಡಿದರು.
ಕೇಂದ್ರ ಬಸ್ ನಿಲ್ದಾಣ, ಎಸ್ ವಿ ಪಿ ವೃತ್ತ, ರಾಷ್ಟ್ರಪತಿ ಚೌಕ, ಜಗತ್ ಸರ್ಕಲ್ ಸೇರಿದಂತೆ ವಾಹನ ದಟ್ಟಣೆ ಇರುತ್ತಿದ್ದ ಸ್ಥಳಗಳು ಬಿಕೋ ಎನ್ನುತ್ತಿದ್ದವು.
ಐತಿಹಾಸಿಕ ಶರಣಬಸವೇಶ್ವರ ದೇವಸ್ಥಾನ, ಖಾಜಾ ಬಂದಾ ನವಾಜ್ ದರ್ಗಾ, ರಾಮ ಮಂದಿರ ಸೇರಿದಂತೆ ಎಲ್ಲ ದೇವಸ್ಥಾನ ಹಾಗೂ ಮಸೀದಿಗಳು ಬಾಗಿಲು ಮುಚ್ಚಿದ್ದವು.
ಕಳೆದ ಭಾನುವಾರದಂತೆ ನಗರದ ಸೇಂಟ್ ಮೇರಿ ಚರ್ಚ್ ನಲ್ಲಿ ಈ ಭಾನುವಾರದ ಪ್ರಾರ್ಥನೆಗೆ ಜನ ಬರಲಿಲ್ಲ.
ಹೈದರಾಬಾದ್, ಬೆಂಗಳೂರು ಹಾಗೂ ಇತರ ನಗರಗಳಿಂದ ಶನಿವಾರ ರಾತ್ರಿ ಹೊರಟಿದ್ದ ಬಸ್ ಗಳು ಭಾನುವಾರ ಬೆಳಿಗ್ಗೆ ಕಲಬುರ್ಗಿ ತಲುಪಿದವು.. ಇದರಲ್ಲಿ ಬಂದ ಪ್ರಯಾಣಿಕರು ಬಸ್ ನಿಲ್ದಾಣದಿಂದ ಮನೆಗೆ ತೆರಳಲು ಪರದಾಡಬೇಕಾಯಿತು.
ಸಾರಿಗೆ ಸಂಸ್ಧೆ ಬಸ್, ಖಾಸಗಿ ಬಸ್, ಆಟೊ ಸಂಚಾರ ಕೂಡ ಸಂಪೂರ್ಣ ಬಂದ್ ಆಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.