ADVERTISEMENT

ಕೋವಿಡ್‌: ಸರ್ಕಾರ ಎಡವಿದ್ದೆಲ್ಲಿ?

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 2:53 IST
Last Updated 30 ಏಪ್ರಿಲ್ 2021, 2:53 IST
ನಿರ್ಮಲಾ ಶಿವನಗುತ್ತಿ
ನಿರ್ಮಲಾ ಶಿವನಗುತ್ತಿ   

ಬೆಂಗಳೂರು: ಅಪಾಯಕಾರಿ ಮಟ್ಟಕ್ಕೆ ಕೋವಿಡ್ ಹರಡುವಿಕೆ ತಡೆಯುವಲ್ಲಿ ಸರ್ಕಾರ ಎಡವಿದ್ದೆಲ್ಲಿ? ಈಗ ತುರ್ತಾಗಿ ಏನು ಮಾಡಬೇಕಿದೆ? ಆರೋಗ್ಯ ವ್ಯವಸ್ಥೆಯಲ್ಲಿ ಆಗಬೇಕಿರುವ ಸುಧಾರಣೆಗಳೇನು? ಎಂಬುದರ ಕುರಿತು ಜನಾಭಿಪ್ರಾಯಕ್ಕೆ ‘ಪ್ರಜಾವಾಣಿ’ ವೇದಿಕೆ ಕಲ್ಪಿಸಿದೆ. ಇದಕ್ಕೆ ಸ್ಪಂದಿಸಿರುವ ಓದುಗರು ಸಲಹೆ ನೀಡಿದ್ದಾರೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

ಚಳವಳಿ ನೇತಾರರು, ರಾಜಕಾರಣಿಗಳು ಹೊಣೆ

ಕೋವಿಡ್ ಎರಡನೇ ಅಲೆ ಬರುವ ಮುನ್ನ ವೈದ್ಯರು, ವಿಜ್ಞಾನಿಗಳು, ಚಿಂತಕರು ಸಾಕಷ್ಟು ಮುನ್ನಚ್ಚರಿಕೆಗಳನ್ನು ಕೊಟ್ಟರು. ಆದರೆ, ಸರ್ಕಾರ ಮಾಡಿದ್ದೇನು? ಗಡ್ಡಕ್ಕೆ ಬೆಂಕಿ ಹತ್ತಿದ ಮೇಲೆ ಬಾವಿ ತೋಡಿದಂತೆ ಆಗಿದೆ. ಸರ್ಕಾರ ‌ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿತ್ತು. ಒಂದಷ್ಟು ಕಠಿಣ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಧಾರ್ಮಿಕ ಸಮಾವೇಶ, ಚಳವಳಿ, ಜಾತ್ರೆ, ಅದ್ಧೂರಿ ಮದುವೆಗಳಿಗೆ ಕಡಿವಾಣ ಹಾಕಬೇಕಿತ್ತು. ಹಳ್ಳಿ– ಹಳ್ಳಿಗಳಿಂದ ಜನರನ್ನು ಸೇರಿಸಿ ಶಕ್ತಿ ತೋರಿಸುವ ಭರಾಟೆಯಲ್ಲಿ ಇಡೀ ಕರುನಾಡನ್ನು ಅಶಾಂತಿ, ಅರಾಜಕತೆಯಲ್ಲಿ ನರಳುವಂತೆ ರಾಜಕಾರಣಿಗಳು ಮಾಡಿದರು. ಚಳವಳಿಯ ನೇತಾರರು, ರಾಜಕಾರಣಿಗಳು, ಧಾರ್ಮಿಕ ಸಮಾವೇಶ ನಡೆಸಿದವರು ಇದರ ನೇರ ಹೊಣೆಗಾರರು.

ADVERTISEMENT

– ನಿರ್ಮಲಾ ಶಿವನಗುತ್ತಿ, ಪ್ರಾಚಾರ್ಯರು ಕೊಟ್ಟೂರು

***

ಮೈಮರೆತ ಸರ್ಕಾರ

ಲಾಕ್‌ಡೌನ್ ಮುಗಿಸಿ ಅನ್‌ಲಾಕ್ ಮಾಡಿದ ನಂತರ ಸರ್ಕಾರಗಳು ಕೋವಿಡ್‌ ಬಗ್ಗೆ ಮೈಮರೆತು ಮದುವೆ, ಜಾತ್ರೆ, ಸಮಾರಂಭ, ಚುನಾವಣೆಗಳಿಗೆ ‌ಕಡಿವಾಣ ಹಾಕದೆ ನಿರ್ಲಕ್ಷಿಸಿತು‌. ವಿರೋಧಪಕ್ಷಗಳು ಕೂಡ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಲಿಲ್ಲ. ಒಂದು ತಂಡ ಈ ವೈರಾಣು ಬಗ್ಗೆ ನಿರಂತರ ಸಂಶೋಧನೆಯಲ್ಲಿ ಇರಬೇಕಿತ್ತು. ತುರ್ತಾಗಿ ಎಲ್ಲಾ ಆಸ್ಪತ್ರೆಗಳನ್ನು ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಂಡು ಚಿಕಿತ್ಸೆ ನೀಡುವ ಪ್ರಯತ್ನ ಮಾಡಬೇಕು.

–ಅನಿಸ್ ಪಾಷಾ, ವಕೀಲ, ದಾವಣಗೆರೆ

***

ಚುನಾವಣೆಯಲ್ಲಿ ಮುಳುಗಿದ ಸರ್ಕಾರ

ಉಪಚುನಾವಣೆಗೂ ಮುನ್ನ ಲಾಕ್‌ಡೌನ್ ಮಾಡಿದ್ದರೆ ಇಷ್ಟೊಂದು ಸಮಸ್ಯೆ ಆಗುತ್ತಿರಲಿಲ್ಲ. ಚುನಾವಣಾ ಪ್ರಚಾರದಲ್ಲಿ ಮುಳುಗಿ‌ ಜನರ ಬಗ್ಗೆ ಸರ್ಕಾರ ಉದಾಸೀನ ಮಾಡಿತು ಎನಿಸುತ್ತಿದೆ. ಈಗ ರಾಜಕೀಯ ಮುಖಂಡರು ಆರೋಪ–ಪ್ರತ್ಯಾರೋಪ ಬಿಟ್ಟು ‌ಜನರಿಗೆ ಆರ್ಥಿಕವಾಗಿ ಸಹಾಯ ಮಾಡಿದರೆ ‌ಜನರ ವಿಶ್ವಾಸ ಪಡೆಯಬಹುದು. ಅದೇ ರೀತಿ ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಪಾಲಿಸಬೇಕು.

– ರಾಜೇಶ್ವರಿ ರಾವ್, ವಿಜಯನಗರ, ಬೆಂಗಳೂರು

***

ಖಾಸಗಿ ಆಸ್ಪತ್ರೆಗಳಲ್ಲಿ ರಿಯಾಯಿತಿ ಕೊಡಿಸಿ

ಕೋವಿಡ್ ಹೆಚ್ಚಳಕ್ಕೆ ಸರ್ಕಾರವೇ ನೇರ ಹೊಣೆ ಅಲ್ಲ. ನೈತಿಕವಾಗಿ ನಾವು ಸಹ ಹೊಣೆಗಾರರು. ‌ಸೆಪ್ಟೆಂಬರ್ ನಂತರ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದೆವು. ಸರ್ಕಾರ ಕೂಡ ಯಾವುದೇ ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಿತು. ಖಾಸಗಿ ಆಸ್ಪತ್ರೆಗಳ ಮಾಫಿಯಾ ತಡೆಗಟ್ಟಿ ಜನ ಸಾಮಾನ್ಯರ ಜೀವ ಉಳಿಸುವ ಕಡೆ ಗಮನ ಹರಿಸಬೇಕು. ಆಂಧ್ರ ಪ್ರದೇಶದ ರೀತಿ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಅಲ್ಲದಿದ್ದರೂ ಶೇ 50ರಷ್ಟು ರಿಯಾಯಿತಿ ನೀಡಿ ಮಾನವಿಯತೆಗೆ ಬೆಲೆ ಕೊಡಬೇಕು. ಹೆಣ ಇಟ್ಟುಕೊಂಡು ಹಣ ಮಾಡುವವರ ವಿರುದ್ದ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು.

–ಸುಧೀರ್ ಜೈನ್, ಉಡುಪಿ

***

ಜೀವ– ಜೀವನ ಎರಡೂ ಮುಖ್ಯ

ಜನರು ಸರ್ಕಾರವನ್ನು ದುಷಿಸುವ ಮೊದಲು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರಯತ್ನಪಡಬೇಕು. ನಿಮ್ಮನ್ನು ನೀವೇ ರಕ್ಷಿಸಿಕೊಳಲಾಗದಿದಲ್ಲಿ, ಕೋಟಿ–ಕೋಟಿ ಜನರನ್ನು ತಡೆಯಲು ಸಾಧ್ಯವಿಲ್ಲ. ಲಾಕ್ ಮಾಡಿದರೆ ಉಳ್ಳವರಿಗೆ ತೊಂದರೆ ಇಲ್ಲ. ಆದರೆ, ಬಡವರು ಜೀವನ ಸಾಗಿಸಲು ಆಗುವುದಿಲ್ಲ. ಸದ್ಯಕ್ಕೆ ಲಸಿಕೆ ಉಚಿತವಾಗಿ ಲಭ್ಯವಿದೆ, ಅದು ದುಬಾರಿ ಆಗುವ ಮುನ್ನ ತೆಗೆದುಕೊಳ್ಳಿ.

–ಪುಷ್ಪಲತಾ ತಮ್ಮೇಗೌಡ, ಹೂಟಗಳ್ಳಿ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.