ಶಿವಮೊಗ್ಗ: ಚುನಾವಣಾ ಆಯೋಗ ಸೂಚಿಸಿದರೆ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಸರ್ಕಾರ ಸಿದ್ಧ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗ ಪ್ರೆಸ್ಟ್ರಸ್ಟ್ ಬುಧವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.
ರಾಜ್ಯದ 6 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ಅವಧಿ ಜೂನ್, ಜುಲೈಗೆ ಮುಗಿಯುತ್ತವೆ. ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಚುನಾವಣೆ ನಡೆಸುವ ಕುರಿತು ರಾಜ್ಯ ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ಕೇಳಿದೆ. ಅವರ ಮಾಹಿತಿ ಆಧರಿಸಿ ಚುನಾವಣೆ ನಡೆಸಲು ಆದೇಶಿಸಿದರೆ ಸರ್ಕಾರ ಸಿದ್ಧವಿದೆ. ಒಂದು ವೇಳೆ ಚುನಾವಣೆ ಮುಂದೂಡಿದರೆ ಸಂಪುಟ ಸಭೆಯಲ್ಲಿ ಚರ್ಚಿಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಚುನಾವಣೆ ಮುಂದೂಡಿದರೆ ಈಗಿರುವ ಚುನಾಯಿತ ಸದಸ್ಯರ ಅವಧಿ ಆರು ತಿಂಗಳು ಮುಂದುವರಿಸಬಹುದು. ಆಡಳಿತಾಧಿಕಾರಿಗಳನ್ನು ನೇಮಿಸಬಹುದು. ಇಲ್ಲವೇ, ಚುನಾಯಿತ ಸದಸ್ಯರ ಮಾದರಿಯಲ್ಲಿ ನಾಮನಿರ್ದೇಶಿತ ಆಡಳಿತ ಸಮಿತಿ ರಚಿಸಬಹುದು. ಯಾವ ಆಯ್ಕೆ ಸೂಕ್ತ ಎನ್ನುವ ಕುರಿತು ಸಂಪುಟ ಸಭೆಯ ಬಳಿಕ ಪ್ರಕಟಿಸಲಾಗುವುದು ಎಂದು ವಿವರ ನೀಡಿದರು.
ನಾಮನಿರ್ದೇಶಿತ ಸಮಿತಿ ರಚಿಸುವಂತೆ ಯಾರ ಒತ್ತಡವೂ ಇಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಟೀಕಿಸುವ ನೈತಿಕತೆ ಇಲ್ಲ. ಹಿಂದೆ ನಗರಸಭೆ ಚುನಾಯಿತ ಪ್ರತಿನಿಧಿಗಳ ಅಧಿಕಾರ ರದ್ದು ಮಾಡಿ, ಪಕ್ಷದ ಕಾರ್ಯಕರ್ತರಿಗೆ ಅಧಿಕಾರದ ಬಳುವಳಿ ನೀಡುವ ಮೂಲಕ ಅವರು ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದ್ದರು. ಈಗ ಟೀಕಿಸುವುದರಲ್ಲಿ ಅರ್ಥವಿಲ್ಲ ಎಂದು ಕುಟುಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.