ADVERTISEMENT

ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪ್ರವೀಣ್‌ ಬಿಡುಗಡೆ: ಚರ್ಚಿಸಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 20:34 IST
Last Updated 10 ಆಗಸ್ಟ್ 2022, 20:34 IST
ಕೊಲೆ ಆರೋಪಿ ವಾಮಂಜೂರು ಪ್ರವೀಣ್‌ನನ್ನು ಜೈಲಿನಿಂದ ಬಿಡುಗಡೆ ಮಾಡಬಾರದು ಎಂದು ಆತನ ಕುಟುಂಬದವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು
ಕೊಲೆ ಆರೋಪಿ ವಾಮಂಜೂರು ಪ್ರವೀಣ್‌ನನ್ನು ಜೈಲಿನಿಂದ ಬಿಡುಗಡೆ ಮಾಡಬಾರದು ಎಂದು ಆತನ ಕುಟುಂಬದವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು   

ಬೆಂಗಳೂರು: ‘ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ವಾಮಂಜೂರಿನ ಪ್ರವೀಣ್‌ನನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡದಂತೆ ಆತನ ಮನೆಯವರು ಆಗ್ರಹಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

1994ರಲ್ಲಿ ವಾಮಂಜೂರಿನಲ್ಲಿ ತನ್ನ ನಾಲ್ವರು ಸಂಬಂಧಿಕರನ್ನು ಹತ್ಯೆ ಮಾಡಿದ್ದ ಪ್ರವೀಣ್‌ನನ್ನು ಯಾವುದೇ ಕಾರಣಕ್ಕೂ ಜೈಲಿನಿಂದ ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿ ಆತನ ಕುಟುಂಬದವರು ಸಚಿವರನ್ನು ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು. ಆತನಿಂದ ಮತ್ತೆ ಜೀವಭಯ ಇದೆ ಎಂದೂ ವಿವರಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಆರಗ, ‘ಪ್ರವೀಣ್‌ನಿಗೆ 14 ವರ್ಷದ ಹಿಂದೆ ಶಿಕ್ಷೆ ಆಗಿತ್ತು. ಮೊದಲು ಗಲ್ಲು ಶಿಕ್ಷೆಯನ್ನೂ ವಿಧಿಸಲಾಗಿತ್ತು. ಬಳಿಕ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆಯಾಗಿ ಬದಲಾವಣೆ ಮಾಡಿತ್ತು. ರಾಷ್ಟ್ರಪತಿಯವರು ಕೂಡಾ ಅದನ್ನು ಎತ್ತಿ ಹಿಡಿದಿದ್ದರು. ಆತನ ಹಿನ್ನೆಲೆ ಈಗ ನಮಗೆ ಗೊತ್ತಾಗಿದೆ’ ಎಂದರು.

ADVERTISEMENT

‘ಬೆಳಗಾವಿ ಜೈಲಿನಿಂದ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುವ ವೇಳೆ ಆತ ತಪ್ಪಿಸಿಕೊಂಡು ಹೋಗಿದ್ದ. ಗೋವಾದಲ್ಲಿ ಮದುವೆ, ಮಗು ಇದೆ ಎಂದು ಆತನ ಕುಟುಂಬವರು ಹೇಳುತ್ತಿದ್ದಾರೆ. ಇದೊಂದು ವಿಶೇಷ ಪ್ರಕರಣ. ಕಾನೂನಿನ ಪ್ರಕಾರ ಏನು ಮಾಡಲು ಸಾಧ್ಯವೋ ಅದನ್ನು ಮಾಡುತ್ತೇವೆ. ಕೊಲೆ, ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಬಿಡುಗಡೆ ಮಾಡಬಾರದೆಂದು ಸಚಿವ ಸಂಪುಟ ಸಭೆಯಲ್ಲಿ ನಿಯಮ ಮಾಡಿದ್ದೇವೆ. ಇನ್ನು ಮುಂದೆ ಇಂಥ ಪ್ರಕರಣಗಳಲ್ಲಿ ಬಿಡುಗಡೆಗೆ ಅವಕಾಶ ಇಲ್ಲ. ಸರ್ಕಾರದ ಈ ಹಿಂದಿನ ಆದೇಶದ ಪ್ರಕಾರ ಈತನ ಬಿಡುಗಡೆಗೆ ಪ್ರಸ್ತಾವ ಬಂದಿದೆ’ ಎಂದೂ ಸಚಿವರು ವಿವರಿಸಿದರು.

ಪುತ್ತೂರು ಶಾಸಕ ಸಂಜೀವ ಮಠಂದೂರು, ಸೀತಾರಾಮ ಗುರುಪುರ, ಪ್ರವೀಣ್ ಸಹೋದರ ಪ್ರದೀಪ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.