ADVERTISEMENT

ರೇವಾ ವಿ.ವಿ ಘಟಿಕೋತ್ಸವ: 3,800 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 20:17 IST
Last Updated 15 ಸೆಪ್ಟೆಂಬರ್ 2021, 20:17 IST
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವಿವಿಧ ವಿಭಾಗಗಳಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಚಿನ್ನದಪದಕ ಪ್ರದಾನ ಮಾಡಲಾಯಿತು. ಕೆ.ಕೆ.ಅಗರವಾಲ್, ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಪಿ.ಶ್ಯಾಮರಾಜು, ಕುಲಪತಿ ಡಾ.ಎಂ.ಧನಂಜಯ, ಕುಲಸಚಿವ ಡಾ.ಎನ್.ರಮೇಶ್, ಪರೀಕ್ಷಾ ನಿಯಂತ್ರಣ ವಿಭಾಗದ ಮುಖ್ಯಸ್ಥೆ ಡಾ.ಜಿ.ಬೀನಾ ಇದ್ದರು
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವಿವಿಧ ವಿಭಾಗಗಳಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಚಿನ್ನದಪದಕ ಪ್ರದಾನ ಮಾಡಲಾಯಿತು. ಕೆ.ಕೆ.ಅಗರವಾಲ್, ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಪಿ.ಶ್ಯಾಮರಾಜು, ಕುಲಪತಿ ಡಾ.ಎಂ.ಧನಂಜಯ, ಕುಲಸಚಿವ ಡಾ.ಎನ್.ರಮೇಶ್, ಪರೀಕ್ಷಾ ನಿಯಂತ್ರಣ ವಿಭಾಗದ ಮುಖ್ಯಸ್ಥೆ ಡಾ.ಜಿ.ಬೀನಾ ಇದ್ದರು   

ಯಲಹಂಕ: ರೇವಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ 6ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ವಿವಿಧ ವಿಷಯಗಳಲ್ಲಿ ಪದವಿಗಳನ್ನು ಪೂರ್ಣಗೊಳಿಸಿದ 3,800ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ 45 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ 31 ಮಂದಿಗೆ ಪಿಎಚ್‌.ಡಿ ಪದವಿಗಳನ್ನು ನೀಡಲಾಯಿತು.

ಈ ವೇಳೆ ಮಾತನಾಡಿದ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿಯ ಅಧ್ಯಕ್ಷ ಕೆ.ಕೆ.ಅಗರವಾಲ್, ‘ಶಿಕ್ಷಣಾರ್ಥಿಗಳಿಗೆ ಸರ್ವರೀತಿಯ ಶಿಕ್ಷಣ ಮತ್ತು ಜಾಗತಿಕಮಟ್ಟದಲ್ಲಿ ಕಾರ್ಯನಿರ್ವಹಿಸಲು ಅಗತ್ಯ ತಾಂತ್ರಿಕ ತರಬೇತಿ ನೀಡಬೇಕಾದುದು ಇಂದಿನ ಶಿಕ್ಷಣದ ಅವಶ್ಯಕತೆ. ಈ ನಿಟ್ಟಿನಲ್ಲಿ ರೇವಾ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಜಾಗತಿಕಮಟ್ಟದಲ್ಲಿ ಸೇವೆ ಸಲ್ಲಿಸಲು ಅಗತ್ಯ ಶೈಕ್ಷಣಿಕ ಸೌಲಭ್ಯಗಳನ್ನು ನೀಡುವ ಮೂಲಕ ಸಮರ್ಥರೀತಿಯಲ್ಲಿ ಸಜ್ಜುಗೊಳಿಸುತ್ತಿದೆ’ ಎಂದರು.

ADVERTISEMENT

ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿರುವುದಕ್ಕೆ ಪೂರಕವಾಗಿ ರೇವಾ ವಿಶ್ವವಿದ್ಯಾಲಯವು ಈಗಾಗಲೇ ಹಲವಾರು ಬಹುಶಿಸ್ತೀಯ ಕೋರ್ಸ್‌ಗಳನ್ನು ಆರಂಭಿಸಿದೆ. ಕೋವಿಡ್ ಪರಿಸ್ಥಿತಿಯಲ್ಲಿ ಆಹಾರ, ಆರೋಗ್ಯ ಹಾಗೂ ಪರಿಸರ ಸಂರಕ್ಷಣೆ ಮಹತ್ವದ ವಿಷಯಗಳಾಗಿದ್ದು, ಈ ನಿಟ್ಟಿನಲ್ಲೂ ಸಹ ಸಮರ್ಪಕ ರೀತಿಯಲ್ಲಿ ಕಾರ್ಯನಿರ್ವಹಿಸಿದೆ. ಎಲ್ಲ ವಿದ್ಯಾರ್ಥಿಗಳಿಗೂ ಎರಡು ಬಾರಿ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಿರುವ ವಿಶ್ವವಿದ್ಯಾಲಯದ ಕ್ರಮ ಶ್ಲಾಘನೀಯ’ ಎಂದರು.

ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಪಿ.ಶ್ಯಾಮರಾಜು ಮಾತನಾಡಿ, ‘ಹಲವು ವರ್ಷಗಳಿಂದ ನಮ್ಮಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಇಂದಿನ ಜಾಗತಿಕ ಸ್ಥಿತಿಗತಿಗೆ ಅಗತ್ಯವಿರುವ ಸಮಗ್ರ ಶಿಕ್ಷಣದ ಜೊತೆಗೆ ಸಾಮಾಜಿಕಸೇವೆ, ಪರಿಸರ ಕಾಳಜಿ, ಕಲೆ-ಸಂಸ್ಕೃತಿ ಹಾಗೂ ರಾಷ್ಟ್ರಪ್ರೇಮದಂತಹ ಉನ್ನತ ಮೌಲ್ಯಗಳನ್ನೂ ಕಲಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು.

ಕುಲಪತಿ ಡಾ.ಎಂ.ಧನಂಜಯ, ಕುಲಸಚಿವ ಡಾ.ಎನ್.ರಮೇಶ್, ಪರೀಕ್ಷಾ ನಿಯಂತ್ರಣ ವಿಭಾಗದ ಮುಖ್ಯಸ್ಥೆ ಡಾ.ಜಿ.ಬೀನಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.